×
Ad

ನಿಯಮಬಾಹಿರ ‘ಅರ್ಹತಾ ಪ್ರಮಾಣಪತ್ರ’ ನೀಡಿದ ಆರೋಪ: ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅಮಾನತು

Update: 2026-01-22 00:36 IST

ಬೆಂಗಳೂರು: ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಆಹಮ್ಮದ್ ಅವರು ಗುಜರಾತ್ ರಾಜ್ಯದ ವಾಹನಗಳಿಗೆ ನಿಯಮಬಾಹಿರವಾಗಿ ಅರ್ಹತಾ ಪ್ರಮಾಣಪತ್ರ(ಫಿಟ್ನೆಸ್ ಸರ್ಟಿಫಿಕೇಟ್) ನೀಡಿ ಕರ್ತವ್ಯ ಲೋಪ ಎಸಗಿರುವ ಆರೋಪದಲ್ಲಿ ಅವರನ್ನು ಅಮಾನತು ಮಾಡಿ, ಸಾರಿಗೆ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಗುಜರಾತ್ ರಾಜ್ಯದ ಸಾರಿಗೆ ಕಚೇರಿಯ ಇ-ಡಿಟೆಕ್ಷನ್ ತಂಡವು ವಾಹನ ಇ-ಡಿಟೆಕ್ಷನ್ ಪೋರ್ಟಲ್‍ನಲ್ಲ್ಲಿ ಲಭ್ಯವಿರುವ ಡೇಟಾವನ್ನು ಪರಿಶೀಲಿಸಿ 41 ವಾಹನಗಳನ್ನು ಕರ್ನಾಟಕ ರಾಜ್ಯದ ಆರ್‍ಟಿಒ ಕಚೇರಿಗಳಲ್ಲಿ ತಪಾಸಣೆ ಮಾಡಿ ನಮೂನೆ-38(ಎ) ಅರ್ಹತಾ ಪ್ರಮಾಣಪತ್ರ ನೀಡಿದ ನಂತರ, ಅದೇ ದಿನ ಗುಜರಾತ್ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಸದರಿ ವಾಹನಗಳು ಹಾದುಹೋಗಿವೆ ಎಂದು ಹಾಗೂ ಅವುಗಳನ್ನು ನಿಸಾರ್ ಅಹಮದ್ ಇವರು ಅನುಮೋದಿಸಿರುವುದಾಗಿ ಗುಜರಾತ್‍ನ ಗಾಂಧಿನಗರ ಸಾರಿಗೆ ಆಯುಕ್ತರ ಕಚೇರಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಈ ವಿಷಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ ಸಾರಿಗೆ ಆಯುಕ್ತರಿಗೆ ಕ್ರಮಕೈಗೊಳ್ಳಲು ಸೂಚಿಸಿದ್ದರು. ಅದರಂತೆ ಸಾರಿಗೆ ಆಯುಕ್ತರು ಬೆಂಗಳೂರು ನಗರ ವಿಭಾಗದ ಜಂಟಿ ಸಾರಿಗೆ ಆಯುಕ್ತರಿಗೆ ವರದಿ ನೀಡಲು ಸೂಚಿಸಿದ್ದು, ಸದರಿ ವರದಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅವರು ವಾಹನಗಳಿಗೆ ನಮೂನೆ-38(ಎ)ರಲ್ಲಿ ಅರ್ಹತಾ ಪತ್ರ ನವೀಕರಣ ಮಾಡಿರುವುದಾಗಿ ಇಲಾಖೆ ವಾಹನ್ 4.0 ತಂತ್ರಾಂಶದನ್ವಯ ದೃಢಪಟ್ಟಿರುತ್ತದೆ. ಹಾಗೂ ಸದರಿ 41 ವಾಹನಗಳು ಅದೇ ದಿನ ಅಂದರೆ ತಪಾಸಣೆ ನಡೆಸಿದ ದಿನಾಂಕದಂದು ಗುಜರಾತ್ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಹಾದುಹೋಗಿರುವುದು ಸಹ ಕಂಡುಬಂದಿದೆ.

ವಾಹನಗಳನ್ನು ಭೌತಿಕವಾಗಿ ಪರಿಶೀಲನೆ ಮಾಡದೇ ನಮೂನೆ-38(ಎ)ನ್ನು ನಿಯಮ ಬಾಹಿರವಾಗಿ ಅನುಮೋದಿಸಿರುವುದು ಕಂಡುಬಂದಿದೆ. ಇದರಿಂದಾಗಿ ಮೋಟಾರು ವಾಹನಗಳ ಕಾಯ್ದೆ ಮತ್ತು ನಿಯಮಗಳನ್ನು ಉಲಂಘಿಸಿದ್ದು, ವಾಹನಗಳನ್ನು ಭೌತಿಕವಾಗಿ ಪರಿಶೀಲನೆ ಮಾಡದೇ ಅನುಮೋದಿಸುವ ಮೂಲಕ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News