ಬೀದರ್ | ಸಾಧನೆಗೆ ಶ್ರದ್ದೆ, ಶ್ರಮ, ಶಿಸ್ತಿನ ಅಗತ್ಯವಿದೆ : ಪ್ರೊ.ಚಂದ್ರಶೇಖರ್ ಬಿರಾದಾರ್
ಬೀದರ್ : ಹುಟ್ಟು ಸಾವುಗಳ ಮಧ್ಯದಲ್ಲಿ ಬರುವ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಶ್ರದ್ದೆ, ಶ್ರಮ ಮತ್ತು ಶಿಸ್ತಿನ ಅಗತ್ಯವಿದೆ. ಸಾಹಿತಿ ವೀರಣ್ಣ ಕುಂಬಾರ ಅವರು ಇಂಥ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಬಿರಾದಾರ್ ಅವರು ಹೇಳಿದರು.
ಇಂದು ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ ಶಬನಮ್ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ವೀರಣ್ಣ ಕುಂಬಾರ ಬದುಕು ಬರಹ ಕುರಿತ ಚಿಂತನ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ವೀರಣ್ಣ ಕುಂಬಾರ ಅವರು ಅಧುನಿಕ ವಚನಕಾರ, ಕವಿ, ಲೇಖಕ, ಸಂಪಾದಕರಾಗಿ ಜಿಲ್ಲೆಯಲ್ಲಿ ಉತ್ತಮ ಹೆಸರನ್ನು ಮಾಡಿದ್ದಾರೆ ಎಂದು ಸ್ಮರಿಸಿಕೊಂಡರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಅವರು ಮಾತನಾಡಿ, ಸಾಧನೆ ಮಾಡದೇ ಸತ್ತರೆ ಸಾವಿಗೂ ಅವಮಾನ ಎನ್ನುವಂತೆ ಪ್ರತಿಯೊಬ್ಬ ಜೀವಿಯು ಸತ್ಯಶುದ್ಧ ಕಾಯಕದಿಂದ ಬದುಕು ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷೆ ಡಾ.ಎಂ.ಮುಕ್ತುಂಬಿ ಅವರು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸೋಮನಾಥ ಮುದ್ದಾ, ಶ್ರೀದೇವಿ ಕುಂಬಾರ್, ಸದ್ಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಕ್ಷಯಕುಮಾರ್ ಮುದ್ದಾ, ಪ್ರಭುಲಿಂಗ್ ಕುಂಬಾರ್, ಕನ್ಯಾಕುಮಾರಿ ಯಾಲಾ, ಗೀತಾ ನಾಟಿಕಾರ್ ಹಾಗೂ ಸುಷ್ಮತಾ ಸಹಾನೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.