ಹೈಕೋರ್ಟ್ ಸಲಹೆಯಂತೆ ನಡೆದ ಶಾಂತಿಸಭೆ | ಚಿತ್ತಾಪುರದಲ್ಲಿ ನ.13 ಅಥವಾ 16ರಂದು ಪಥಸಂಚಲನಕ್ಕೆ ಅನುಮತಿಗೆ ಆರೆಸ್ಸೆಸ್ ಮನವಿ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನ.13 ಅಥವಾ 16ರಂದು ಪಥಸಂಚಲನಕ್ಕೆ ಅನುಮತಿ ನೀಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್ ) ರಾಜ್ಯ ಸರಕಾರದ ಮುಂದೆ ಬುಧವಾರ ಪ್ರಸ್ತಾವ ಮುಂದಿಟ್ಟಿದೆ.
ಪಥಸಂಚನಲಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ ಕಲಬುರಗಿ ಪೀಠದ ಸಲಹೆಯಂತೆ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಬುಧವಾರ ಸಂಜೆ ಶಾಂತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಆರೆಸ್ಸೆಸ್ ಸಂಘಟನೆಯ ಪರ ವಕೀಲರು ಈ ಪ್ರಸ್ತಾವ ಮಂಡಿಸಿದ್ದು, ಇದೀಗ ಸರಕಾರ ಅನುಮತಿ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ಶಾಂತಿಸಭೆಯಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಸರಕಾರ ನ.7ರಂದು ಹೈಕೋರ್ಟ್ ಗೆ ವರದಿ ಸಲ್ಲಿಸಲಿದೆ. ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಜಿಲ್ಲಾಡಳಿತದ ಅಧಿಕಾರಿಗಳು, ಮೂಲ ರಿಟ್ ಅರ್ಜಿದಾರ ಆರೆಸ್ಸೆಸ್ ಕಲಬುರಗಿ ಜಿಲ್ಲಾ ಸಮನ್ವಯಕಾರ ಅಶೋಕ್ ಪಾಟೀಲ್, ಹಿರಿಯ ವಕೀಲ ಅರುಣ್ ಶ್ಯಾಮ್, ಕಡ್ಲೂರ್ ಸತ್ಯನಾರಾಯಣಾಚಾರ್ಯ ಮತ್ತಿತರರು ಭಾಗವಹಿಸಿದ್ದರು.
ಆರೆಸ್ಸೆಸ್ ಪ್ರಸ್ತಾವ: ಉದ್ದೇಶಿತ ಆರೆಸ್ಸೆಸ್ ಪಥಸಂಚಲನವನ್ನು ನ.13 ಅಥವಾ ನ.16ರಂದು ನಡೆಸಲು ಅನುಮತಿ ನೀಡಬೇಕು. ಅಂದು ಬೇರೆ ಯಾವುದೇ ಸಂಘಟನೆಗಳಿಗೆ ಅನುಮತಿ ನೀಡಬಾರದು. ಬೇರೆ ಸಂಘಟನೆಗಳು ಅನುಮತಿ ಕೋರಿದ್ದರೆ ಅವುಗಳಿಗೆ ಬೇರೊಂದು ದಿನ ನಿಗದಿಪಡಿಸಬೇಕು. ಚಿತ್ತಾಪುರ ತಾಲೂಕಿನ 850 ಗಣವೇಷಧಾರಿಗಳು ಮಾತ್ರ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ. ಬೇರೆ ತಾಲೂಕು ಹಾಗೂ ಜಿಲ್ಲೆಗಳಿಂದ ಕಾರ್ಯಕರ್ತರು ಪಥಸಂಚಲನದಲ್ಲಿ ಭಾಗವಹಿಸಲು ಆಸಕ್ತಿ ತೋರುತ್ತಿದ್ದರೂ ಅದಕ್ಕೆ ಅವಕಾಶ ನೀಡುತ್ತಿಲ್ಲ. ಸಂಜೆ 3 ರಿಂದ 6:30ರವರೆಗೆ ಸುಮಾರು 3.1 ಕಿ.ಮೀ. ಪಥಸಂಚಲನ ನಡೆಯಲಿದೆ. ಆದ್ದರಿಂದ, ಪಥಸಂಚಲನಕ್ಕೆ ಅನುಮತಿ ನೀಡಬೇಕು ಎಂದು ಆರೆಸ್ಸೆಸ್ ಪ್ರಸ್ತಾವ ಸಲ್ಲಿಸಿದೆ. ಪಥಸಂಚಲನವನ್ನು ಸುಸೂತ್ರವಾಗಿ ನಡೆಸಲು ಸರಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಆರೆಸ್ಸೆಸ್ ತಿಳಿಸಿದೆ.