ಬೆಂಗಳೂರು : ಆ.8 ರಿಂದ ಗ್ರೀನ್ ಪಾತ್ನಲ್ಲಿ 3 ದಿನಗಳ ಯುವಸಂತೆ
ಬೆಂಗಳೂರು: ಸಂವಾದ - ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಸಂಸ್ಥೆಯು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ದಿ ಗ್ರೀನ್ ಪಾತ್ ಆರ್ಗ್ಯಾನಿಕ್ ರೆಸ್ಟೋರಂಟ್ ಸಹಯೋಗದಲ್ಲಿ ಮೂರು ದಿನಗಳ ‘ಯುವಸಂತೆ’ಯನ್ನು ಆಯೋಜಿಸಲಾಗಿದೆ.
ಆಗಸ್ಟ್ 8, ಶುಕ್ರವಾರ, ಸಂಜೆ 4 ಗಂಟೆಗೆ ಹಿರಿಯ ಸಾಹಿತಿ ಎಸ್. ಜಿ. ಸಿದ್ದರಾಮಯ್ಯ ಅವರು 'ಯುವ ಸಂತೆ' ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಆಗಸ್ಟ್ 8ರಿಂದ 10ರವರೆಗೆ ‘ಯುವ ಸಂತೆ - ವಿಶಮುಕ್ತ ಆಹಾರದಿಂದ ಸ್ವಾತಂತ್ರ್ಯ' ಎನ್ನುವ ವಿಷಯದಡಿ ಪರಿಸರಕ್ಕೆ ಪೂರಕವಾದ ಮತ್ತು ವಿಷಮುಕ್ತ ಆಹಾರೋತ್ಪಾದನೆ ಮತ್ತು ಉದ್ಯಮದಲ್ಲಿ ತೊಡಗಿರುವ, ಸಂವಾದ ಬದುಕು ಸಂಸ್ಥೆಯಲ್ಲಿ ತರಬೇತಿ ಪಡೆದ ಯುವಜನರು 'ಗ್ರೀನ್ ಪಾತ್ ಆರ್ಗಾನಿಕ್ ರೆಸ್ಟೋರೆಂಟ್'ನಲ್ಲಿ ಮಳಿಗೆಗಳನ್ನು ತೆರೆಯಲಿದ್ದಾರೆ.
ಈ ಮಳಿಗೆಗಳಲ್ಲಿ ಪರಿಸರ ಸ್ನೇಹಿ ಜೀವನಶೈಲಿಯ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ವಿಶಮುಕ್ತ ಆಹಾರ ಪದಾರ್ಥಗಳು, ಗೃಹೋತ್ಪನ್ನ ಮನೆ ಬಳಕೆಯ ವಸ್ತುಗಳು ಮಾರಾಟವಾಗಲಿವೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಭುವನೇಶ್ವರಿ (ಮುಖ್ಯಸ್ಥರು, ಒಡಲದನಿ ಮಹಿಳಾ ಒಕ್ಕೂಟ), ಜನಪ್ರಿಯ ಗಾಯಕ ವಾಸು ದೀಕ್ಷಿತ್, ಗ್ರೀನ್ ಪಾತ್ ಸಂಸ್ಥಾಪಕ ಎಚ್. ಆರ್. ಜಯರಾಮ್ ಮತ್ತು ಸಂವಾದ ಸಹ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಸವಿತಾ ಸುರೇಶ್ ಬಾಬು ಪಾಲ್ಗೊಳ್ಳಲಿದ್ದಾರೆ. ಬೇರು ಬೆವರು ಕಲಾ ಬಳಗದಿಂದ ‘ಹಸಿರು ಪದ’ ಮತ್ತು ಮೇಘನಾ ಅವರಿಂದ ‘ಅರಿವಿನ ಹಾಡುಗಳು’ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಹಸಿರು ಚಿತ್ರಕಲಾ ಸ್ಪರ್ಧೆ
ಆಗಸ್ಟ್ 9, ಶನಿವಾರ, ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ 'ಹಸಿರು ಚಿತ್ರಕಲಾ ಸ್ಪರ್ಧೆ' ಆಯೋಜಿಸಲಾಗಿದೆ. ‘ನಾವು ಮತ್ತು ಪರಿಸರ’, ‘ಸುಸ್ಥಿರ ಪರಿಸರ - ನಮ್ಮ ಜವಾಬ್ದಾರಿ’ ಎಂಬ ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಎರಡು ವಿಭಾಗಗಳಿದ್ದು, 5 ರಿಂದ 14 ವರ್ಷದ ಮಕ್ಕಳಿಗೆ ಒಂದು ವಿಭಾಗ ಮತ್ತು 15 ರಿಂದ 22 ವರ್ಷದ ಯುವಜನರಿಗೆ ಮತ್ತೊಂದು ವಿಭಾಗವಿದೆ.
ಚಿತ್ರಕಲೆಗೆ ಬೇಕಾದ ಸಾಮಗ್ರಿಗಳನ್ನು ಸ್ಪರ್ಧಾರ್ಥಿಗಳೇ ತರಬೇಕು. ಸಾಧ್ಯವಾದಷ್ಟೂ ಪರಿಸರಸ್ನೇಹಿ ಬಣ್ಣಗಳನ್ನೇ ತರಲು ಮನವಿ ಮಾಡಲಾಗಿದೆ. ವಿಜೇತರಿಗೆ ಆಗಸ್ಟ್ 10, ಭಾನುವಾರದಂದು ಬಹುಮಾನ ವಿತರಣೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 73378 35677 ಯನ್ನು ಸಂಪರ್ಕಿಸಲು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.