×
Ad

ಪಿಎಸ್ಸೈ ನೇಮಕಾತಿ ಹಗರಣ; ಅಮೃತ್ ಪೌಲ್ ವಿರುದ್ಧ ಇಲಾಖಾ ತನಿಖೆಗೆೆ ಡಿಪಿಎಆರ್ ಕ್ರಮ

Update: 2026-07-11 23:42 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ 545 ಪಿಎಸ್ಸೈ ನೇಮಕಾತಿ ಹಗರಣದ ಪ್ರಮುಖ ಆರೋಪಿಯಾಗಿರುವ ಹಾಗೂ ಅಮಾನತು ಆಗಿರುವ ಎಡಿಜಿಪಿ ಅಮೃತ್ ಪೌಲ್ ವಿರುದ್ಧ ಇಲಾಖಾ ತನಿಖೆ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕ್ರಮ ಕೈಗೊಂಡಿದೆ.

ಹಗರಣ ನಡೆದ ಅವಧಿಯಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ವಿರುದ್ಧ 2022ರಲ್ಲೇ ಸಿಐಡಿ ಎಸ್‌ಐಟಿ ಪೊಲೀಸರು 1,406 ಪುಟಗಳ ದೋಷರೋಪ ಪಟ್ಟಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಿದ್ದರು. ಚಾರ್ಜ್‌ಶೀಟ್ ಸಲ್ಲಿಕೆಯಾಗಿ 4 ವರ್ಷ ಕಳೆದಿದ್ದರೂ ಇಲಾಖಾ ವಿಚಾರಣೆ ನಡೆದಿರಲಿಲ್ಲ. ಈಗ ಇಲಾಖಾ ವಿಚಾರಣೆಯ ಅನುಮತಿ ದೊರೆತಿದೆ.

ತನಿಖಾ ಸಂಸ್ಥೆ ನೀಡಿದ್ದ ವರದಿ ಹಾಗೂ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ತಮ್ಮ ಮೇಲಿನ ಆರೋಪಗಳಿಗೆ ವಿವರಣೆ ನೀಡುವಂತೆ ಡಿಪಿಎಆರ್ ಇಲಾಖೆಯು ಅಮೃತ್ ಪೌಲ್‌ಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿದೆ. ಆರಂಭದಲ್ಲಿ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಹಾಗೂ ಉತ್ತರ ಕರ್ನಾಟಕದ ಎರಡು ಠಾಣೆಗಳಲ್ಲಿ ದಾಖಲಾಗಿದ್ದ ಈ ಪ್ರಕರಣ, ನಂತರ ಸಿಐಡಿ ಎಸ್‌ಐಟಿಗೆ ವರ್ಗಾವಣೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News