Basavakalyan | ಕನ್ನೇರಿ ಶ್ರೀಗಳ ಬಾಯಿಗೆ ಹೈಕೋರ್ಟ್ ಬೀಗ ಜಡಿಸಿದೆ: ಡಾ.ಬಸವಲಿಂಗ ಪಟ್ಟದೇವರು
ಬಸವಾದಿ ಶಿವಶರಣರ ಹಿಂದೂ ಸಮಾವೇಶ ಕುರಿತ ತೀರ್ಪಿಗೆ ಸ್ವಾಗತ
ಬಸವಕಲ್ಯಾಣ : ಜೂ.28ರಂದು ನಗರದ ಅಕ್ಕಮಹಾದೇವಿ ಆವರಣದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಡಾ. ಬಸವಲಿಂಗ ಪಟ್ಟದೇವರು, ಕನ್ನೇರಿ ಶ್ರೀಗಳ ಬಾಯಿಗೆ ಬೀಗ ಜಡಿಸಿರುವುದೇ ನಮಗೆ ಸಂದ ಜಯ ಎಂದು ಹೇಳಿದರು.
ನಗರದ ಅನುಭವ ಮಂಟಪ ಆವರಣದಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಭಕ್ತರು ಮತ್ತು ಬಸವ ತತ್ವ ಪ್ರಚಾರಕರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದ ಕನ್ನೇರಿ ಶ್ರೀಗಳಿಗೆ ಸುಪ್ರೀಂ ಕೋರ್ಟ್ ಈ ಹಿಂದೆ ಛೀಮಾರಿ ಹಾಕಿತ್ತು. ಇದೀಗ ಸಮಾವೇಶದಲ್ಲಿ ಮಾತನಾಡದಂತೆ ಹೈಕೋರ್ಟ್ ಆದೇಶಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನೇರಿ ಶ್ರೀಗಳು ಭಾಷಣ ಮಾಡಬಾರದು, ಕಾರ್ಯಕ್ರಮದ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ. ಹೈಕೋರ್ಟ್ ತೀರ್ಪಿಗೆ ನಾವು ಗೌರವ ಸಲ್ಲಿಸುತ್ತೇವೆ ಎಂದು ಹೇಳಿದರು.
ಕನ್ನೇರಿ ಶ್ರೀಗಳು ಕಾರ್ಯಕ್ರಮಕ್ಕೆ ಬಂದರೂ ಮಾತನಾಡುವ ಅವಕಾಶ ಇರುವುದಿಲ್ಲ. ಹೈಕೋರ್ಟ್ ಅವರ ಮಾತಿನ ಮೇಲೆ ನಿರ್ಬಂಧ ಹೇರಿರುವುದು ಬಸವ ತತ್ವಕ್ಕೆ ಸಂದ ಜಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
“ನಾವು ಭೌಗೋಳಿಕವಾಗಿ ಹಿಂದೂಗಳೇ ಹೊರತು ಹಿಂದೂ ವಿರೋಧಿಗಳಲ್ಲ. ಆದರೆ, ಕನ್ನೇರಿ ಶ್ರೀಗಳ ವರ್ತನೆಯನ್ನು ವಿರೋಧಿಸಿದ್ದೇವೆ” ಎಂದು ಡಾ. ಬಸವಲಿಂಗ ಪಟ್ಟದೇವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಹುಲಸೂರಿನ ಬಸವೇಶ್ವರ್ ಸಂಸ್ಥಾನ ಮಠದ ಡಾ.ಶಿವಾನಂದ್ ಮಹಾಸ್ವಾಮಿ, ಗುರಬಸವ ಪಟ್ಟದೇವರು, ಗುಣತಿರ್ಥವಾಡಿಯ ಬಸವಪ್ರಭು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ್ ಧನ್ನೂರ್, ಆಕಾಶ್ ಖಂಡಾಳೆ, ರವಿ ಕೊಳಕುರ್, ಸಚಿನ್ ಕೌಟೆ, ಬಸವರಾಜ್ ಪಾಟೀಲ್ ಹಾಗೂ ಶಿವಪುರ್ ಸೇರಿದಂತೆ ಹಲವರಿದ್ದರು