×
Ad

ಗ್ರಾಮ ಆಡಳಿತಾಧಿಕಾರಿ ನೇಮಕಾತಿ; ಕಲ್ಯಾಣ ಕರ್ನಾಟಕ ವೃಂದಕ್ಕೆ ಸ್ಪರ್ಧಾತ್ಮಕ ಪರೀಕ್ಷೆ

Update: 2026-07-11 18:30 IST

ಬೆಂಗಳೂರ : ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿನ ಗ್ರೂಪ್ ‘ಸಿ’ ವೃಂದದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದೆ.

ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಕಲಬುರಗಿ ಜಿಲ್ಲೆಯಲ್ಲಿ 40 ಹುದ್ದೆಗಳು, ಬೀದರ್‌ ನಲ್ಲಿ 17 ಹುದ್ದೆಗಳು, ಮತ್ತು ರಾಯಚೂರಿನಲ್ಲಿ 10 ಹುದ್ದೆಗಳು ಖಾಲಿ ಇದ್ದು, ಒಟ್ಟು 67 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುತ್ತದೆ.

ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸರಕಾರದ ಸುತ್ತೋಲೆ ಪ್ರಕಾರ, ಸಿಬಿಎಸ್‍ಇ, ಐಸಿಎಸ್‍ಸಿ, ಇತರೆ ರಾಜ್ಯ ಮಂಡಳಿಗಳ ಕ್ಲಾಸ್ 12 ಪರೀಕ್ಷೆಗಳು, ನ್ಯಾಷನಲ್ ಓಪನ್ ಸ್ಕೂಲಿಂಗ್ (ಎನ್‍ಐಒಎಸ್) ನಡೆಸುವ ಎಚ್‍ಎಸ್‍ಸಿ ಕೋರ್ಸ್‍ಗಳು ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲಾಗಿದೆ. ಜೊತೆಗೆ ಜೆಓಸಿ ವೃತ್ತಿ ಶಿಕ್ಷಣ ಕೋರ್ಸ್‍ಗಳು ಪಿಯುಸಿಗೆ ಸಮಾನವೆಂದು ಪರಿಗಣಿಸಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜು.11ರಿಂದ ಆರಂಭವಾಗಿ ಜು.30ರ ವರೆಗೆ ನಡೆಯಲಿದ್ದು, ಶುಲ್ಕ ಪಾವತಿಗೆ ಕೊನೆಯ ದಿನ ಜು.31 ಎಂದು ನಿಗದಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಅ.25ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಬೆಳಗ್ಗೆ 10.30ರಿಂದ 12.30ರ ವರೆಗೆ ಮತ್ತು ಮಧ್ಯಾಹ್ನ 2.30ರಿಂದ 4.30ರ ವರೆಗೆ. ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷವಾಗಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಪರೀಕ್ಷಾ ಶುಲ್ಕ ಸಾಮಾನ್ಯ ವರ್ಗದವರಿಗೆ 750 ರೂ., ಮೀಸಲಾತಿ ವರ್ಗದವರಿಗೆ 500 ರೂ. ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 250 ರೂ.ಎಂದು ನಿಗದಿಯಾಗಿದೆ. ಪರೀಕ್ಷೆ ಎರಡು ಪತ್ರಿಕೆಗಳಲ್ಲಿ ನಡೆಯಲಿದೆ. ಪತ್ರಿಕೆ 1ರಲ್ಲಿ ಸಾಮಾನ್ಯ ಜ್ಞಾನ, ಕರ್ನಾಟಕದ ಇತಿಹಾಸ, ಭೂಗೋಳ, ಆಡಳಿತ ವ್ಯವಸ್ಥೆ, ಸಂವಿಧಾನ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯಗಳು ಇರಲಿವೆ. ಪತ್ರಿಕೆ 2 ಕನ್ನಡ ಮತ್ತು ಇಂಗ್ಲಿಷ್‌ ಭಾಷಾ ಪೇಪರ್ ಆಗಿರಲಿದೆ. ಪ್ರತಿ ಪತ್ರಿಕೆಗೆ 100 ಅಂಕಗಳು, 2 ಗಂಟೆಗಳ ಅವಧಿ. ತಪ್ಪು ಉತ್ತರಕ್ಕೆ 0.25 ಅಂಕ ಕಡಿತವಾಗಲಿದೆ.

ಅಭ್ಯರ್ಥಿಗಳಿಗೆ ಸರಕಾರದ ಮೀಸಲಾತಿ ನೀತಿಯಂತೆ ವರ್ಗವಾರು ಮೀಸಲಾತಿ ಅನ್ವಯವಾಗುತ್ತದೆ. ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಎಸ್‍ಸಿ, ಎಸ್‍ಟಿ, ಮಹಿಳಾ ಅಭ್ಯರ್ಥಿಗಳು, ಗ್ರಾಮೀಣ ಅಭ್ಯರ್ಥಿಗಳು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳು, ಟ್ರಾನ್ಸ್‌ ಜೆಂಡರ್ ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಮೀಸಲಾತಿ ಅನ್ವಯವಾಗಲಿದೆ.

ಅಂಗವಿಕಲ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಹಾಗೂ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‍ಸೈಟ್ ಮೂಲಕ ಮಾತ್ರ ಸಾಧ್ಯ. ಅರ್ಜಿ ಸಲ್ಲಿಸುವಾಗ ಪಿ.ಯು.ಸಿ ಪ್ರಮಾಣಪತ್ರ, ಜನ್ಮದಿನಾಂಕದ ದಾಖಲೆ, ಮೀಸಲಾತಿ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿ ಸಲ್ಲಿಸಬೇಕಾಗುತ್ತದೆ.

ಪರೀಕ್ಷಾ ಕೇಂದ್ರಗಳು ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಇರಲಿದ್ದು, ಅಭ್ಯರ್ಥಿಗಳು ತಮ್ಮ ಆಯ್ಕೆಯ ಕೇಂದ್ರವನ್ನು ಅರ್ಜಿಯಲ್ಲಿ ಸೂಚಿಸಬಹುದು. ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಲ್ಲಿ ನೇಮಕಾತಿ ನೀಡಲಾಗುತ್ತದೆ.

ಈ ನೇಮಕಾತಿ ಕ್ರಮದಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಯುವಕರಿಗೆ ಸರಕಾರಿ ಸೇವೆಯಲ್ಲಿ ಅವಕಾಶ ದೊರೆಯಲಿದ್ದು, ಗ್ರಾಮೀಣ ಆಡಳಿತ ವ್ಯವಸ್ಥೆಯಲ್ಲಿ ಹೊಸ ಶಕ್ತಿಯು ಸೇರ್ಪಡೆಯಾಗಲಿದೆ ಎಂದು ತಿಳಿಸಲಾಗಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News