×
Ad

ಧರ್ಮಸ್ಥಳದಲ್ಲಿ ಹೂತು ಹಾಕಿದ ಮೃತದೇಹಗಳ ವಿವರಗಳನ್ನು ಚಿನ್ನಯ್ಯ ಬಿಚ್ಚಿಟ್ಟಾಗ ನಿರ್ಮಲಾನಂದ ಶ್ರೀಗಳು ದಂಗಾಗಿ ಹೋದರು: ಗಿರೀಶ್ ಮಟ್ಟಣ್ಣವರ್

"AI ಫೋಟೋ ಎನ್ನುವವರು Fact Check ಮಾಡಿಕೊಳ್ಳಿ" ಎಂದು ಪೋಸ್ಟ್

Update: 2025-12-10 19:58 IST

Photo credit : instagram/girish_mattennavar

ಬೆಂಗಳೂರು: ಧರ್ಮಸ್ಥಳದಲ್ಲಿ ತಾನು, ಅತ್ಯಾಚಾರ ಕೊಲೆಯಾಗಿ ಶವವಾದ ಅನೇಕ ದೇಹಗಳನ್ನು ಅಕ್ರಮವಾಗಿ ಹೂತು ಹಾಕಿದ ವಿವರಗಳನ್ನು ಚಿನ್ನಯ್ಯ ಸ್ವತಃ ನಿರ್ಮಲಾನಂದ ಶ್ರೀಗಳ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟಾಗ, ಅವರು ದಂಗಾಗಿ ಹೋದರು ಎಂದು ಸೌಜನ್ಯಪರ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸೌಜನ್ಯ ಅತ್ಯಾಚಾರ ಕೊಲೆ ಅಷ್ಟೇ ಅಲ್ಲ, ಬೇರೆ ಅಕ್ರಮ ಕೊಲೆ ಪ್ರಕರಣಗಳ ವಿವರಗಳನ್ನು ಚಿನ್ನಯ್ಯ ಸ್ವಾಮೀಜಿಗಳ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಸೌಜನ್ಯ ಒಕ್ಕಲಿಗ ಹೆಣ್ಣು ಮಗು, ಅವಳಿಗಷ್ಟೇ ಅಲ್ಲ. ಎಲ್ಲ ಸಮಾಜದ ಅಮಾಯಕ ಜೀವಿಗಳಿಗೂ ನ್ಯಾಯ ಸಿಗಬೇಕು. ನಿಮ್ಮ ಹೋರಾಟದ ಜೊತೆಗೆ ನಾವಿದ್ದೇವೆ, ಮಠ ಇದೆ. ನಾಳೆಯೇ CM ಭೇಟಿಯಾಗಲಿದ್ದೇನೆ ಮತ್ತು ಅವರಿಗೆ ಈ ವಿಷಯ ತಿಳಿಸಿ ನೊಂದವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಕಾಲ ಭೈರವ ವಾರವಾದ ರವಿವಾರ ಕಾಲಭೈರವ ನಿಮ್ಮ ರಕ್ಷಣೆಗೆ ಇದ್ದಾನೆ, ಧೈರ್ಯವಾಗಿರಿ ಎಂದು ಅಭಯಹಸ್ತ ನೀಡಿದರು ನಮ್ಮೆಲ್ಲರ ಹೆಮ್ಮೆಯ ಶ್ರೀ ನಿರ್ಮಲಾನಂದ ಗುರುಗಳು" ಎಂದು ತಿಳಿಸಿದ್ದಾರೆ.

ಪರಮಪೂಜ್ಯ ನಿರ್ಮಲಾನಂದ ಗುರುಗಳು ಚಿನ್ನಯ್ಯನಿಗೆ ಮತ್ತು ನಮ್ಮೆಲ್ಲ ಹೋರಾಟಗಾರರಿಗೆ ಒಕ್ಕಲಿಗ ಮಹಾಸಂಸ್ಥಾನದಲ್ಲಿ ಕಾಲಭೈರವ ದರ್ಶನ ನಂತರ ತಮ್ಮ ಪೀಠದಲ್ಲಿ ಕುಳಿತು ಸೌಜನ್ಯ ಹೋರಾಟಕ್ಕೆ ನ್ಯಾಯದ ಆಶೀರ್ವಾದ ಮಾಡಿ ಅಭಯ ನೀಡಿದ ಅಮೃತ ಘಳಿಗೆಯಿದು ಎಂದು ಗಿರೀಶ್ ಮಟ್ಟಣ್ಣವರ್ ಉಲ್ಲೇಖಿಸಿದ್ದಾರೆ.

ಪ್ರಭಾವಿ ಒಕ್ಕಲಿಗ ರಾಜಕೀಯ ನಾಯಕರು ಎಂದೆನಿಸಿಕೊಂಡವರು, ಒಕ್ಕಲಿಗ ಮಗಳು ಸೌಜನ್ಯಾಳಿಗೆ ನ್ಯಾಯ ಕೊಡಿಸದೇ ಪ್ರಭಾವಿ ಕೊಲೆಗಡುಕ ಕುಟುಂಬ ಜೊತೆ ಕೈಜೋಡಿಸಿದಾಗ, ಸಾತ್ವಿಕ ಶಕ್ತಿಯ ಸ್ವಾಮಿಜಿಗಳು ಹೋರಾಟಕ್ಕೆ ಆಶೀರ್ವಾದ ಮಾಡುವುದು ಷಡ್ಯಂತ್ರವೇ? ಎಂದು ಮಟ್ಟಣ್ಣವರ್ ಅವರು ತಮ್ಮ ಪೊಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.

ಭೀಕರ ಕೊಲೆ ಅತ್ಯಾಚಾರದ ಒಕ್ಕಲಿಗ ಕುಟುಂಬ, ಹೋರಾಟಗಾರರ ಜೊತೆಗೆ ನ್ಯಾಯಕ್ಕೆ ಅಂಗಲಾಚಿ ಒಕ್ಕಲಿಗ ಶ್ರೀಗಳಿಗೆ ಬೇಡಿಕೊಳ್ಳುವುದರಲ್ಲಿ ಏನು ತಪ್ಪಿದೆ? ಅದು ಷಡ್ಯಂತ್ರವೇ? ಕೊಳಕು ರಾಜಕೀಯ ನಾಯಕರುಗಳು ಮತ್ತು ಮಾರಿಕೊಂಡ ಎಂಜಲು ಮಾಧ್ಯಮಗಳೇ ಈಗ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಗಿರೀಶ್ ಮಟ್ಟಣ್ಣವರ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಧರ್ಮಸ್ಥಳದ ಸರಣಿ ಕೊಲೆ ಅತ್ಯಾಚಾರ ಹತ್ಯಾಕಾಂಡ ನೋಡಿಕೊಂಡು ರಾಜಕೀಯ ನಾಯಕರು ಮೂಕರಾಗಿ ಕಿವುಡರಾಗಿದ್ದಾಗ, ನ್ಯಾಯದ ಭಗೀರಥ ತಿಮರೋಡಿ ಅವರಿಗೆ ನ್ಯಾಯದ ಅಭಯ ಹೇಳಿದ ಶ್ರೀ ನಿರ್ಮಲಾನಂದ ಸ್ವಾಮೀಜಿ ನಮ್ಮೆಲ್ಲರ ಇಡೀ ಮನುಕುಲದ ಹೆಮ್ಮೆ. ಕೊಳಕು ರಾಜಕೀಯ ನಾಯಕರುಗಳು, ಕೆಲವು ಹೊಲಸು ತಿನ್ನುವ ಮಾಧ್ಯಮಗಳೇ ಈಗ ಹೇಳಿ ಎಲ್ಲಿದೆ ಷಡ್ಯಂತ್ರ? ಯಾರು ತಿಮಿಂಗಿಲ ? ಯಾರು ನಗರ ನಕ್ಸಲರು? ಎಂದು ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ, ಫೋಟೋಗಳು Al ಎಂದು ಸುಳ್ಳು ಸುದ್ದಿ ಮಾಡಿ ನಿದ್ದೆ ಗೆಡುವರು Facts Check LAB ಗೆ ಕಳುಹಿಸಿ ನಿಮ್ಮ ತಲೆ ಸರಿಮಾಡಿಕೊಳ್ಳಿ.#justice for soujanya ಎಂದು ಅವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News