×
Ad

ಗಂಗಾವತಿ–ಕಂಪ್ಲಿ ನಡುವೆ ತುಂಗಭದ್ರಾ ನದಿಗೆ ನೂತನ ಸೇತುವೆ: ಮಣ್ಣಿನ ಪರೀಕ್ಷೆ ಆರಂಭ

Update: 2026-02-04 00:52 IST

ಬಳ್ಳಾರಿ : ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಗಂಗಾವತಿ–ಕಂಪ್ಲಿ ಸಂಪರ್ಕಿಸುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ಸೇತುವೆ ಕಾಮಗಾರಿಗಾಗಿ ಮಣ್ಣಿನ ಪರೀಕ್ಷೆ (ಸಾಯಿಲ್ ಟೆಸ್ಟಿಂಗ್) ಪ್ರಕ್ರಿಯೆ ಆರಂಭವಾಗಿದೆ.

ಪ್ರಸ್ತುತ ಬಳಕೆಯಲ್ಲಿರುವ ಹಳೆಯ ಸೇತುವೆ ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು, ತುಂಗಭದ್ರಾ ಜಲಾಶಯದಿಂದ 1 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚು ನೀರು ಬಿಡುಗಡೆಗೊಂಡಾಗಲೆಲ್ಲ ಮುಳುಗಡೆಯಾಗುತ್ತದೆ. ಪರಿಣಾಮವಾಗಿ ಗಂಗಾವತಿ–ಕಂಪ್ಲಿ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು.

ನೂತನ ಸೇತುವೆ ನಿರ್ಮಾಣಕ್ಕಾಗಿ ಅಂದಾಜು ₹110 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಲೋಕೋಪಯೋಗಿ ಇಲಾಖೆಗೆ ಸಲ್ಲಿಸಲಾಗಿದೆ.

ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಆರ್ (ವಿವರವಾದ ಯೋಜನಾ ವರದಿ) ಸಿದ್ಧಪಡಿಸುವ ಪ್ರಕ್ರಿಯೆಯ ಭಾಗವಾಗಿ ಮಣ್ಣಿನ ಪರೀಕ್ಷೆ ಹಾಗೂ ಸರ್ವೆ ಕಾರ್ಯಗಳು ಆರಂಭಗೊಂಡಿವೆ.

ಹೊಸ ಸೇತುವೆಯನ್ನು ಹಳೆಯ ಸೇತುವೆಗಿಂತ ಸುಮಾರು 42 ಅಡಿ ಹೆಚ್ಚು ಎತ್ತರದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದು, ಇದರಿಂದ ಮಳೆಗಾಲದಲ್ಲಿ ಸೇತುವೆ ಮುಳುಗಡೆಯಾಗದೇ ನಿರಂತರ ಸಂಚಾರ ಸಾಧ್ಯವಾಗಲಿದೆ.

ಈ ಮಹತ್ವದ ಯೋಜನೆಯ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.

ಸ್ಥಳೀಯ ಶಾಸಕ ಜೆ.ಎನ್. ಗಣೇಶ ಅವರು ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದು, ಇದರ ಫಲವಾಗಿ ಕ್ಷೇತ್ರದ ಜನರ ಬಹುದಿನಗಳ ಕನಸು ನನಸಾಗುವ ಹಂತಕ್ಕೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News