ಬೀದರ್ | ಗಡಿ ಭಾಗದ ಸಂಘ ಸಂಸ್ಥೆಗಳಿಗೆ ಅನುದಾನ ನೀಡಲು ಸರಕಾರಕ್ಕೆ 100 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ : ಡಾ.ಸಂಜುಕುಮಾರ್ ಅತಿವಾಳೆ
ಬೀದರ್ : ಗಡಿ ಭಾಗದ ನೋಂದಾಯಿತ ಸಂಘ ಸಂಸ್ಥೆಗಳಿಗೆ ಧನ ಸಹಾಯ ನೀಡಲು ರಾಜ್ಯ ಸರಕಾರಕ್ಕೆ 100 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ. ಧನ ಸಹಾಯವನ್ನು ನೀಡುವ ವಿಶ್ವಾಸವಿದೆ ಎಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜುಕುಮಾರ್ ಅತಿವಾಳೆ ಅವರು ಹೇಳಿದರು.
ನಗರದ ಸವಿತಾ ಸಮಾಜ ಮಹಾರ್ಷಿ ಸಾಂಸ್ಕೃತಿಕ ಸಭಾಂಗಣದಲ್ಲಿ ಗುರುವಾರ ಬೆಂಗಳೂರಿನ ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೀದರ್ ನ ದಿವ್ಯದರ್ಶನ ಸಾಂಸ್ಕೃತಿಕ ರೂರಲ್ ಮತ್ತು ಅರ್ಬನ್ ಡೆವಲಪ್ಮೆಂಟ್ ಇವರ ಸಂಯುಕ್ತಾಶ್ರಯದಲ್ಲಿ 2023-2024ನೇ ಸಾಲಿನ ವಿಶೇಷ ಘಟಕದ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿರುವ ಗ್ರಾಮೀಣ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರವು ಗಡಿ ಭಾಗದಲ್ಲಿ ಬರುವ ಶಾಲಾ, ಕಾಲೇಜು ಸಾಂಸ್ಕೃತಿಕ ಭವನಗಳ ನಿರ್ಮಾಣಕ್ಕೆ ಸಹಾಯಧನವನ್ನು ನೀಡುತ್ತಿದೆ. ಅತಿ ಹೆಚ್ಚು ಸಹಾಯಧನವನ್ನು ಬೀದರ್ ಜಿಲ್ಲೆ ಪಡೆದುಕೊಂಡಿದೆ. ಕಳೆದ ಮೂರು ವರ್ಷಗಳಿಂದ ಗಡಿ ಭಾಗದ ನೋಂದಾಯಿತ ಗಡಿ ಭಾಗದಲ್ಲಿ ಸಾಂಸ್ಕೃತಿಕ ಸಾಹಿತ್ಯ ಕಾರ್ಯಕ್ರಮವನ್ನು ಮಾಡಲು ಧನ ಸಹಾಯ ನೀಡುವುದು ನಿಲ್ಲಿಸಿದೆ. ಇದರ ಬಗ್ಗೆ ವಿಶ್ವ ಕನ್ನಡಿಗರ ಸಂಸ್ಥೆಯ ಅಧ್ಯಕ್ಷ, ಸಾಹಿತಿ ಡಾ.ಸುಬ್ಬಣ್ಣ ಕರಕನಳ್ಳಿ ಅವರು ಗಡಿ ಕನ್ನಡಿಗರ ಉತ್ಸವವನ್ನು ರಾಜ್ಯಮಟ್ಟದ ಕಾರ್ಯಕ್ರಮ ಮಾಡಿ ಗಮನ ಸೆಳೆದಿದ್ದಾರೆ. ಗಡಿ ಭಾಗದ ನೋಂದಾಯಿತ ಸಂಘ ಸಂಸ್ಥೆಗಳಿಗೆ ಧನ ಸಹಾಯ ನೀಡಲು ಒತ್ತಾಯ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ 100 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಹಿರಿಯ ಸಾಹಿತಿ ಡಾ. ಕಾಶಿನಾಥ್ ಚೆಲ್ವಾ, ಡಾ. ಶೇಷರಾವ್ ಬೆಳಕುಣಿ, ಶಂಭುಲಿಂಗ್ ವಾಲ್ದೊಡ್ಡಿ ಅವರ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆಯ ಅಧ್ಯಕ್ಷ, ಸಾಹಿತಿ ಡಾ.ಸುಬ್ಬಣ್ಣ ಕರಕನಳ್ಳಿ, ದಿಲಿಪಕುಮಾರ ಭೋಸ್ಲೆ, ಶೇಷಪ್ಪ ಚಿಟ್ಟಾ, ಚಿನ್ನಮ್ಮಾ ಲಾಧ, ನಾಗಮ್ಮ, ರಾಜಕುಮಾರ್ ಕರುಣಸಾಗರ್, ರಮೇಶ್ ಬಾಬು ಅಮಲಾಪೂರ್, ತಾತರಾವ್ ಡಿಗ್ಗಿ, ರಮೇಶ್ ದೊಡ್ಡಿ, ಬಕ್ಕಪ್ಪ ದಂಡಿನ್, ಯಲ್ಲಾಲಿಂಗ್ ಸಿದ್ದಲಿಂಗ್ ಹಾಗೂ ದಯಾನಂದ್ ನವಲೆ ಸೇರಿದಂತೆ ಅನೇಕರು ಇದ್ದರು.