×
Ad

ರೈಲ್ವೇ ಇಲಾಖೆಯಿಂದ ದಲಿತ ಕುಟುಂಬಗಳ ಮನೆ ನೆಲಸಮ; ರಾಜ್ಯ ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

Update: 2025-11-25 23:41 IST

ಬೆಂಗಳೂರು : ಬಿಡಿಎ ಅಭಿವೃದ್ದಿಪಡಿಸಿ ಜಾಗ ಹಂಚಿಕೆ ಮಾಡಿದ ಬಡಾವಣೆಯಲ್ಲಿ ಬಿಬಿಎಂಪಿ ಮಂಜೂರು ಮಾಡಿದ ಹಣದಲ್ಲಿ ಕಟ್ಟಿಕೊಂಡಿದ್ದ ದಲಿತ ಕುಟುಂಬಗಳ 29 ಮನೆಗಳನ್ನು ನೆಲಸಮಗೊಳಿಸಿರುವ ರೈಲ್ವೇ ಇಲಾಖೆಯ ಕ್ರಮ ಪ್ರಶ್ನಿಸಿ ಸಂತ್ರಸ್ತ ಕುಟುಂಬಗಳು ಹೈಕೋರ್ಟ್ ಮೆಟ್ಟಿಲೇರಿವೆ.

ಕೆ.ಜಿ. ಹಳ್ಳಿಯ ಎಚ್‌ಬಿಆರ್ 1ನೇ ಹಂತ ವಾರ್ಡ್ ನಂಬರ್ 23ರಲ್ಲಿನ ಸರ್ವೆ ನಂಬರ್ 71ರಲ್ಲಿ ನಿರ್ಮಿಸಲಾಗಿದ್ದ ಮನೆ ಕಳೆದುಕೊಂಡಿರುವ ಯು. ರಾಣಿ ಸೇರಿ 14 ಮಂದಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ವಾದ ಮಂಡಿಸಿ, ಬಿಡಿಎ 1985ರಲ್ಲಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. 2015-16ರಲ್ಲಿ ಬಿಬಿಎಂಪಿ ಮನೆ ಕಟ್ಟಿಸಿಕೊಳ್ಳಲು ಪ್ರತಿ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಸಾಲ ಸಹಾಯಧನ ನೀಡಿತ್ತು. ಎಸ್ಸಿ-ಎಸ್ಟಿ ಕುಟುಂಬಗಳು ಅಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಅವರಿಗೆ ಬಿಬಿಎಂಪಿ ವತಿಯಿಂದ ಮೂಲಸೌಕರ್ಯಗಳನ್ನೂ ಕೊಡಲಾಗಿದ್ದು, ಹಕ್ಕುಪತ್ರಗಳನ್ನೂ ವಿತರಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಆದರೆ, ರೈಲ್ವೇ ಇಲಾಖೆ ಯಾವುದೇ ನೋಟಿಸ್ ನೀಡದೆ ಅಕ್ಟೋಬರ್ 31ರಂದು ಏಕಾಏಕಿ ಬುಲ್ಡೋಜರ್‌ನಿಂದ 29 ಮನೆಗಳನ್ನು ಧ್ವಂಸಗೊಳಿಸಿದೆ. ಇದರಿಂದ, ನೂರಾರು ದಲಿತ ಕುಟುಂಬಗಳ ಬೀದಿಪಾಲಾಗಿದ್ದು, ಸದ್ಯ ಅವರೆಲ್ಲ ಸ್ಥಳೀಯ ಲಿಡ್ಕರ್ ಭವನದಲ್ಲಿ ನವೆಂಬರ್ 30ರವರೆಗೆ ತಾತ್ಕಾಲಿಕವಾಗಿ ಆಶ್ರಯ ಪಡೆದುಕೊಂಡಿದ್ದಾರೆ. ವಿವಾದ ಇತ್ಯರ್ಥವಾಗುವ ತನಕ ಹೆಚ್ಚುವರಿಯಾಗಿ 30 ದಿನಗಳ ಕಾಲ ಆಶ್ರಯ ಒದಗಿಸಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ, ರೈಲ್ವೇ ಇಲಾಖೆ, ಬಿಬಿಎಂಪಿ, ಬಿಡಿಎ, ಕೊಳಗೇರಿ ಮಂಡಳಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅಲ್ಲದೇ ಸಂತ್ರಸ್ತ ಕುಟುಂಬಗಳಿಗೆ ನವೆಂಬರ್ 30ರ ನಂತರ ಹೆಚ್ಚುವರಿಯಾಗಿ 30 ದಿನಗಳ ತಾತ್ಕಾಲಿಕ ಆಶ್ರಯ ನೀಡುವ ಬಗ್ಗೆ ನಿಲುವು ತಿಳಿಸುವಂತೆ ಬಿಬಿಬಿಎಂಪಿ ಹಾಗೂ ಇತರರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 26ಕ್ಕೆ (ಬುಧವಾರ) ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News