ಸೋಮನಹಳ್ಳಿ ಟೋಲ್ ಪ್ಲಾಜಾ ಬಳಸುವ ಸ್ಥಳೀಯರಿಗೆ ಉಚಿತ ಪಾಸ್ ನೀಡಲು ಎನ್ಎಚ್ಎಐಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು : ಕನಕಪುರ ರಸ್ತೆಯಲ್ಲಿರುವ ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಬಳಕೆದಾರ ಶುಲ್ಕ ಸಂಗ್ರಹ ನಿಯಮಬಾಹಿರವಾಗಿದೆ ಹಾಗೂ ರಾಷ್ಟ್ರೀಯ ಹೆದ್ದಾರಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆದೇಶಿಸಿರುವ ಹೈಕೋರ್ಟ್, ಒಂದು ತಿಂಗಳೊಳಗೆ ಸ್ಥಳೀಯ ನಿವಾಸಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಉಚಿತ ಪಾಸ್ಗಳನ್ನು ನೀಡುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ನಿರ್ದೇಶಿಸಿದೆ.
ಸೋಮನಹಳ್ಳಿ, ನೆಲಗುಲಿ ಮತ್ತು ಕಗ್ಗಲಿಪುರ ಗ್ರಾಮಸ್ಥರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ರಾಷ್ಟ್ರೀಯ ಹೆದ್ದಾರಿ 209ರಲ್ಲಿನ ಟೋಲ್ ಪ್ಲಾಜಾ ಸ್ಥಾಪನೆ ನಿಯಮಗಳನ್ನು ಉಲ್ಲಂಘಿಸಿದೆ, ಅಂತಹ ಸೌಲಭ್ಯವು ಪುರಸಭೆ ಅಥವಾ ಸ್ಥಳೀಯ ನಗರದ ವ್ಯಾಪ್ತಿಯಿಂದ 10 ಕಿ.ಮೀ. ದೂರವಿರಬೇಕು ಎಂದು ಆದೇಶಿಸಿದೆ.
ಜತೆಗೆ, ಸರ್ವೀಸ್ ರಸ್ತೆ ಒದಗಿಸದೆ ಟೋಲ್ ವಿಧಿಸುವುದು ಏಕಪಕ್ಷೀಯ ಮತ್ತು ಅಸಮಂಜಸ ಎಂದಿರುವ ನ್ಯಾಯಾಲಯ, ರಾಷ್ಡ್ರೀಯ ಹೆದ್ದಾರಿ ಟೋಲ್ ಅಥವಾ ಬಳಕೆದಾರ ಶುಲ್ಕವನ್ನು ವಿಧಿಸದೆ, ಅರ್ಜಿದಾರರು ಮತ್ತು ಅಂತಹ ಪಾಸ್ಗಳಿಗಾಗಿ ಅರ್ಜಿ ಸಲ್ಲಿಸಿದ ಎಲ್ಲ ಇತರ ನಿವಾಸಿಗಳ ವಾಸಸ್ಥಳ ಪರಿಶೀಲಿಸಿ, ಉಚಿತ ಸ್ಥಳೀಯ ನಿವಾಸಿ ಪಾಸ್ಗಳನ್ನು ನೀಡುವಂತೆ ಎನ್ಎಚ್ಎಐ ಹಾಗೂ ಟೋಲ್ ಪ್ಲಾಜಾ ನಿರ್ವಹಣೆ ಮಾಡುತ್ತಿರುವ ಸಂಸ್ಥೆಗೆ ನಿರ್ದೇಶಿಸಿದೆ.
ಈ ಪ್ರಕ್ರಿಯಯನ್ನು 30 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿರುವ ನ್ಯಾಯಪೀಠ, ಒಂದು ವೇಳೆ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸದಿದ್ದರೆ, ಪ್ರತಿವಾದಿಗಳು ಸೋಮನಹಳ್ಳಿಯಲ್ಲಿ ಟೋಲ್ ಸಂಗ್ರಹವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಟೋಲ್ ಪ್ಲಾಜಾವನ್ನು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮಗಳು, 2008ರ ಪ್ರಕಾರ ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಆದೇಶಿಸಿದೆ.
ಅಗತ್ಯವಿದ್ದರೆ ಸೋಮನಹಳ್ಳಿ ಟೋಲ್ ಪ್ಲಾಜಾವನ್ನು ಬದಲಾಯಿಸಬಹುದು. ರಿಯಾಯಿತಿ ಅಥವಾ ರಿಯಾಯಿತಿ ಪಾಸ್ಗಳ ಮೂಲಕ ಕೆಲ ವರ್ಗದ ಬಳಕೆದಾರರಿಗೆ ಟೋಲ್ ಹೊರೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಆದರೆ, ಅಗತ್ಯ ಸೇವೆಗಳನ್ನು ಪಡೆಯಲು ಸ್ಥಳೀಯರು ಪದೇಪದೆ ಟೋಲ್ ಪ್ಲಾಜಾವನ್ನು ದಾಟುವುದನ್ನು ಬಿಟ್ಟು ಬೇರೆ ದಾರಿ ಇಲ್ಲದಿರುವುದರಿಂದ ಟೋಲ್ ವಿಧಿಸುವುದನ್ನು ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ. ಸರ್ವೀಸ್ ರಸ್ತೆ ಅಥವಾ ಪರ್ಯಾಯ ರಸ್ತೆಯನ್ನು ಒದಗಿಸದೆಯೇ ಬಳಕೆದಾರ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಎಲ್ಲ ಸುರಕ್ಷತಾ ಕ್ರಮಗಳ ಅನುಪಸ್ಥಿತಿಯಲ್ಲಿ, ಸ್ಥಳೀಯ ನಿವಾಸಿಗಳಿಂದ ಟೋಲ್ ಸಂಗ್ರಹಕ್ಕೆ ಒತ್ತಾಯ ಮಾಡುವುದು ಅನ್ಯಾಯ ಮತ್ತು ದಬ್ಬಾಳಿಕೆಯಾಗಲಿದೆ ಎಂದು ನ್ಯಾಯಪೀಠ ಆದೇಶಿಸಿದೆ.
ಅರ್ಜಿದಾರರ ಆಕ್ಷೇಪವೇನು?
ಕಗ್ಗಲೀಪುರ, ತರಳು ಮತ್ತು ಸೋಮನಹಳ್ಳಿ ಗ್ರಾಮ ಪಂಚಾಯಿತಿಗಳು ಸರ್ವೀಸ್ ರಸ್ತೆಗಳನ್ನು ಒದಗಿಸುವವರೆಗೆ ಟೋಲ್ ಪ್ಲಾಜಾ ಸ್ಥಾಪಿಸದಂತೆ ರಸ್ತೆ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿರುವವರನ್ನು ಮನವಿ ಮಾಡಿದರೂ ಅದನ್ನು ಪರಿಗಣಿಸಿಲ್ಲ ಹಾಗೂ ಹೊಸ ಗುತ್ತಿಗೆದಾರರು ಹೊಸ ಟೋಲ್ ಸಂಗ್ರಹಕ್ಕಾಗಿ ಮೂಲಸೌಕರ್ಯಗಳನ್ನು ನಿರ್ಮಿಸಲಿದ್ದಾರೆ ಎಂದು ಹೇಳಿದ್ದರು. ಅದನ್ನು ಪ್ರಶ್ನಿಸಿ ಮಂಜೇಶ್ ಕುಮಾರ್ ಮತ್ತಿತರ ಗ್ರಾಮಸ್ಥರು 2024ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಹೊಸದಾಗಿ ರಚನೆಯಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಗೆ ಸೋಮನಹಳ್ಳಿ ಗ್ರಾಮ ಒಳಪಡುತ್ತದೆ ಮತ್ತು ಟೋಲ್ ಪ್ಲಾಜಾ ಅದರ ವ್ಯಾಪ್ತಿಗೆ ಬರುತ್ತದೆ. ಸೋಮನಹಳ್ಳಿ ಟೋಲ್ ಪ್ಲಾಜಾ ಮತ್ತು ಮುಂದಿನ ಟೋಲ್ ಪ್ಲಾಜಾ ನಡುವಿನ ಅಂತರ ಸುಮಾರು 89 ಕಿ.ಮೀ.ಗಳಾಗಿದ್ದು, ಅದರ ಪರಿಣಾಮವಾಗಿ ಇಡೀ ರಸ್ತೆಗೆ ಲೆಕ್ಕಹಾಕಿ ಅಧಿಕ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.