Aurad | ಪತ್ರಕರ್ತರು ನಿಷ್ಠೆ, ಸತ್ಯ, ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು: ಶಾಸಕ ಪ್ರಭು ಚವ್ಹಾಣ
ಹಿರಿಯ ಪತ್ರಕರ್ತ ಬಾಬುರಾವ್ ಯಡ್ರಾಮಿ ಅವರಿಗೆ ‘ಕನ್ನಡ ಜಂಗಮ ಪ್ರಶಸ್ತಿ’ ಪ್ರದಾನ
ಔರಾದ್: ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗಕ್ಕೆ ಮಹತ್ವದ ಸ್ಥಾನವಿದ್ದು, ಪತ್ರಿಕಾ ಕ್ಷೇತ್ರವು ಸಮಾಜದ ಕಣ್ಣು, ಕಿವಿ ಮತ್ತು ಧ್ವನಿಯಾಗಿದೆ. ಪತ್ರಕರ್ತರು ನಿಷ್ಠೆ, ಸತ್ಯ ಹಾಗೂ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಿ ಜನಸಾಮಾನ್ಯರಿಗೆ ದಾರಿ ತೋರಿಸುವುದರೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವರದಿಗಾರರು ನೈಜ ಮತ್ತು ನಿಖರ ಸುದ್ದಿಗಳಿಗೆ ಆದ್ಯತೆ ನೀಡಬೇಕು. ಸಮಗ್ರ ಚಿಂತನೆ ಹಾಗೂ ಪರಿಶೀಲನೆಯೊಂದಿಗೆ ಸುದ್ದಿಗಳನ್ನು ಪ್ರಕಟಿಸಬೇಕು. ಮುಂದಿನ ವರ್ಷ ಔರಾದ್ನಲ್ಲಿ ಜಿಲ್ಲಾ ಪತ್ರಕರ್ತರ ಸಮ್ಮೇಳನ ಆಯೋಜಿಸಲು ಅಗತ್ಯ ಸಹಕಾರ ನೀಡಲಾಗುವುದು. ಪತ್ರಿಕಾ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸಿದರೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ಪತ್ರಕರ್ತ ಬಾಬುರಾವ್ ಯಡ್ರಾಮಿ ವಿಶೇಷ ಉಪನ್ಯಾಸ ನೀಡಿ, ಮಾಹಿತಿ ಸುಲಭವಾಗಿ ಲಭ್ಯವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿಯೂ ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ. ಪೊಲೀಸ್, ಪತ್ರಿಕೆ ಮತ್ತು ರಾಜಕೀಯ ಎಂಬ ‘ಟ್ರಿಪಲ್ ಪಿ’ ಇಂದಿನ ಸಮಾಜದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಪತ್ರಕರ್ತರು ಸಮಾಜದ ಕಾವಲು ನಾಯಿಯಂತೆ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವೈಯಕ್ತಿಕ ವಿಚಾರಗಳಿಗೆ ಅತಿಯಾದ ಪ್ರಾಮುಖ್ಯತೆ ನೀಡುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ. ಪತ್ರಕರ್ತರು ಆಡಳಿತವನ್ನು ಎಚ್ಚರಗೊಳಿಸುವ ಮತ್ತು ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವ ಕೆಲಸ ಮಾಡಬೇಕು. ಜನರು ಪತ್ರಿಕೆಗಳನ್ನು ವಿಶ್ವಾಸದಿಂದ ಓದುತ್ತಾರೆ ಎಂಬುದನ್ನು ಅರಿತು ಪ್ರತಿಯೊಂದು ಕ್ಷೇತ್ರದ ಬಗ್ಗೆ ಪರಿಶೀಲಿತ ಹಾಗೂ ಅಚ್ಚುಕಟ್ಟಾದ ವರದಿಗಳನ್ನು ಪ್ರಕಟಿಸುವ ಜವಾಬ್ದಾರಿ ಹೊಂದಿರಬೇಕು ಎಂದು ತಿಳಿಸಿದರು.
ಮುದ್ರಣ ಮಾಧ್ಯಮವು ನಿಖರ ಮಾಹಿತಿಯನ್ನು ನೀಡುವ ವಿಶ್ವಾಸಾರ್ಹ ಮಾಧ್ಯಮವಾಗಿದೆ. ನೊಂದವರ ಪರವಾಗಿ ಕಾರ್ಯನಿರ್ವಹಿಸಿದಾಗ ಪತ್ರಕರ್ತರಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ. ಜನರ ನಂಬಿಕೆಗೆ ಧಕ್ಕೆಯಾಗದಂತೆ ಕೆಲಸ ಮಾಡುವುದರೊಂದಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ತಪ್ಪುಗಳನ್ನು ನಿರ್ಭೀತಿಯಿಂದ ಎತ್ತಿ ತೋರಿಸುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ಅವರು ಹೇಳಿದರು.
ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವೆ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಸೇವೆ ಅಮೋಘವಾಗಿದೆ. ಮಾಧ್ಯಮ ಕ್ಷೇತ್ರ ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ನಿಖರ ಮಾಹಿತಿಯನ್ನು ಖಚಿತಪಡಿಸಿಕೊಂಡು ವರದಿ ಮಾಡಬೇಕು. ಸಾರ್ವಜನಿಕ ಸಮಸ್ಯೆಗಳ ಕುರಿತು ಪ್ರಕಟವಾಗುವ ಸುದ್ದಿಗಳು ಅಭಿವೃದ್ಧಿ ಕಾರ್ಯಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಮಹಾಲಿಂಗ ದೇವರು ಆಶೀರ್ವಚನ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ್ ದೇವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಅಧ್ಯಕ್ಷ ಶಿವಾನಂದ್ ಮೊಕ್ತೇದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಾಬುರಾವ್ ಯಡ್ರಾಮಿ ಅವರಿಗೆ ರಾಜ್ಯಮಟ್ಟದ ‘ಕನ್ನಡ ಜಂಗಮ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಹೇಶ್ ಪಾಟೀಲ್, ತಾಪಂ ಇಒ ಕಿರಣ್ ಪಾಟೀಲ್, ಎಡಿ ಶಿವಕುಮಾರ್ ಘಾಟೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶರಣಪ್ಪ ಚಿಟ್ಮೆ, ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅನಿಲಕುಮಾರ್ ದೇಶಮುಖ, ಮನ್ಮಥಪ್ಪ ಸ್ವಾಮಿ, ಚನ್ನಬಸವ ಮೋಕ್ತೆದಾರ್, ಅಂಬರೀಶ್ ಚಿದ್ರೆ, ರವಿ ಮುಕ್ತೆದಾರ್, ಬಾಲಾಜಿ ಕುಂಬಾರ್, ಅಹಮದ್ ಜಂಬಗಿ, ಅಂಬಾದಾಸ್ ನಳಗೆ, ರವಿಕುಮಾರ್ ಮಠಪತಿ, ಸೂರ್ಯಕಾಂತ್ ಎಕ್ಲಾರ್, ರತಿಕಾಂತ್ ಕರಜಗೆ, ಶಿವು ಸಾದುರೆ, ರವಿ ಶಿಂಧೆ ಹಾಗೂ ಅಮರಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪತ್ರಕರ್ತ ಮಲ್ಲಪ್ಪ ಗೌಡ ಸ್ವಾಗತಿಸಿದರು. ರಿಯಾಜಪಾಶಾ ಕೊಳ್ಳೂರ್ ನಿರೂಪಿಸಿ, ವಂದಿಸಿದರು.