14 ಕೆರೆಗಳಿಗೆ ನೀರು ತುಂಬಿಸುವುದು ಸುಧಾಕರ್ ಕನಸು : ಡಿ.ಕೆ.ಶಿವಕುಮಾರ್
‘ಹಿರಿಯೂರು ನನ್ನ ಹಾಗೂ ಸಿದ್ದರಾಮಯ್ಯರ ಕ್ಷೇತ್ರ’
ಚಿತ್ರದುರ್ಗ : ‘ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರವು ಡಿ.ಸುಧಾಕರ್ ಕ್ಷೇತ್ರ ಮಾತ್ರವಲ್ಲ, ಇದು ನನ್ನ ಹಾಗೂ ಸಿದ್ದರಾಮಯ್ಯನವರ ಕ್ಷೇತ್ರ. ಸುಧಾಕರ್ ಚಿಂತನೆ ಹಾಗೂ ಅಶೋತ್ತರಗಳಿಗೆ ಸ್ಪಂದಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರವಿವಾರ ಜಿಲ್ಲೆಯ ಹಿರಿಯೂರು ಪಟ್ಟಣದ ನೆಹರೂ ಮೈದಾನದಲ್ಲಿ ನಡೆದ ಡಿ.ಸುಧಾಕರ್ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಧಾಕರ್ ಕೊಡುಗೆಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ. ರಾಜ್ಯದ ಜನ ಕಾಂಗ್ರೆಸ್ನ ಮೇಲೆ ವಿಶ್ವಾಸವನ್ನಿಟ್ಟಿದ್ದು, ನಾವು ಎಂದೂ ಜಾತಿಯ ಮೇಲೆ ರಾಜಕಾರಣ ಮಾಡುವುದು ಬೇಡ. ನೀತಿಯ ಮೇಲೆ ರಾಜಕಾರಣ ಮಾಡೋಣ ಎಂದರು.
ಜಿಲ್ಲೆಯ ಜನರ ಮತ್ತು ಸುಧಾಕರ್ ನಡುವಿನ ಅವಿನಾಭಾವ ಸಂಬಂಧದಿಂದ ಹಲವು ಬಾರಿ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ. ಪಕ್ಷದಲ್ಲಿ ಎಲ್ಲರೂ ಸಮಾನರು, ವ್ಯಕ್ತಿಗಳು ಮುಖ್ಯರಲ್ಲ. ಪಕ್ಷದ ಸಿದ್ಧಾಂತ ಮುಖ್ಯ. ಸುಧಾಕರ್ ಇಲ್ಲದ ನೋವಿನ ಸಂದರ್ಭದಲ್ಲಿ ಆ ಕುಟುಂಬದ ಜೊತೆಗೆ ನಾವು ನಿಲ್ಲುತ್ತೇವೆ. ನಾವೆಲ್ಲರೂ ಒಟ್ಟಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದು ಅವರು ಕರೆ ನೀಡಿದರು.
ಕನಸು-ನನಸು: ಹಿರಿಯೂರು ಕ್ಷೇತ್ರದ 14 ಕೆರೆಗಳಿಗೆ ನೀರು ತುಂಬಿಸಬೇಕೆನ್ನುವುದು ಸುಧಾಕರ್ ಕನಸಾಗಿತ್ತು. ಈ ಯೋಜನೆ ಬಗ್ಗೆ ನನ್ನ ಬಳಿ ಅವರು ಕೊನೆಯದಾಗಿ ಮಾತು ತೆಗೆದುಕೊಂಡಿದ್ದರು. ಆ ಮಾತನ್ನು ಉಳಿಸಿಕೊಳ್ಳಲು ನಾವು ಸಂಪುಟದಲ್ಲಿ 244ಕೋಟಿ ರೂ.ಮೊತ್ತದ ಯೋಜನೆಗೆ ಒಪ್ಪಿಗೆ ನೀಡಿದ್ದೇವೆ ಎಂದು ಡಿ.ಕೆಶಿವಕುಮಾರ್ ತಿಳಿಸಿದರು.
ಅಮ್ಮನ ನೆನಪು ಪ್ರೀತಿಯ ಮೂಲಕ, ದೇವರ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ. ಸುಧಾಕರ್ ನೆನಪು ಮೋಕ್ಷಕ್ಕೆ ಮೂಲ. ಸುಧಾಕರ್ ಕೇವಲ ಮಂತ್ರಿಯಲ್ಲ, ನನ್ನ ಆತ್ಮೀಯ ಸ್ನೇಹಿತ, ಕುಟುಂಬದ ಸದಸ್ಯ. ಡಿ ಸುಧಾಕರ್ಗೆ ನುಡಿ ನಮನ ಸಲ್ಲಿಸಲು ಬಯಸುತ್ತೇವೆ ಎಂದರು.