ಫಲಿತಾಂಶ ಸುಧಾರಣೆಗೆ ಮನೆ ಮನೆಗೆ ಭೇಟಿ ಕಾರ್ಯಕ್ರಮ ಫಲಪ್ರದವಾಗುವುದಿಲ್ಲ : ಸುನಿಲ್ ಸಂಗಮ್
ಬೀದರ್ : 2024-25ನೇ ಸಾಲಿನಲ್ಲಿ ಜಿಲ್ಲೆಯ ಗ್ರಾಮೀಣ ಭಾಗಗಳ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ತೃಪ್ತಿಕರವಾಗಿಲ್ಲವೆಂಬ ಹಿನ್ನೆಲೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮಾರ್ಗದರ್ಶನ ನೀಡುವ ಅಭಿಯಾನದಿಂದ ಯಾವುದೇ ಫಲಪ್ರದವಾಗುವುದಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಯ ಜಿಲ್ಲಾ ಸಂಚಾಲಕ ಸುನಿಲ್ ಸಂಗಮ್ ಅವರು ಪ್ರಕಟಣೆ ಮೂಲಕ ಅಭಿಯಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ತೃಪ್ತಿಕರವಾಗಿಲ್ಲವೆಂಬ ಹಿನ್ನೆಲೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮಾರ್ಗದರ್ಶನ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಬದೋಲೆ ಅವರು ತಿಳಿಸಿದ್ದಾರೆ. ಆದರೆ ಈ ಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಮಿತಿಯಿಂದ ವಿರೋಧವಿದೆ. ಕಾರಣ ಪರೀಕ್ಷೆಗಳು ಸಮೀಪಿಸಿರುವ ಈ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡುವ ಮೂಲಕ ಫಲಿತಾಂಶ ಸುಧಾರಣೆ ಸಾಧ್ಯವಿಲ್ಲ.ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಗುಣಮಟ್ಟ ಹೆಚ್ಚಿಸಲು ದೀರ್ಘಕಾಲಿಕ ಯೋಜನೆ ರೂಪಿಸಿ ಕನಿಷ್ಠ 5ರಿಂದ 6 ತಿಂಗಳುಗಳ ಮುಂಚಿತವಾಗಿಯೇ ಇಂತಹ ಕಾರ್ಯಕ್ರಮಗಳು ಜಾರಿಗೆ ತರಬೇಕಾಗಿತ್ತು. ಇದೀಗ ಪರೀಕ್ಷೆಯ ಅತೀ ಸಮೀಪದಲ್ಲಿ ಇಂತಹ ಅಭಿಯಾನ ಕೈಗೊಳ್ಳಲಾಗುತ್ತಿದೆ. ಆದರೆ ಈ ಅಭಿಯಾನ ಯಶಸ್ವಿಯಾಗುವುದಿಲ್ಲ ಎಂದು ಸುನಿಲ್ ಸಂಗಮ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಅವಧಿಯಲ್ಲಿ ಬೀದರ್ ನಗರದಲ್ಲಿ ವಿಮಾನ ಹಾರಾಟದ ವೇಳೆ ಉಂಟಾಗುವ ಭಾರೀ ಶಬ್ದದಿಂದ ವಿದ್ಯಾರ್ಥಿಗಳಿಗೆ, ಆಸ್ಪತ್ರೆಯ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಹಾಗೆಯೇ ಬೆಳಗಿನ ಜಾವ 4 ಗಂಟೆಯಿಂದ 7 ಗಂಟೆ ವರೆಗೆ ಹಾಗೂ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಮಂದಿರ, ಮಸೀದಿ, ಚರ್ಚ್ಗಳಲ್ಲಿ ಅತಿಯಾದ ಧ್ವನಿವರ್ಧಕ ಬಳಕೆಯಿಂದ ವಿದ್ಯಾರ್ಥಿಗಳ ಓದಿಗೆ ಅಡ್ಡಿ ಉಂಟಾಗುತ್ತಿದೆ. ಪರೀಕ್ಷಾ ಅವಧಿಯಲ್ಲಿ ಧ್ವನಿ ಪ್ರದೂಷಣ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.