ರೈಲು ಮಾರ್ಗದ ವಿದ್ಯುತ್ ಎಳೆತ (ಟ್ರಾಕ್ಸನ್) ವ್ಯವಸ್ಥೆಯ ಉನ್ನತೀಕರಣಕ್ಕೆ ಅನುಮೋದನೆ : ವಿ.ಸೋಮಣ್ಣ
ಬೆಂಗಳೂರು : ರೈಲು ಮಾರ್ಗದ ವಿದ್ಯುತ್ ಎಳೆತ (ಟ್ರಾಕ್ಸನ್) ವ್ಯವಸ್ಥೆಯ ಉನ್ನತೀಕರಣಕ್ಕೆ ಭಾರತೀಯ ರೇಲ್ವೆಯಿಂದ ಅನುಮೋದನೆ ಕೋಡಿಸಲಾಗಿದೆ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ಅತ್ಯಂತ ಜನನಿಬಿಡ ರೇಲ್ವೆ ಕಾರಿಡಾರ್ಗಳಲ್ಲಿ ಒಂದಾದ ಬೆಂಗಳೂರು-ತುಮಕೂರು ರೇಲ್ವೆ ಮಾರ್ಗದಲ್ಲಿ ರೈಲು ಸಾಮಥ್ರ್ಯ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಟ್ರಾಕ್ಸನ್ ವ್ಯವಸ್ಥೆಯನ್ನು 162.57 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಯೋಜನೆಯಿಂದ ಬೆಂಗಳೂರು-ತುಮಕೂರು ರೇಲ್ವೆ ಮಾರ್ಗದಲ್ಲಿ 120 ಟ್ರಾಕ್ ಕಿ.ಮೀ ವ್ಯಾಪ್ತಿಯಲ್ಲಿ ಪ್ರಸ್ತುತ 1x25 ಕೆವಿ ವಿದ್ಯುತ್ ಎಳೆತ ವ್ಯಾಪ್ತಿಯಲ್ಲಿ 2x25 ಕೆವಿ ವಿದ್ಯತ್ ಎಳೆತ ವ್ಯವಸ್ಥೆಯಾಗಿ ಪರಿವರ್ತಿಸಲಾಗುವುದು. ಬೆಂಗಳೂರು-ತುಮಕೂರು ಭಾಗವು ಹೆಚ್ಚಿನ ಬಳಕೆಯಲ್ಲಿರುವ ಮಾರ್ಗವಾಗಿದ್ದು ಪುಣೆ, ಹುಬ್ಬಳ್ಳಿ, ಚಿಕ್ಕಜಾಜೂರು, ಬೀರೂರು-ತುಮಕೂರು-ಬೆಂಗಳೂರು-ಸೇಲಂ-ಕನ್ಯಾಕುಮಾರಿ ಕಾರಿಡಾರ್ ಉದ್ದಕ್ಕೂ ಇರುವ ಪ್ರಮುಖ ಆರ್ಥಿಕ ಮತ್ತು ಕೈಗಾರಿಕೆ ಕೇಂದ್ರಗಳನ್ನು ಸಂಪರ್ಕಿಸುತ್ತದೆ ಎಂದು ಸೋಮಣ್ಣ ಹೇಳಿದ್ದಾರೆ.
2x25 ಟ್ರಾಕ್ಸನ್ ವ್ಯವಸ್ಥೆಯನ್ನು ಅಳವಡಿಸುವುದರಿಂದ ರೈಲು ಕಾರ್ಯಚರಣೆಗಾಗಿ ವಿದ್ಯುತ್ ಪೂರೈಕೆಯಲ್ಲಿ ಬಲವರ್ಧನೆ ದೊರಯಲ್ಲಿದ್ದು, ಹೆಚ್ಚಿನ ಪ್ರಮಾಣದ ಸಂಚಾರ ದಟ್ಟಣೆಯನ್ನು ಹೆಚ್ಚು ದಕ್ಷತೆಯಿಂದ ನಿಭಾಯಿಸಲು ಅನುವು ಮಾಡಿಕೊಡಲಿದೆ. ಈ ಯೋಜನೆಯು ಬೆಂಗಳೂರು ಮಹಾನಗರ ಪ್ರದೇಶ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಸೇವೆ ಸಲ್ಲಿಸುವ ಪ್ರಮುಖ ರೈಲು ಮಾರ್ಗದ ದಟ್ಟಣೆ ಕಡಿಮೆ ಮಾಡಲು ಅವಕಾಶವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಯೋಜನೆಯನ್ನು ತುಮಕೂರಿನ ಅಭಿವೃದ್ದಿಗಾಗಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ತುಮಕೂರಿನ ಜನತೆಯ ಪರವಾಗಿ ಸೋಮಣ್ಣ ಅಭಿನಂದಿಸಿದ್ದಾರೆ.