×
Ad

ಯುಜಿಸಿ ಕರಡು ನಿಯಮಗಳನ್ನು ತಿರಸ್ಕರಿಸುವ ಒಮ್ಮತದ ನಿರ್ಣಯ ಸ್ವಾಗತಾರ್ಹ: ನಿರಂಜನಾರಾಧ್ಯ

Update: 2025-02-06 11:35 IST

ಬೆಂಗಳೂರು: ಕರ್ನಾಟಕದಲ್ಲಿ ನಡೆದ ವಿವಿಧ ರಾಜ್ಯಗಳ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ, ಭಾರತದ ವಿಕೇಂದ್ರೀಕರಣ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿರುವ ಹಾಗೂ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿ ಇದ್ದಾಗ್ಯೂ, ಏಕಪಕ್ಷೀಯವಾಗಿ ಶಿಕ್ಷಣದ ಕೇಂದ್ರೀಕರಣಕ್ಕೆ ಮುಂದಾಗಿರುವ ಯುಜಿಸಿ ಕರಡು ನಿಯಮಗಳನ್ನು(2025) ತಿರಸ್ಕರಿಸಲು ಕೈಗೊಂಡ ಒಮ್ಮತದ ನಿರ್ಣಯ ಸ್ವಾಗತಾರ್ಹ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಪ್ರಧಾನ ಸಂಚಾಲಕ ನಿರಂಜನಾರಾಧ್ಯ ವಿ.ಪಿ. ಹೇಳಿದ್ದಾರೆ.

2020ರಲ್ಲಿ ಅಸಂವಿಧಾನಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿದಾಗ ದೇಶಾದ್ಯಂತ ದೊಡ್ಡ ಮಟ್ಟದ ಪ್ರತಿರೋಧ ಹಾಗೂ ಪ್ರತಿಭಟನೆಯ ಮೂಲಕ ಅದನ್ನು ಸಾರಸಗಟಾಗಿ ತಿರಸ್ಕರಿಸಲಾಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ (2020) ತಿರಸ್ಕರಿಸಲು ಬಲವಾದ ಕಾರಣಗಳೆಂದರೆ, ಅದೊಂದು ಅಸಂವಿಧಾನಿಕ, ಅಪ್ರಜಾಸತ್ತಾತ್ಮಕ ಹಾಗೂ ಶಿಕ್ಷಣವನ್ನು ಕೇಂದ್ರೀಕರಣ, ಖಾಸಗೀಕರಣ, ಕಾರ್ಪೊರೇಟರೀಕರಣ ಮತ್ತು ಕೋಮುವಾದೀಕರಣಗೊಳಿಸುವ ಪ್ರಯತ್ನವಾಗಿತ್ತು. ಜನ ತಿರಸ್ಕರಿಸಿದ ಈ ನೀತಿಯನ್ನು ಮತ್ತೊಮ್ಮೆ ಹಿಂಬಾಗಿಲಿನಿಂದ ರಾಜ್ಯ ಸರಕಾರಗಳ ಮೇಲೆ ಹೇರುವ ದೊಡ್ಡ ರಾಜಕೀಯ ಹುನ್ನಾರವನ್ನು ಈ ಸಮಾವೇಶ ಬಯಲುಗೊಳಿಸಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಸಚಿವರ ಸಮ್ಮೇಳನದ ಈ ನಿರ್ಣಯ ಕೇವಲ ರಾಜಕೀಯ ಪ್ರತಿಕ್ರಿಯೆಯಾಗದೆ, ಉನ್ನತ ಶಿಕ್ಷಣವನ್ನು ವಿಕೇಂದ್ರಿತ ನೆಲೆಯಲ್ಲಿ ಬಲಪಡಿಸಲು ರಾಜ್ಯ ಸರಕಾರಗಳು ತಮ್ಮ ಬದ್ಧತೆಯನ್ನು ಮೆರೆಯಬೇಕಾದ ಅಗತ್ಯವಿದೆ. ಈ ಸಮಾವೇಶದ ಮುಂದಿನ ಭಾಗವಾಗಿ, ಸಮಾವೇಶಗೊಂಡಿದ್ದ ರಾಜ್ಯಗಳು, ಸಮವರ್ತಿ ಪಟ್ಟಿಯ ನಮೂದು 25 ರ ಅನ್ವಯ, ಶಾಲಾ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣದ ಎಲ್ಲಾ ಹಂತಗಳ ಶಿಕ್ಷಣದ ಜವಾಬ್ದಾರಿ ರಾಜ್ಯ ಸರಕಾರಗಳ ವಿಷಯವೂ ಅಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದವರು ಒತ್ತಾಯಿಸಿದ್ದಾರೆ.

ಇದನ್ನು ಆಧರಿಸಿ ಒಕ್ಕೂಟ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಕೇಂದ್ರ ಹಾಗು ರಾಜ್ಯಸರ್ಕಾರಗಳ ಜವಾಬ್ದಾರಿಯನ್ನು ಅಧ್ಯಯನ ಮಾಡಿ ವಿಕೇಂದ್ರಿತ ನೆಲೆಯಲ್ಲಿ ಅದನ್ನು ಉತ್ತಮ ಪಡಿಸಲು ಯಾವ ಬಗೆಯ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬಗ್ಗೆ ಒಂದು ಉನ್ನತ ಸಮಿತಿಯನ್ನು ರಚಿಸಬೇಕೆಂದು ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.

ಈ ಸಮಿತಿಯು ಇತ್ತೀಚಿನ ನ್ಯಾಯಮೂರ್ತಿ ಮದನ್ ಮೋಹನ್ ಪುಂಚಿ ನೇತೃತ್ವದ ಆಯೋಗದ (2007-2010) ವರದಿಯ ಶಿಫರಾಸುಗಳ ಜೊತೆಗೆ ಈ ಹಿಂದೆ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗು ರಾಜ್ಯ ಸರಕಾರಗಳ ರಚನಾತ್ಮಕ ಸಂಬಂಧ ಹೇಗಿರಬೇಕೆಂದು ಅಧ್ಯಯನ ಮಾಡಿದ ಆಯೋಗಗಳ ವರದಿಯನ್ನು ಆಧರಿಸಿ, ಸಂವಿಧಾನದ ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಜಂಟಿಯಾಗಿ ಮತ್ತು ಸ್ವತಂತ್ರವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಒಂದು ಸ್ಪಷ್ಟ ಮಾರ್ಗಸೂಚಿಯನ್ನು ತಯಾರಿಸಬೇಕು. ಅದನ್ನು ಎಲ್ಲಾ ರಾಜ್ಯಗಳ ಜೊತೆ ಸಮಾಲೋಚಿಸುವ ಮೂಲಕ ಅಂತಿಮಗೊಳಿಸಿ ಕೇಂದ್ರ ಸರಕಾರಕ್ಕೆ. ಎಲ್ಲಾ ರಾಜ್ಯಗಳ ಪರವಾಗಿ ಸಲ್ಲಿಸಬೇಕು ಎಂದವರು ಒತ್ತಾಯಿಸಿದ್ದಾರೆ.

ಈ ಬಗೆಯ ಒಮ್ಮತದ ಮಾರ್ಗಸೂಚಿಗಳು, ಕೇಂದ್ರ ಸರಕಾರದ ಶಾಸನಬದ್ಧ ಸಂಸ್ಥೆಗಳಾದ ಎನ್ಸಿಇಆರ್ಟಿ (NCERT), ಯುಜಿಸಿ (UGC), ಎನ್ಸಿಟಿಇ (NCTE), ಸಿಬಿಎಸ್ಇ (CBSE), ನಾಕ್ (NAAC), ಎಐಸಿಟಿಇ (AICTE), ಎನ್ಐಒಎಸ್ (NIOS) ಮುಂತಾದ ರಾಷ್ಟ್ರೀಯ ಸಂಸ್ಥೆಗಳು ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ನೀತಿ, ನಿಯಮ ಮತ್ತು ಕಾನೂನುಗಳನ್ನು ರೂಪಿಸಲು ಸಹಾಯವಾಗುತ್ತದೆ. ಇಂಥಹ ಸ್ಪಷ್ಟ ಮಾರ್ಗಸೂಚಿ ಇಲ್ಲವಾದಲ್ಲಿ, ಈ ಬಗೆಯ ಸಮಾವೇಶಗಳು ಕೇವಲ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ರಾಜಕೀಯ ಕೆಸರೆರಚಾಟದ ಸಮಾವೇಶಗಳಾಗುತ್ತವೆಯೇ ಹೊರತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗುವುದಿಲ್ಲ ಎಂದವರು ಅಭಿಪ್ರಾಯಿಸಿದ್ದಾರೆ.

ಈ ಬಗೆಯ ಸಂಘರ್ಷಗಳು ಸ್ವಾತಂತ್ರ್ಯ ನಂತರ ನಡೆದುಕೊಂಡೇ ಬಂದಿವೆ. ಇದಕ್ಕೆ ಪೂರ್ಣ ವಿರಾಮ ಹಾಕುವ ಮೂಲಕ, ಪೂರ್ವ-ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಂಟಿ ಹಾಗೂ ಸ್ವತಂತ್ರ ರಚನಾತ್ಮಕ ಪಾತ್ರ ಏನಾಗಿರಬೇಕೆಂದು ತೀರ್ಮಾನಿಸುವ ಕಾಲ ಸನ್ನಿಹಿತವಾಗಿದೆ ಎಂದವರು ಅಭಿಪ್ರಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News