‘ಮೋದಿ, ಅಮಿತ್ ಶಾ ಬಾಕಿ ಹೈ!, ಇಂಕ್ವಿಲಾಬ್ ಝಿಂದಾಬಾದ್...’
► ಫ್ರೀಡಂ ಪಾರ್ಕ್ನಲ್ಲಿ ಘೋಷಣೆಗಳೊಂದಿಗೆ ಮೊಳಗಿದ ವಿಜಯೋತ್ಸವ ► ಹೋರಾಟಕ್ಕೆ ಅಂಬೇಡ್ಕರ್, ಗಾಂಧಿ, ಭಗತ್ ಸಿಂಗ್ ಪ್ರೇರಣೆಯ ಕಥೆ ಬಿಚ್ಚಿಟ್ಟ ‘ಜೆನ್ ಝಿಗಳು’
ಬೆಂಗಳೂರು : ‘ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದಾರೆ, ಈಗ ಮೋದಿ ಮತ್ತು ಅಮಿತ್ ಶಾ ಬಾಕಿ ಇದ್ದಾರೆ(ಮೋದಿ, ಅಮಿತ್ ಶಾ ಬಾಕಿ ಹೈ), ಮಣಿಪುರ ಆಜಾದಿ, ಫೆಲಸ್ತೀನ್ ಆಜಾದಿ, ಇಂಕ್ವಿಲಾಬ್ ಝಿಂದಾಬಾದ್, ಜೈ ಭೀಮ್, ಜೈ ಹಿಂದ್, ವಂದೇ ಮಾತರಂ...’ ಹೀಗೆ ಹತ್ತೂ ಹಲವು ಘೋಷಣೆಗಳು ಒಕ್ಕೊರಲಿನಿಂದ ಕೇಳಿಬಂದಿದ್ದು ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರವಿವಾರ ನಡೆದ ಜೆನ್ ಝೀಗಳ ವಿಜಯೋತ್ಸವದಲ್ಲಿ.
‘ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆದ ಲೋಪದೋಷಗಳಿಗೆ ಸಂಪೂರ್ಣ ಸರಕಾರವೇ ಹೊಣೆ ಹೊರಬೇಕು. ನಮ್ಮ ಹೋರಾಟ ಇಷ್ಟಕ್ಕೇ ನಿಲ್ಲುವುದಿಲ್ಲ. ಈ ಭ್ರಷ್ಟ ಸರಕಾರವನ್ನು ಬುಡಮೇಲು ಮಾಡುವುವವರೆಗೂ ಹೋರಾಟ ನಿರಂತರವಾಗಲಿದೆ. ನಮ್ಮ ಹೋರಾಟದಲ್ಲಿ ‘ನೀನು ಯಾರು?, ನಿನ್ನದು ಯಾವ ಧರ್ಮ’ ಎಂಬುದರ ಕೋಮು ದ್ವೇಷಗಳಿಗೆ ಜಾಗವಿಲ್ಲ. ಇಲ್ಲಿ ನಿನಗೆ ಅನ್ಯಾಯವಾಗಿದೆಯೇ, ಸರ್ವ ಸಮಾನ ಹಕ್ಕುಗಳು ಸಿಕ್ಕಿವೆಯೇ ಎಂಬುದಷ್ಟೇ ಮುಖ್ಯವಾಗುತ್ತದೆ. ಯಾವುದೇ ಜಾತಿ, ಧರ್ಮ, ಮೇಲು, ಕೀಳಿನ ವ್ಯತ್ಯಾಸಗಳಿಲ್ಲ. ದೇಶದಲ್ಲಿ ಬದಲಾವಣೆ ತರಲು ನಾವೆಲ್ಲ ಬೀದಿಗಿಳಿದಿದ್ದೇವೆ’ ಎನ್ನುವುದು ಅಲ್ಲಿ ನೆರೆದಿದ್ದ ಸಾವಿರಾರು ಯುವಮನಸುಗಳ ದಿಟ್ಟತನದ ಮಾತಾಗಿದ್ದವು.
‘ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸ್ಥಾಪಿಸಿಕೊಂಡು ಅದರ ಮುಖ್ಯಸ್ಥ ಅಭಿಜಿತ್ ದೀಪ್ಕೆ ಅವರು ನಮ್ಮ ಪರವಾಗಿ ಹೋರಾಟಕ್ಕೆ ಕರೆ ಕೊಟ್ಟಾಗ ಅವರ ಉದ್ದೇಶ ಸರಿಯೆನ್ನಿಸಿತ್ತು. ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರನ್ನು ಖಂಡಿಸಲು ಇದು ಸೂಕ್ತ ಸಮಯ ಎಂದು ನಾನು ಹೋರಾಟಕ್ಕೆ ಬೆಂಬಲಿಸಿದೆ. ನನಗೆ ಅಂಬೇಡ್ಕರ್ ಮತ್ತು ಗಾಂಧಿ, ಭಗತ್ ಸಿಂಗ್ ಅವರೇ ಪ್ರೇರಣೆ’ ಎಂದು ವಿದ್ಯಾರ್ಥಿ ಶರಣ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
‘ಹಿಂದೂ-ಮುಸ್ಲಿಮ್, ಬಾಂಗ್ಲಾದೇಶ-ಪಾಕಿಸ್ತಾನ ಎಂದು ಹೇಳಿಕೊಂಡು ಆಡಳಿತ ನಡೆಸುತ್ತಿದ್ದೀರಿ. ದೇಶದ ಜಿಡಿಪಿ, ಆರ್ಥಿಕ ಪರಿಸ್ಥಿತಿ ಇಳಿಮುಖವಾಗುತ್ತಿದೆ. ವಿದೇಶಾಂಗ ನೀತಿ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಮುಖ್ಯ ವಿಷಯಗಳನ್ನು ಮರೆಮಾಚಿ ಧರ್ಮದ ಹೆಸರಿನಲ್ಲಿ ನಮ್ಮನ್ನು ವಿಭಜಿಸಬೇಡಿ, ನಾವು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ. ನಿಮ್ಮ ದುರಾಡಳಿತವನ್ನು ಅಂತ್ಯವಾಡಲು ನಾವೀಗ ಹೋರಾಟಕ್ಕೆ ಬಂದಿದ್ದೇವೆ’ ಎಂದು ವಿದ್ಯಾರ್ಥಿನಿ ವಂದನಾ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಈ ವಿಜಯೋತ್ಸವದಲ್ಲಿ ಕೇವಲ ಬೆಂಗಳೂರಿನಿಂದಷ್ಟೇ ಅಲ್ಲದೆ, ಮಣಿಪುರ, ಜಾರ್ಖಂಡ್, ರಾಜಸ್ಥಾನ, ಉತ್ತರಪ್ರದೇಶ, ಹೊಸದಿಲ್ಲಿ, ಕೇರಳ, ತಮಿಳುನಾಡು, ಮಧ್ಯಪ್ರದೇಶ, ಅಸ್ಸಾಂ ಸೇರಿದಂತೆ ದೇಶದ ವಿವಿಧ ರಾಜ್ಯ, ಜಿಲ್ಲೆಗಳಿಂದ ಸಾವಿರಾರು ಯುವಕ-ಯುವತಿಯರು ಪಾಲ್ಗೊಂಡಿದ್ದರು. ಈ ವೇಳೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಾ ಗಾಂಧಿ, ಭಗತ್ ಸಿಂಗ್, ರೋಹಿತ್ ವೇಮುಲಾ ಅವರ ಭಾವಚಿತ್ರಗಳು ಹಾಗೂ ಸಂವಿಧಾನದ ಪ್ರತಿಗಳನ್ನು ಎತ್ತಿಹಿಡಿದು ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಹೋರಾಟಕ್ಕೆ ಸಂಬಂಧಿಸಿದ ಪ್ರದರ್ಶನಗಳು ಜರುಗಿದವು, ಸ್ಟ್ಯಾಂಡ್ಅಪ್ ಕಾಮಿಡಿಯನ್ಗಳು ಕೇಂದ್ರ ಬಿಜೆಪಿ ಸರಕಾರವನ್ನು ಅಣಕಿಸಿ ಯುವಜನತೆಯನ್ನು ರಂಜಿಸಿದರು.
ಇನ್ನು, ಈ ವಿಜಯೋತ್ಸವದಲ್ಲಿ ಭಾಗವಹಿಸಿದ್ದ ಪ್ರಸಿದ್ಧ ಭಾರತೀಯ ಇತಿಹಾಸಕಾರ, ಲೇಖಕ ರಾಮಚಂದ್ರ ಗುಹಾ ಮಾತನಾಡಿ, ‘ಜೆನ್ ಝೀ ಯುಗದ ಈ ಚಳವಳಿಯಲ್ಲಿ ಕ್ರಾಂತಿಕಾರಿಗಳು ಮತ್ತು ಸತ್ಯಾಗ್ರಹಿಗಳು- ಅಂದರೆ ಗಾಂಧೀಜಿ ಮತ್ತು ಭಗತ್ ಸಿಂಗ್ ಅವರ ಪರಂಪರೆಗಳು ಒಗ್ಗಟ್ಟಾಗಿತ್ತು. ಹೋರಾಟದುದ್ದಕ್ಕೂ ನೀವು ಅಂಬೇಡ್ಕರ್ ಅವರನ್ನು ಕಂಡಿದ್ದೀರಿ, ಗಾಂಧೀಜಿಯವರನ್ನೂ ಕಂಡಿದ್ದೀರಿ, ಭಗತ್ ಸಿಂಗ್ ಅವರನ್ನು ಕಂಡೀದ್ದೀರಿ’ ಎಂದು ತಿಳಿಸಿದರು.
‘ಗಾಂಧೀಜಿ ಮತ್ತು ಭಗತ್ ಸಿಂಗ್ ಅವರ ನಡುವೆ ಭಿನ್ನಾಭಿಪ್ರಾಯಗಳಿದ್ದಿರಬಹುದು. ಹಾಗೆಯೇ ನೆಹರೂ ಮತ್ತು ಅಂಬೇಡ್ಕರ್ ನಡುವೆ ಭಿನ್ನಾಭಿಪ್ರಾಯಗಳಿದ್ದಿರಬಹುದು. ಅವರವರ ನಡುವಿನ ವ್ಯತ್ಯಾಸಗಳು ಏನೇ ಇದ್ದರೂ, ಇನ್ನೊಂದು ಕಡೆ ಈ ಬಹುಸಂಖ್ಯಾತವಾದಿ ಹಾಗೂ ಸರ್ವಾಧಿಕಾರಿ ಆಡಳಿತ ವ್ಯವಸ್ಥೆಯ ನಡುವಿನ ವ್ಯತ್ಯಾಸಗಳಿಗೆ ಹೋಲಿಸಿದರೆ ಅವು ತೀರಾ ಸಣ್ಣವು’ ಎಂದು ರಾಮಚಂದ್ರ ಗುಹಾ ಹೇಳಿದರು.
‘ಗಾಂಧಿ ಮತ್ತು ಅಂಬೇಡ್ಕರ್ ಅಥವಾ ಗಾಂಧಿ ಮತ್ತು ಭಗತ್ ಸಿಂಗ್ ಅವರಿಂದ ಒಂದಷ್ಟು ವಿಷಯಗಳನ್ನು ಅಳವಡಿಸಿಕೊಳ್ಳಬಹುದು. ಆದರೆ, ಇಂದು ಯಾರು ನಮ್ಮ ಪರವಾಗಿದ್ದಾರೆ ಮತ್ತು ಯಾರು ವಿರೋಧಿಗಳ ಪರವಾಗಿದ್ದಾರೆ ಎಂಬುದನ್ನು ನಾವು ಗಮನಿಸಬೇಕು. ಏಕೆಂದರೆ ನಮ್ಮ ಇನ್ನೊಂದು ಬದಿಯಲ್ಲಿ ಗೋಳ್ವಲ್ಕರ್, ಸಾವರ್ಕರ್, ಹಿಂದುತ್ವ ಮತ್ತು ನಮ್ಮ ಕ್ಷುಲ್ಲಕ ಮನಸ್ಥಿತಿಗಳು ನಿಂತಿವೆ’ ಎಂದು ರಾಮಚಂದ್ರ ಗುಹಾ ಯುವಜನತೆಯನ್ನು ಎಚ್ಚರಿಸಿದರು.
‘ಯುವಜನರೇ, ನಿಮ್ಮ ಅಭಿಪ್ರಾಯಗಳನ್ನು ಮಂಡಿಸುವಾಗ ಅತಿಯಾದ ಉಗ್ರ ನಿಲುವನ್ನು ತಾಳದಿರಲು ಕಲಿಯಿರಿ, ನಿಮ್ಮ ಪರವಾಗಿ ಯಾರು ಇದ್ದಾರೆ ಎಂಬುದನ್ನು ಹಾಗೂ ಈ ಚಳವಳಿಯ ಮೂಲ ಆಶಯವನ್ನು ಅರಿತುಕೊಳ್ಳಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ’ ಎಂದು ರಾಮಚಂದ್ರ ಗುಹಾ ತಿಳಿಸಿದರು.
ಎಲ್ಲರನ್ನೂ ಒಳಗೊಳ್ಳುವ ಗುಣ, ಬಿಜೆಪಿ ಬೆಂಬಲಿತರ ಮಕ್ಕಳು ಈ ಚಳವಳಿಯ ಅದ್ಭುತ ವಿಷಯಗಳು
ಈ ಹೋರಾಟದ ಕುರಿತಾದ ಎರಡು ಅದ್ಭುತ ವಿಷಯಗಳನ್ನು ನಾನು ಹೇಳಬಯಸುತ್ತೇನೆ. ಮೊದಲನೆಯದಾಗಿ, ಎಲ್ಲರನ್ನೂ ಒಳಗೊಳ್ಳುವ ಗುಣ. ಇನ್ನೊಂದು ಅತ್ಯಂತ ಗಮನಾರ್ಹವಾದ ವಿಷಯವೆಂದರೆ ವರದಿಗಳ ಪ್ರಕಾರ, ಬಿಜೆಪಿ ಬೆಂಬಲಿತ ಪೋಷಕರ ಮಕ್ಕಳು ಕೂಡ ನಿಮ್ಮ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂಬುದು. ಕೊನೆಯದಾಗಿ, ಈ ಹೋರಾಟವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ಮುಂದಿನ ಬಾರಿ ನಾವು ಭೇಟಿಯಾಗೋಣ.
-ರಾಮಚಂದ್ರ ಗುಹಾ, ಲೇಖಕ