ಅಗ್ನಿ ಸುರಕ್ಷತಾ ಪತ್ರ ಪಡೆಯದೇ ಚಿನ್ನಸ್ವಾಮಿ ಸ್ಟೇಡಿಯಂಗೆ ವಿದ್ಯುತ್ ಸಂಪರ್ಕ ವಿಚಾರ : ಬೆಸ್ಕಾಂಗೆ ಹೈಕೋರ್ಟ್ ತೀವ್ರ ತರಾಟೆ
ಬೆಂಗಳೂರು : ಅಗ್ನಿ ಸುರಕ್ಷತಾ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳದಿದ್ದರೂ ಚಿನ್ನಸ್ವಾಮಿ ಸ್ಟೇಡಿಯಂಗೆ ವಿದ್ಯುತ್ ಸಂಪರ್ಕ ನೀಡಿದ ಬೆಸ್ಕಾಗೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ.
ತಮ್ಮ ಸಂಸ್ಥೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬೆಸ್ಕಾಂ ನೀಡಿದ್ದ ನೋಟಿಸ್ ಪ್ರಶ್ನಿಸಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಅಕ್ರಮ ವಿದ್ಯುತ್ ಸಂಪರ್ಕ ನೀಡಿರುವುದಕ್ಕೆ ಸಂಪೂರ್ಣವಾಗಿ ಬೆಸ್ಕಾಂ ಸಂಸ್ಥೆಯನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬೆಸ್ಕಾಂ ನೋಟಿಸ್ ಕೊಟ್ಟು, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಕೆಲವೊಂದು ಬೆಳವಣಿಗೆಗಳು ನಡೆದಿವೆ. ಜೂನ್ 12ಕ್ಕೆ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಡಿತದ ನೋಟಿಸ್ ಕೊಟ್ಟು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಅದನ್ನು ಪ್ರಶ್ನಿಸಿ ಜೂನ್ 17ಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅದೇ ದಿನ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲಾಗಿದೆ ಎಂದರು.
ಈ ವಿಚಾರ ಗಮನಿಸಿದ ನ್ಯಾಯಾಲಯ ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತದ ನೋಟಿಸ್ ಕೊಟ್ಟು, ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು. ಆದರೆ, ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ ಎಂದು ಗೊತ್ತಿದ್ದರೂ ವಿದ್ಯುತ್ ಸಂಪರ್ಕ ಕೊಟ್ಟಿದ್ದು ಹೇಗೆ? ಎಂದು ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿತು.
ಈ ವೇಳೆ ಬೆಸ್ಕಾಂ ಪರ ವಕೀಲರು, ಕ್ರಿಕೆಟ್ ಅಸೋಸಿಯೇಷನ್ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಬೇಕಿದ್ದರೆ ಅದನ್ನು ಪುನಃ ಕಡಿತಗೊಳಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಅಗ್ನಿ ಸರುಕ್ಷತಾ ನಿರಾಕ್ಷೇಪಣಾ ಪತ್ರ ಸರಕಾರ ನೀಡಬೇಕು. ಸರಕಾರವನ್ನು ಕೇಳದೇ ನಿಮ್ಮಷ್ಟಕ್ಕೆ ನೀವೇ ವಿದ್ಯುತ್ ಸಂಪರ್ಕ ಕೊಟ್ಟುಬಿಟ್ಟರೆ ನ್ಯಾಯಾಲಯ ಸುಮ್ಮನಿರಲ್ಲ. ಈಗಾಗಲೇ ಆಗಿರುವ ಅನಾಹುತ ಸಾಕಷ್ಟಿದೆ. ಮತ್ತೇ ಏನಾದರೂ ಅವಘಡ ಸಂಬಂಭವಿಸಿದರೆ ಯಾರು ಹೊಣೆ? ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದಿದ್ದರೆ ಆಯಿತು, ಇಲ್ಲದಿದ್ದರೆ ಸ್ಟೇಡಿಯಂ ಕತ್ತಲಲ್ಲಿ ಇರಲಿ ಬಿಡಿ. ಇರುವ ಆಯ್ಕೆ ಒಂದೇ ಅಗ್ನಿ ಸುರಕ್ಷತಾ ಕ್ರಮಗಳನ್ನುನ ಅಳವಡಿಸಿಕೊಳ್ಳಬೇಕು, ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು ಅಷ್ಟೇ. ಅಪಾಯಗಳ ವಿಚಾರದಲ್ಲಿ ಶೂನ್ಯ ಸಹನೆ ಬೇಕು ಎಂದು ತೀಕ್ಷ್ಣವಾಗಿ ಹೇಳಿತು.
ವಾದ-ಪ್ರತಿವಾದದ ಬಳಿಕ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಅಗ್ನಿ ಸುರಕ್ಷತೆ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರಿಗೆ ನೋಟಿಸ್ಗೊಳಿಸಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿದೆ.