×
Ad

ಗೃಹಲಕ್ಷ್ಮೀ ಯೋಜನೆ | ಆರ್ಥಿಕ ಇಲಾಖೆ ಅನುಮತಿ ನೀಡಿದ ತಕ್ಷಣ ಫೆಬ್ರವರಿ, ಮಾರ್ಚ್ ತಿಂಗಳ ಹಣ : ಲಕ್ಷ್ಮೀ ಹೆಬ್ಬಾಳ್ಕರ್‌

Update: 2026-01-08 19:39 IST

ಬೆಂಗಳೂರು : ಆರ್ಥಿಕ ಇಲಾಖೆ ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎರಡು ತಿಂಗಳ ಬಾಕಿ ಉಳಿದಿದ್ದ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಕುರಿತಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯರ ಬಳಿ ಮಾತನಾಡಿದ್ದು, ಈ ಬಗ್ಗೆ ಸಿಎಂ ಅವರು ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. ಅನರ್ಹ ಪಡಿತರ ಚೀಟಿ ರದ್ದಾಗಿರುವ ಕಾರಣ ಕೆಲವರಿಗೆ ಹಣ ಸಂದಾಯವಾಗಿಲ್ಲ. ಆಹಾರ ಇಲಾಖೆಯಿಂದ ಹೊಸ ಡೇಟಾ ಬಂದ ತಕ್ಷಣ ಅವರಿಗೂ ಹಣ ಬಿಡುಗಡೆಯಾಗಲಿದೆ ಎಂದರು.

ಪಡಿತರ ಚೀಟಿಯನ್ನು ಆಧರಿಸಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಹಾಕುತ್ತಿದ್ದೇವೆ. ಕೆಲ ಪಡಿತರ ಚೀಟಿ ರದ್ದಾದಾಗ ಫಲಾನುಭವಿಗಳಿಗೆ ಹಣ ಹೋಗದೆ ಇರಬಹುದು. ಆದರೆ ಅವರು ತೆರಿಗೆ ಪಾವತಿದಾರರಲ್ಲದಿದ್ದಲ್ಲಿ ಹಣ ಸಿಗಲಿದೆ ಎಂದ ಅವರು, ಗೃಹಲಕ್ಷ್ಮೀ ಸಹಕಾರ ಸಂಘಕ್ಕೆ ಸದಸ್ಯರಾದವರು ಪ್ರತಿ ತಿಂಗಳು 200 ರೂ.ಹಣ ಕಟ್ಟಿಕೊಂಡು ಹೋಗಬೇಕು, 6 ತಿಂಗಳು ಆದ ಬಳಿಕ ಸಾಲ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. ನನ್ನ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇದ್ದು, ಹೆಚ್ಚು ಷರತ್ತುಗಳನ್ನು ಹಾಕದೇ ಅರ್ಹರನ್ನು ಗುರುತಿಸಿ ಸಾಲ ನೀಡಲಾಗುವುದು ಎಂದರು.

ನಮ್ಮ ಇಲಾಖೆ ಹಾಗೂ ಗೃಹ ಇಲಾಖೆ ಸಹಯೋಗದಲ್ಲಿ ಅಕ್ಕ ಪಡೆ ಆರಂಭಿಸಲಾಗಿದೆ. ಬಹಳಷ್ಟು ಮಹಾತ್ವಾಕಾಂಕ್ಷಿ ಇಟ್ಟುಕೊಂಡು ‘ಅಕ್ಕ’ ಪಡೆ ಆರಂಭಿಸಲಾಗಿದೆ. ಈಗಾಗಲೇ ಸಿಬ್ಬಂದಿ ನೇಮಿಸಿದ್ದು, ಅವರಿಗೆ ತರಬೇತಿ ನೀಡಲಾಗುತ್ತಿದೆ. ಬಸ್ ಸ್ಟಾಪ್, ದೇವಸ್ಥಾನ, ಮಾಲ್‍ಗಳಲ್ಲಿ, ಪಾರ್ಕ್‍ಗಳಲ್ಲಿ ಅಕ್ಕ ಪಡೆ ಗಸ್ತು ತಿರುಗಲಿದೆ ಎಂದು ಅವರು ಹೇಳಿದರು.

ಅಕ್ಕಪಡೆ ಸ್ಕೂಲ್, ಕಾಲೇಜುಗಳಿಗೂ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದು, ದೂರು ಕೊಡಲು ಅಂಜುವ ಹೆಣ್ಣುಮಕ್ಕಳ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಅಕ್ಕಪಡೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ, ಸಾಮಾಜಿಕ ಜಾಲತಾಣಗಳಲ್ಲಿ ವಂಚನೆಗೊಳಗಾದ ಮಹಿಳೆಯರು, ಕೌಟುಂಬಿಕ ಸಮಸ್ಯೆ ಎದುರಿಸುತ್ತಿರುವ ಹೆಣ್ಣುಮಕ್ಕಳು ದೂರು ನೀಡಬಹುದು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News