ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರಕಾರದ ನಡೆ ಪರಿಷತ್ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬಸವರಾಜ ಬೊಮ್ಮಾಯಿ

Update: 2026-08-07 15:17 IST

ಬೆಂಗಳೂರು: ದೇಶದಲ್ಲೇ ಅತ್ಯಂತ ಹಿರಿಯ ವಿಧಾನ ಪರಿಷತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಸರ್ಕಾರ ನಡೆದುಕೊಂಡಿರುವ ರೀತಿ ಯಾವುದೇ ಸತ್ಸಂಪ್ರದಾಯಕ್ಕೆ ಅನುಗುಣವಾಗಿಲ್ಲ. ಇದು ಸಭಾಪತಿ ಸ್ಥಾನದ ಗೌರವಕ್ಕೆ ಹಾಗೂ ಸಂವಿಧಾನಕ್ಕೆ ಎಸಗಿದ ಅಪಮಾನ. ಕರ್ನಾಟಕ ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಕೆಟ್ಟ ನಡವಳಿಕೆ ಹಾಗೂ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಸವರಾಜ ಹೊರಟ್ಟಿ ಸುದೀರ್ಘ 46 ವರ್ಷಗಳ ಕಾಲ ಯಾವುದೇ ಬಿಡುವಿಲ್ಲದೆ ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಹಾಗೂ ಸಭಾಪತಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ಪಕ್ಷಾತೀತವಾಗಿ ವಿಷಯಾಧಾರಿತ ರಾಜಕಾರಣಕ್ಕೆ ಹೆಸರುವಾಸಿಯಾದವರು. ಆದರೆ, ಅವರನ್ನು ಮುಖ್ಯಮಂತ್ರಿ ಮನೆಗೆ ಕರೆಯಿಸಿ ಮಾತನಾಡಿ, ವಿಧಾನಸೌಧದಲ್ಲಿಯೇ ಕುಳಿತು ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದಿರುವುದು ಮತ್ತು ರಾಜೀನಾಮೆ ನೀಡಿದ ಕೇವಲ 5 ನಿಮಿಷಗಳಲ್ಲಿ ಅದನ್ನು ಅಂಗೀಕರಿಸಿ ಪ್ರಕಟನೆ ಹೊರಡಿಸಿರುವುದು ಸರ್ಕಾರದ ದುರಾಲೋಚನೆಯನ್ನು ಪ್ರದರ್ಶಿಸುತ್ತದೆ. ಈ ಪ್ರಕ್ರಿಯೆಯು ಯಾವುದೇ ಸತ್ಸಂಪ್ರದಾಯಕ್ಕೆ ಅನುಗುಣವಾಗಿಲ್ಲ. ಇದು ಸಭಾಪತಿ ಸ್ಥಾನದ ಗೌರವಕ್ಕೆ ಹಾಗೂ ಸಂವಿಧಾನಕ್ಕೆ ಎಸಗಿದ ಅಪಮಾನವಾಗಿದೆ. ಕರ್ನಾಟಕ ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಕೆಟ್ಟ ನಡವಳಿಕೆ ಹಾಗೂ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ತಿಳಿಸಿದ್ದಾರೆ.

ಸಭಾಪತಿಯಾಗಿ ಬಸವರಾಜ ಹೊರಟ್ಟಿ ನೀಡಿದ ಕೊಡುಗೆ ಮತ್ತು ಮಾಡಿದ ಕೆಲಸಗಳು ಇತಿಹಾಸದಲ್ಲಿ ಶಾಶ್ವತವಾಗಿರಲಿವೆ. ರಾಜೀನಾಮೆಯ ನಂತರವೂ ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿ ಮುಂದುವರಿಯಬೇಕು. ಯುವಕರಿಗೆ ಹಾಗೂ ಹೊಸ ರಾಜಕಾರಣಿಗಳಿಗೆ ತಮ್ಮ ಸುದೀರ್ಘ ಅನುಭವದ ಮೂಲಕ ಮಾರ್ಗದರ್ಶನ ನೀಡಬೇಕು ಎಂಬುದು ಸಾರ್ವಜನಿಕರ ಅಪೇಕ್ಷೆಯಾಗಿದೆ. ಅವರ ಹಿರಿತನ ಮತ್ತು ಅಪಾರ ಅನುಭವಕ್ಕೆ ರಾಜ್ಯದ ಜನತೆ ಸದಾ ಗೌರವಪೂರ್ವಕವಾಗಿ ಋಣಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News