×
Ad

‘ಮುಂದಿನ ಕ್ವಾಂಟಮ್ ಸಮ್ಮೇಳನ’; ವಿಶ್ವವಿಖ್ಯಾತ ಕ್ವಾಂಟಮ್ ವಿಜ್ಞಾನಿಗಳಿಗೆ ಸಚಿವ ಎನ್.ಎಸ್.ಭೋಸರಾಜು ಆಹ್ವಾನ

Update: 2025-10-19 20:32 IST

ಝ್ಯೂರಿಕ್/ಬೆಂಗಳೂರು, ಅ.19: ಸೂಪರ್‌ ಕಂಡಕ್ಟಿಂಗ್ ಕ್ಯೂಬಿಟ್ ಮತ್ತು ಟ್ರಾಪ್ಡ್ ಐಯಾನ್ ಸಿಸ್ಟಮ್ಸ್‌ ಗಳ ಕುರಿತ ಸಂಶೋಧನೆಯಲ್ಲಿ ಇಪ್ಪತ್ತು ವರ್ಷಗಳಿಂದ ಪ್ರವರ್ತಕರಾಗಿ ಗುರುತಿಸಿಕೊಂಡಿರುವಂತಹ, ಇಟಿಎಚ್ ಝ್ಯೂರಿಕ್ ಕ್ವಾಂಟಮ್ ಸೆಂಟರ್‌ ನ ನಿರ್ದೇಶಕ ವಿಶ್ವವಿಖ್ಯಾತ ಕ್ವಾಂಟಮ್ ವಿಜ್ಞಾನಿ ಪ್ರೊ.ಆಂಡ್ರಿಯಾಸ್ ವಾಲ್ರಾಫ್ ಹಾಗೂ ಪ್ರೊ.ಜೊನಾಥನ್ ಹೋಮ್ ಮತ್ತು ಪ್ರೊ.ಕ್ಲಾಸ್ ಎನ್ಸ್‍ಸ್ಲಿನ್ ಅವರನ್ನು ಮುಂದಿನ ಕ್ವಾಂಟಮ್ ಇಂಡಿಯಾ ಸಮ್ಮೇಳನದಲ್ಲಿ ಭಾಗವಹಿಸುವಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಆಹ್ವಾನಿಸಿದ್ದಾರೆ.

ವಿಶ್ವದ ಅಗ್ರಗಣ್ಯ ವಿಜ್ಞಾನ ಸಂಸ್ಥೆಯಾದ ಇಟಿಎಚ್ ಝ್ಯೂರಿಕ್‍ನ ಕ್ವಾಂಟಮ್ ಸೆಂಟರ್‍ಗೆ ಭೇಟಿ ನೀಡಿದ ಅವರು, ಕ್ವಾಂಟಮ್ ಕ್ಷೇತ್ರದಲ್ಲಿ ಆಗಿರುವಂತಹ ಸಂಶೋಧನೆಗಳ ಬಗ್ಗೆ ವಿಸ್ತೃತ ಮಾಹಿತಿ ಪಡೆದುಕೊಂಡರು.

ಇಟಿಎಚ್ ಝ್ಯೂರಿಕ್ ಕೇಂದ್ರವು ಆಧುನಿಕ ಕ್ವಾಂಟಮ್ ಕಂಪ್ಯೂಟಿಂಗ್‍ನ ಜನ್ಮಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಸಂಶೋಧನೆಯಿಂದಲೆ ಕ್ವಾಂಟಮ್ ವಿಜ್ಞಾನವು ಸೈದ್ಧಾಂತಿಕ ಹಂತದಿಂದ ನಿಜವಾದ ತಂತ್ರಜ್ಞಾನ ಹಂತಕ್ಕೆ ತಲುಪಿದೆ. ಕರ್ನಾಟಕ ರಾಜ್ಯದಲ್ಲಿ ಉದಯವಾಗುತ್ತಿರುವ ಕ್ವಾಂಟಮ್ ಪರಿಸರವನ್ನು ಇಂತಹ ವಿಶ್ವದರ್ಜೆಯ ಪರಿಣಿತರೊಂದಿಗೆ ಸಂಪರ್ಕಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಭೋಸರಾಜು ಹೇಳಿದರು.

ಕರ್ನಾಟಕ ತಂಡವು ಸೂಪರ್‌ ಕಂಡಕ್ಟಿಂಗ್ ಕ್ಯೂಬಿಟ್ ಲ್ಯಾಬ್ ಮತ್ತು ಟ್ರಾಪ್ಡ್ ಐಯಾನ್ ಲ್ಯಾಬ್‍ಗಳಿಗೆ ಭೇಟಿ ನೀಡಿ, ಸ್ವಿಟ್ಜಲ್ಯಾಂಡ್‌ ನಾದ್ಯಂತ ಸಂಶೋಧನಾ ಸಹಭಾಗಿತ್ವವನ್ನು ಇಟಿಎಚ್ ಕ್ವಾಂಟಮ್ ಸೆಂಟರ್ ಹೇಗೆ ಒಂದು ಮಾದರಿಯಾಗಿ ಸಮನ್ವಯಗೊಳಿಸುತ್ತಿದೆ ಎಂಬುದನ್ನು ತಿಳಿದುಕೊಂಡಿತು. ಇಟಿಎಚ್ ನ ಈ ಮಾದರಿಯನ್ನು ಅನುಸರಿಸಿ ಕರ್ನಾಟಕ ಸರಕಾರವು ಬೆಂಗಳೂರಿನ ಕ್ಯೂ-ಸಿಟಿಯಲ್ಲಿ ಸಂಶೋಧನೆ ಮತ್ತು ನವೋತ್ಪಾದನೆಯ ಸಂಯೋಜಿತ ವೇದಿಕೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಇಟಿಎಚ್ ತಂಡವು, ತಮ್ಮ ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಯಾದ ತಂತ್ರಜ್ಞಾನಗಳು ಹೇಗೆ ಯಶಸ್ವಿ ಕ್ವಾಂಟಮ್ ನವೋದ್ಯಮಗಳಾಗಿ ಬೆಳೆದಿವೆ ಎಂಬುದನ್ನು ಪ್ರದರ್ಶಿಸಿತು. ತಂಡವು ಝ್ಯೂರಿಕ್ ಇನ್ಸ್‍ಟ್ರುಮೆಂಟ್ಸ್ ನಂತಹ ಕಂಪನಿಗೆ ಭೇಟಿ ನೀಡಿತು. ಈ ಕಂಪನಿ ವಿಶ್ವದಾದ್ಯಂತ, ಭಾರತ ಸೇರಿದಂತೆ, ಕ್ವಾಂಟಮ್ ಕಂಪ್ಯೂಟರ್‍ಗಳಿಗಾಗಿ ಅಂಪ್ಲಿಫೈಯರ್‍ಗಳು ಮತ್ತು ಸಿಗ್ನಲ್ ಸಿಸ್ಟಮ್‍ಗಳು ತಯಾರಿಸುತ್ತಿದೆ ಎಂದು ಭೋಸರಾಜು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News