ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳ ಬೆಂಬಲ ಬೇಡ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2026-08-22 21:54 IST

ಬೆಂಗಳೂರು : ಯಾವುದೇ ರಾಜಕೀಯ ಪಕ್ಷಗಳು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಿಗೆ ಬೆಂಬಲಿಸಬಾರದು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಶನಿವಾರ ನಗರದ ಕನ್ಯಾಕುಮಾರಿ ಶಾಲೆಯ ವಾಸುದೇವ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಹಿರಿಯ ಪತ್ರಕರ್ತ ಹಾಗೂ ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಬೆಂಬಲಿಸಿ ನಡೆದ ‘ಸಮಾಲೋಚನಾ ಸಭೆ’ಯಲ್ಲಿ ಅವರು ಮಾತನಾಡಿದರು.

12 ವರ್ಷಗಳಲ್ಲಿ ಕಸಾಪ ಬೈಲಾ ತಿದ್ದುಪಡಿಯಿಂದ ಎಷ್ಟು ಹಾಳಾಗಿದೆ ಎಂದರೆ ಅಸಾಂಸ್ಕೃತಿಕ ವಾತಾವರಣ, ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ. ಅದಕ್ಕಾಗಿ ಕಸಾಪದಿಂದ ಅಮಾನತ್ತುಗೊಂಡಿರುವ ವ್ಯಕ್ತಿ(ಮಹೇಶ್ ಜೋಶಿ)ಅವರು ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ, ನಡವಳಿಕೆಯನ್ನು ವಿರೋಧಿಸಬೇಕು ಎಂದರು.

ಹೊರನಾಡು ಕನ್ನಡಿಗರು, ಹೊರ ದೇಶದ ಕನ್ನಡಿಗರಿಗೆ ವೇದಿಕೆಯಾಗಿರುವುದು ಕನ್ನಡ ಸಾಹಿತ್ಯ ಪರಿಷತ್. ಅದನ್ನು ಸಂರಕ್ಷಿಸಿಕೊಳ್ಳದ ಹೊರತು, ಅದರ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳದ ಹೊರತು ನಮ್ಮ ಸಾಂಸ್ಕೃತಿಕ ಎಚ್ಚರವನ್ನು ಉಳಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.

ಕನ್ನಡಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟುಕೊಂಡ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಒಮ್ಮತದ ಅಭಿಪ್ರಾಯದಿಂದ ಬೆಂಬಲಿಸಿ ಚುನಾವಣೆಗೆ ನಿಲ್ಲಿಸಿದ್ದೇವೆ. ಜಾಣಗೆರೆ ಅವರ ವಿರುದ್ಧ ಯಾರಾದರೂ ಚುನಾವಣೆಗೆ ಸ್ಪರ್ಧಿಸಿದರೆ ಅದು ಕನ್ನಡ ಮಾತೆಗೆ, ಕನ್ನಡಿಗರಿಗೆ ಮಾಡುವ ದ್ರೋಹ ಎಂದು ಹೇಳಿದರು.

ಲೇಖಕ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷರು ಎಲ್ಲರ ಠೇವಣಿಯನ್ನು ಮುರಿದು ಅಧ್ಯಕ್ಷನಾಗಿದ್ದೇನೆ ಎಂದು ಕೊಚ್ಚಿಕೊಳ್ಳುತ್ತಿದ್ದರು. ಅವರು ಯಾವ ಸಾಹಿತಿಗಳಿಗೂ, ಜನಸಾಮಾನ್ಯರಿಗೂ ಗೌರವ ಕೊಡಲಿಲ್ಲ. ಸಾಮಾನ್ಯರು ಕನ್ನಡ ಸಾಹಿತ್ಯ ಪರಿಷತ್‍ಗೆ ಹೋಗಲು ಸಾಧ್ಯವೇ ಆಗುತ್ತಿರಲಿಲ್ಲ. ಅಷ್ಟೊಂದು ದರ್ಪ, ದಬ್ಬಾಳಿಕೆ ಇತ್ತು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‍ನ ಅನೇಕ ಅಧ್ಯಕ್ಷರು ಯಾವುದೇ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೆ ಜಾಣಗೆರೆ ವೆಂಕಟರಾಮಯ್ಯ ಅವರು ಎಲ್ಲದಕ್ಕೂ ಸ್ಪಂಧಿಸುತ್ತಾರೆ. ಯಾಕೆಂದರೆ ಅವರು ನೆಲಮೂಲದಿಂದ ಬಂದವರು, ಜಾತ್ಯತೀತ ಪರಿಕಲ್ಪನೆ ಅವರಲ್ಲಿದೆ ಎಂದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಶಿವಕುಮಾರ್ ಮತ್ತಿತರರು ಹಾಜರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News