Bidar | ಜನಪದ ಹಾಡುಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ: ಶಂಕರ್ ಕಾಂಬ್ಳೆ

Update: 2026-07-28 19:12 IST

ಬೀದರ್: ಆಧುನಿಕ ಜೀವನಶೈಲಿಯ ಪ್ರಭಾವದಿಂದ ಜನಪದ ಹಾಡುಗಳು ನಿಧಾನವಾಗಿ ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜನಪದ ಕಲಾವಿದ ಶಂಕರ್ ಕಾಂಬ್ಳೆ ಹೇಳಿದರು.

ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಏಕವ್ಯಕ್ತಿ ಜನಪದ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ಹಾಡುಗಳು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜೀವನ ಮೌಲ್ಯಗಳ ಪ್ರತಿಬಿಂಬವಾಗಿವೆ. ಹಿರಿಯರು ತಮ್ಮ ಜೀವನಾನುಭವ, ಸಂತೋಷ, ದುಃಖ, ಶ್ರಮ, ಆಚರಣೆ ಹಾಗೂ ಸಂಪ್ರದಾಯಗಳನ್ನು ಜನಪದ ಹಾಡುಗಳ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಿದ್ದಾರೆ. ಆದ್ದರಿಂದ ಜನಪದ ಗೀತೆಗಳು ಕೇವಲ ಮನರಂಜನೆಯ ಸಾಧನವಲ್ಲ, ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿವೆ ಎಂದು ಹೇಳಿದರು.

ಯುವಜನರು ತಮ್ಮ ನೆಲದ ಸಂಸ್ಕೃತಿಗಿಂತ ಹೊರಗಿನ ಸಂಗೀತದತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಆತಂಕದ ಸಂಗತಿ. ಶಾಲೆ, ಕಾಲೇಜು, ಗ್ರಾಮೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಾತ್ರೆಗಳಲ್ಲಿ ಜನಪದ ಹಾಡುಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಹಿರಿಯ ಕಲಾವಿದರಿಗೆ ಗೌರವ ನೀಡಿ, ಅವರಿಂದ ಯುವ ಪೀಳಿಗೆಗೆ ಈ ಕಲೆಯನ್ನು ಕಲಿಸುವ ವ್ಯವಸ್ಥೆ ಮಾಡಬೇಕು. ಮನೆಗಳಲ್ಲಿಯೇ ಮಕ್ಕಳಿಗೆ ಜನಪದ ಹಾಡುಗಳನ್ನು ಪರಿಚಯಿಸುವ ಮೂಲಕ ನಮ್ಮ ಪರಂಪರೆಯನ್ನು ಜೀವಂತವಾಗಿಡಬಹುದು ಎಂದು ತಿಳಿಸಿದರು.

ಜನಪದ ಹಾಡುಗಳು ನಮ್ಮ ಭಾಷೆಯ ಸೊಗಡನ್ನು ಹೆಚ್ಚಿಸುವುದರ ಜೊತೆಗೆ ಸಂಸ್ಕೃತಿಯ ಹೆಮ್ಮೆಯನ್ನು ಸಾರುತ್ತವೆ ಹಾಗೂ ಸಮಾಜದಲ್ಲಿ ಒಗ್ಗಟ್ಟನ್ನು ಬೆಳೆಸುತ್ತವೆ. ಎಲ್ಲರೂ ಸೇರಿ ಜನಪದ ಕಲೆ ಮತ್ತು ಹಾಡುಗಳನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಎಸ್‌ಡಿಎಂಸಿ ಸದಸ್ಯ ದೇವಿಂದ್ರ ಮಾತನಾಡಿ, ಈ ಭಾಗದ ಜನಪದ ಕಲೆ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರ ಕೊಡುಗೆ ಮಹತ್ವದ್ದಾಗಿದೆ. ಯುವ ಕಲಾವಿದ ಶಂಕರ್ ಕಾಂಬ್ಳೆ ಅವರ ಜನಪದ ಪ್ರದರ್ಶನ ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಜೀವಂತವಾಗಿ ಬಿಂಬಿಸಿದ್ದು, ಇಂತಹ ಕಲಾವಿದರಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ‌ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಸವರಾಜ್ ಪ್ಯಾಗೆ‌, ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಲಕ್ಷ್ಮೀಬಾಯಿ ಕಾರಪೆಂಟರ್, ಭೀಮರಾವ್ ಸಾಗರ್, ಉಪನ್ಯಾಸಕ ವಿಜಯಕುಮಾರ್ ಪ್ಯಾಗೆ, ಕರಣ್ ಕಾರಪೆಂಟರ್, ಸಿದ್ಧಾರ್ಥ ಹುಳಕರ್, ಸುಮಿತ್ ಪ್ಯಾಗೆ, ಸುದೀಪ್, ಅಂಕುಶ್ ಶಿಕ್ಷಣಕರ್ ಹಾಗೂ ಸುಮಿತ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News