Bengaluru | ಮನೆಗಳ ಭೋಗ್ಯಕ್ಕೆ ಪಡೆಯಲು ಬಯಸುವವರ ಗುರಿಯಾಗಿಸಿಕೊಂಡು ಕೋಟ್ಯಂತರ ರೂ.ವಂಚನೆ: ಆರೋಪಿ ಪರಾರಿ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮನೆಗಳನ್ನು ಭೋಗ್ಯಕ್ಕೆ ಪಡೆಯಲು ಬಯಸುವವರನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂ.ಗೂ ಹೆಚ್ಚಿನ ಹಣ ವಂಚಿಸಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಜಾನ್ಸ್ ಅಸೆಟ್ ಎಂಬ ಹೆಸರಿನ ಮಧ್ಯವರ್ತಿ ಕಂಪೆನಿಯ ವಿರುದ್ಧ 300ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಆರೋಪ ಕೇಳಿಬಂದಿದ್ದು, ಅದರ ಮಾಲಕ ಸ್ಟೀಫನ್ ಜಾನ್ ವಿರುದ್ಧ ವಂಚನೆಗೊಳಗಾದವರು ನೀಡಿರುವ ದೂರಿನ ಮೇರೆಗೆ ಇಂದಿರಾನಗರ ಠಾಣೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಂಚನೆ ಹೇಗೆ?: ಬೆಂಗಳೂರಿನಲ್ಲಿ ವಾಸಿಸಲು ಭೋಗ್ಯಕ್ಕೆ ಮನೆಗಳ ಕೊರತೆ ಇರುವುದನ್ನು ಬಂಡವಾಳ ಮಾಡಿಕೊಂಡ ಕಂಪೆನಿ, ‘ಲೀಸ್ ಹಣವನ್ನು ತಮ್ಮಲ್ಲಿ ಹೂಡಿಕೆ ಮಾಡಿದರೆ ನಾವು ನಿಮಗಾಗಿ ಮನೆ ಹುಡುಕಿ ಅದರ ಮಾಸಿಕ ಬಾಡಿಗೆಯನ್ನು ತಾವೇ ಪಾವತಿ ಮಾಡುವುದಾಗಿ’ ನಂಬಿಸುತ್ತಿತ್ತು. ಸಾಕಷ್ಟು ಜನ ಭೋಗ್ಯಕ್ಕೆ ನೀಡುವ ಹಣವನ್ನು ಕಂಪೆನಿಯಲ್ಲಿ ಹೂಡಿಕೆ ಮಾಡಿದಂತಾಗುತ್ತದೆ ಎಂದು ನಂಬಿದ್ದರು. ಒಬ್ಬೊಬ್ಬರಿಂದ ತಲಾ 10 ರಿಂದ 75 ಲಕ್ಷದವರೆಗೂ ಈ ಕಂಪೆನಿ ಹಣ ಪಡೆಯುತ್ತಿತ್ತು. ಆರಂಭದಲ್ಲಿ ಕೆಲವು ತಿಂಗಳುಗಳ ಕಾಲ ಬಾಡಿಗೆ ಪಾವತಿಸುತ್ತಿದ್ದ ಕಂಪೆನಿ ನಂತರ ಬಾಡಿಗೆ ಪಾವತಿಸದೆ ನಿರ್ಲಕ್ಷ್ಯ ಮಾಡುತ್ತಿತ್ತು ಎಂದು ಆರೋಪ ಕೇಳಿಬಂದಿದೆ.
ತಾವು ಕಂಪೆನಿಗೆ 37 ಲಕ್ಷ ರೂ. ನೀಡಿದ್ದೇವೆ. ಆದರೆ, ತಮ್ಮ ಮನೆ ಬಾಡಿಗೆ ಹಣ ಪಾವತಿಸಿರಲಿಲ್ಲ. ಮಾಲಕರು ಮನೆ ಖಾಲಿ ಮಾಡಲು ಹೇಳಿದಾಗ ತಮ್ಮ ಹಣ ವಾಪಸ್ ಕೇಳಲು ಕಂಪೆನಿಯ ಬಳಿ ಹೋಗಿದ್ದೆವು. ಈ ವೇಳೆ ಹಣ ನೀಡಲು ನಿರಾಕರಿಸಿದ್ದ ಕಂಪೆನಿಯವರು ಅದೇ ಮೊತ್ತಕ್ಕೆ ತಿಂಗಳಿಗೆ ಶೇ.4ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿತ್ತು. ಅದನ್ನು ನಂಬಿ ತಮ್ಮ ಹಣವನ್ನು ಹೂಡಿಕೆ ಮಾಡಿದ್ದೆವು. ಬಳಿಕ ಕೇವಲ ಎರಡು ತಿಂಗಳು ಹಣ ನೀಡಿದ್ದ ಕಂಪೆನಿ ನಂತರ ವಂಚನೆ ಮಾಡಿದೆ ಎಂದು ವಂಚನೆಗೊಳಗಾದವರು ಆರೋಪಿಸಿದ್ದಾರೆ.
ಸದ್ಯ ಕಂಪೆ ಮಾಲಕ ಸ್ಟೀಫನ್ ಜಾನ್ ನಾಪತ್ತೆಯಾಗಿದ್ದು, ಆರೋಪಿ ಈ ಹಿಂದೆ ಕೂಡ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದರು ಎಂಬುದು ಗೊತ್ತಾಗಿದೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.