ಶಾಂತಿ, ಸುವ್ಯವಸ್ಥೆ ನೆಲೆಸಬೇಕಾದರೆ ಸದೃಢ ಪೊಲೀಸ್ ವ್ಯವಸ್ಥೆ ಅವಶ್ಯಕ : ಡಾ.ಎಂ.ಎ.ಸಲೀಂ

Update: 2026-07-25 00:42 IST

ಬೆಂಗಳೂರು : ಶಾಂತಿ ಮತ್ತು ಭದ್ರತೆ ಇಲ್ಲದ ಸಮಾಜವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹೀಗಾಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಬೇಕಾದರೆ ಸದೃಢ ಪೊಲೀಸ್ ವ್ಯವಸ್ಥೆಯ ಅವಶ್ಯಕತೆ ಇರುತ್ತದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.

ಶುಕ್ರವಾರ ನಗರದ ಕೋರಮಂಗಲದಲ್ಲಿರುವ ಕೆಎಸ್‍ಆರ್‍ಪಿ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಡಿಜಿ ಮತ್ತು ಐಜಿಪಿ ಕಮೆಂಡೇಷನ್ ಡಿಸ್ಕ್ ಪ್ರದಾನ ಹಾಗೂ ಸೇವಾ ಕವಾಯತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಸಮಾಜ ಅಥವಾ ರಾಷ್ಟ್ರ ಬೆಳೆಯಬೇಕಾದರೆ ಅಲ್ಲಿ ಸುರಕ್ಷಿತವಾದ ವಾತಾವರಣ ಅತ್ಯಂತ ಮುಖ್ಯವಾಗಿರುತ್ತದೆ. ಅದಕ್ಕಾಗಿ ಪೊಲೀಸ್ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡಬೇಕಾಗುತ್ತದೆ. ಈ ದೆಸೆಯಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪೊಲೀಸ್ ವ್ಯವಸ್ಥೆ ಉತ್ತಮವಾಗಿದೆ. ಇಂಡಿಯಾ ಜಸ್ಟಿಸ್ ವರದಿಯ ಪ್ರಕಾರ ಕರ್ನಾಟಕವು ನ್ಯಾಯ ಒದಗಿಸುವ ವಿಚಾರದಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಜ್ಯವಾಗಿದೆ. ರಾಯಚೂರಿನ ಒಂದು ಪೊಲೀಸ್ ಠಾಣೆ ದೇಶದ ಅತ್ಯುನ್ನತ ಪೊಲೀಸ್ ಠಾಣೆಗಳಲ್ಲಿ ಒಂದಾಗಿದೆ. ಇದರ ಹಿಂದೆ ಪ್ರತಿಯೊಬ್ಬ ಪೊಲೀಸರ ಪರಿಶ್ರಮವಿದೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತು ಜಾಲವು ದೊಡ್ಡ ಸವಾಲಾಗಿ ಪರಿಣಮಿಸಿದ್ದು, ರಾಜ್ಯ ಸರಕಾರವು ಈ ಸಮಸ್ಯೆಗಳ ನಿರ್ಮೂಲನೆಗೆ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಪೊಲೀಸರು ಪ್ರತಿಯೊಂದು ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ, ಅಪರಾಧ ಜಾಲವನ್ನು ಬುಡಸಮೇತ ಕಿತ್ತೊಗೆಯಲು ಶ್ರಮಿಸಬೇಕು ಎಂದು ಅವರು ಸೂಚಿಸಿದರು.

ಕಾರ್ಯಕ್ರಮದಲ್ಲಿ ಡಿಜಿ ಮತ್ತು ಐಜಿಪಿ ಕಮೆಂಡೇಷನ್ ಡಿಸ್ಕ್‌ ಗಳನ್ನು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪ್ರಧಾನ ಮಾಡಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News