ಕನ್ನಡ ಸಾಹಿತ್ಯ ಪರಿಷತ್ ನಿಬಂಧನೆ ತಿದ್ದುಪಡಿ | ಉಪಸಮಿತಿಯ ಶಿಫಾರಸಿನಂತೆ ಕ್ರಮ : ಮಹೇಶ್ ಜೋಶಿ
ಬೆಂಗಳೂರು : ಕಸಾಪ ಸ್ಥಾಪನೆಯಾದಾಗಿನಿಂದಲೂ ನಿಬಂಧನೆ ತಿದ್ದುಪಡಿ ಆಗುತ್ತಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್.ಪಾಚ್ಚಾಪುರೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ‘ನಿಬಂಧನೆ ತಿದ್ದುಪಡಿ ಸಲಹಾ ಉಪಸಮಿತಿ’ಯ ಶಿಫಾರಸಿನ ಅನುಸಾರ ಈಗ ಬೈಲಾ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ.
ಗುರುವಾರ ನಗರದ ಚಾಮರಾಜಪೇಟೆಯಲ್ಲಿರುವ ಕಸಾಪದ ಪಂಪ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಸಾಹಿತ್ಯ ಪರಿಷತ್ನ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಕಸಾಪದ ಕಾರ್ಯಚಟುವಟಿಕೆಗಳ ಕುರಿತು ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಿ ಎಂದು ಹೇಳಿದರು.
ಪರಿಷತ್ನ ಘನತೆ, ಗೌರವಗಳನ್ನು ಎತ್ತಿ ಹಿಡಿಯುವ ಜೊತೆಗೆ ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವ ಉದ್ದೇಶದೊಂದಿಗೆ ಬೈಲಾ ತಿದ್ದುಪಡಿ ಮಾಡಲಾಗುತ್ತಿದೆ. ಸರ್ವಾಧಿಕಾರಿಯಾಗಲು, ಪರಮಾಧಿಕಾರ ಪಡೆಯಲು ಈ ತಿದ್ದುಪಡಿ ಮಾಡುತ್ತಿಲ್ಲ. ಕೆಲವರು ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಾನ ಮನಸ್ಕರ ವೇದಿಕೆಯಡಿ ಉದ್ದೇಶಪೂರ್ವಕ ಹಾಗೂ ಪೂರ್ವಗ್ರಹಪೀಡಿತರಾಗಿ ಕಸಾಪ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾ, ಕಸಾಪದ ವಿರುದ್ಧ ಪ್ರತಿಭಟನಾ ಸಭೆ ನಡೆಸಲಾಗುತ್ತಿದೆ. ಈ ವೇದಿಕೆಯ ಪ್ರತಿಭಟನಾ ಸಭೆಯಲ್ಲಿ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪಾಲ್ಗೊಂಡಿದ್ದರು. ರಾಜಕಾರಣಿಯಾದ ಅವರು ಈ ರೀತಿ ಪರಿಷತ್ನ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಿದರೆ, ಕಾರ್ಯಕಾರಿ ಸಮಿತಿ ಜತೆಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಕಸಾಪದ ಧ್ಯೇಯೋದ್ದೇಶಗಳ ಅನುಷ್ಠಾನಕ್ಕಾಗಿ, ವಿವಿಧ ಕಾರ್ಯಕಲಾಪಗಳನ್ನು ಸುಸೂತ್ರವಾಗಿ ನಡೆಸಲು ಉಪ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ನಾಡಿನ ಚಿಂತಕರು, ಕನ್ನಡಿಗರೊಂದಿಗೆ ಸಮಾಲೋಚನೆ ನಡೆಸಲು, ವಾಸ್ತವಿಕತೆ ಮನವರಿಕೆ ಮಾಡಲು ಈ ಉಪ ಸಮಿತಿ ಸಹಕಾರಿಯಾಗಲಿದೆ. ಅದರಲ್ಲಿ ಕಸಾಪ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಇರಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪರಿಷತ್ ಬಗ್ಗೆ ನಿಖರ ಮಾಹಿತಿಗಳನ್ನು ಪ್ರಚಾರ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಸಾಪದ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಲ್ಲೇಶಗೌಡ, ಡಾ.ಎಚ್.ಎಸ್.ಮುದ್ದೇಗೌಡ, ಸುನೀಲ್ ಯಳವಾರ ಮತ್ತಿತರರು ಉಪಸ್ಥಿತರಿದ್ದರು.