ಆರ್ಯವೈಶ್ಯ ಸಮುದಾಯದ ಬೇಡಿಕೆ ಈಡೇರಿಸುತ್ತೇನೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ಹದಿನೈದು ದಿನಗಳಲ್ಲಿ ಆರ್ಯವೈಶ್ಯ ಸಮುದಾಯದ ಎರಡು ಬೇಡಿಕೆ ಈಡೇರಿಸುತ್ತೇನೆ. ಆದರೆ, ಮುಂಬರಲಿರುವ 2028ಕ್ಕೆ ನೀವು ನಮ್ಮ ಪಕ್ಷಕ್ಕೆ ಮತ ಹಾಕುವ ಮೂಲಕ ಮತ್ತೆ ನನ್ನನ್ನು ಸಿಎಂ ಆಗಿ ಅಧಿಕಾರಕ್ಕೆ ತರುವುದು ನಿಮ್ಮ ಕೆಲಸ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರವಿವಾರ ನಗರದ ಫ್ರೀಡ್ಂ ಪಾರ್ಕ್ನಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಆಯೋಜಿಸಿದ್ದ ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್ ಪ್ರಚಾರ ಅಭಿಯಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ಸಮಸ್ಯೆಗೆ ಸ್ವಾತಂತ್ರ್ಯ ಕೊಡಲು ನಾನು ಬದ್ಧನಾಗಿದ್ದೇನೆ. ನನಗೆ ಜೈಕಾರ ಬೇಡ ಮತ ಹಾಕಿ ಎಂದರು.
ಬನಶಂಕರಿಯ ಜಾಗದ ಬೇಡಿಕೆ ಹಾಗೂ ನೆಲಮಂಗಲದ ದಾಬಸ್ಪೇಟೆಯಲ್ಲಿ ವಿದ್ಯಾಸಂಸ್ಥೆಗೆ ಎದುರಾಗಿರುವ ಸಮಸ್ಯೆಗಳ ಕುರಿತು ಸಮುದಾಯದ ಮುಖಂಡರು ಪ್ರಸ್ತಾಪಿಸಿದ್ದಾರೆ. ಈ ಸಮಸ್ಯೆಗಳಿಗೆ ಮುಂದಿನ 15 ದಿನಗಳಿಂದ ಒಂದು ತಿಂಗಳೊಳಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಸುಧೀಂದ್ರ ಮಾತನಾಡಿ, ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ಡಿಸೆಂಬರ್ 25, 26, 27ರ ವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್ ನಡೆಯಲಿದೆ. ಕ್ರಿಯಾಶೀಲ ಯುವ ಉದ್ದಿಮೆದಾರರನ್ನು ಉತ್ತೇಜಿಸುವುದು ಈ ಸಮಿಟ್ನ ಮುಖ್ಯ ಉದ್ದೇಶ. ಜಾಗತೀಕ ವ್ಯಾಪಾರ, ವಹಿವಾಟುಗಳಲ್ಲಿ ಇಂದಿನ ಯುವ ಪೀಳಿಗೆಯನ್ನು ತೊಡಗಿಸಲು ಪ್ರೇರೇಪಿಸುವುದು ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಆಂಧ್ರ ಸರಕಾರದ ವಾಣಿಜ್ಯ, ಕೈಗಾರಿಕೆ ಮತ್ತು ಆಹಾರ ಸಂಸ್ಕರಣಾ ಸಚಿವ ಟಿ.ಜಿ. ಭರತ್, ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ರಾಜಗೋಪಾಲ್ ಶ್ರೀರಾಮ್ ತಾತಯ್ಯ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ರಾಮಪ್ರಸಾದ್, ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್, ಪ್ರಧಾನ ಕಾರ್ಯದರ್ಶಿ ಕೆ.ಆರ್.ಕೃಷ್ಣ, ಖಜಾಂಚಿ ಎನ್.ಎಸ್. ಶ್ರೀನಿವಾಸ ಮೂರ್ತಿ, ಹನುಮಂತಯ್ಯ, ಎ.ಆರ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.