Bidar | ಸಾಮಾಜಿಕ ನ್ಯಾಯಕ್ಕಾಗಿ ಅಣ್ಣಾಭಾವು ಸಾಠೆ ಸಾಹಿತ್ಯದ ಮೂಲಕ ಹೋರಾಡಿದರು: ದೇವಿದಾಸ್ ತುಮಕುಂಟೆ

Update: 2026-08-11 20:27 IST

ಬೀದರ್: ಸಾಹಿತ್ಯ ರತ್ನ, ಲೋಕಶಾಹೀರ್ ಅಣ್ಣಾಭಾವು ಸಾಠೆ ಅವರು ಬಡವರು ಹಾಗೂ ಧ್ವನಿಯಿಲ್ಲದವರ ಪರ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಕಥೆ, ಕಾದಂಬರಿ ಹಾಗೂ ಸಾಹಿತ್ಯದ ಮೂಲಕ ನಿರಂತರವಾಗಿ ಹೋರಾಟ ನಡೆಸಿದ್ದರು ಎಂದು ಉಪನ್ಯಾಸಕ ದೇವಿದಾಸ್ ತುಮಕುಂಟೆ ಹೇಳಿದರು.

ಕರ್ನಾಟಕ ಮಾದಿಗ ವೇಲ್‌ಫೇರ್ ಅಸೋಸಿಯೇಷನ್ ಜಿಲ್ಲಾ ಘಟಕದ ವತಿಯಿಂದ ನೌಬಾದ್‌ನ ಡಾ. ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಣ್ಣಾಭಾವು ಸಾಠೆ ಅವರ 106ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಣ್ಣಾಭಾವು ಸಾಠೆ ಅವರು ಸಮಾಜದಲ್ಲಿನ ಶೋಷಿತರು, ಬಡವರು ಹಾಗೂ ಧ್ವನಿಯಿಲ್ಲದವರ ಸಮಸ್ಯೆಗಳನ್ನು ತಮ್ಮ ಸಾಹಿತ್ಯದ ಮೂಲಕ ಆಳುವ ಸರ್ಕಾರಗಳ ಗಮನಕ್ಕೆ ತಂದು, ಸಾಮಾಜಿಕ ಬದಲಾವಣೆಗೆ ಶ್ರಮಿಸಿದ್ದರು. ಅವರ ಸಾಹಿತ್ಯವು ಶೋಷಿತ ಸಮುದಾಯಗಳ ಬದುಕು, ನೋವು ಹಾಗೂ ಹಕ್ಕುಗಳ ಪರವಾಗಿ ಧ್ವನಿ ಎತ್ತುವ ಮಾಧ್ಯಮವಾಗಿತ್ತು ಎಂದರು.

ಪ್ರಸ್ತುತ ಸಮಾಜದಲ್ಲಿಯೂ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತರ ಹಕ್ಕುಗಳ ಪರವಾಗಿ ಎಲ್ಲ ಹೋರಾಟಗಾರರು ಧ್ವನಿ ಎತ್ತುವುದು ಅತ್ಯಂತ ಅಗತ್ಯವಾಗಿದೆ ಎಂದು ದೇವಿದಾಸ್ ತುಮಕುಂಟೆ ಹೇಳಿದರು.

ಈ ಸಂದರ್ಭದಲ್ಲಿ ಮಾದಾರ ಚೆನ್ನಯ್ಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ರಮೇಶ್ ಕಟ್ಟಿತುಗಾಂವ್, ಸೂರ್ಯಕಾಂತ್, ಅಸೋಸಿಯೇಷನ್‌ನ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೇನೋರ್, ಸಂಗಮೇಶ್ ಏಣಕೂರ್, ವೆಂಕಟರಾವ್ ಪಾಟೀಲ್, ಪುಟ್ಟರಾಜ್ ರೇಕುಳಗಿ, ಸುರೇಶ್ ಎನ್. ದೊಡ್ಡಿ, ಕಮಲಹಾಸನ ಭಾವಿದೊಡ್ಡಿ, ಯೇಶಪ್ಪ ಶೆಂಬೆಳ್ಳಿ, ದಾವೀದ್, ಸಂತೋಷ್, ಮೋಹನ್, ವಿಶಾಲ್ ಚವ್ಹಾಣ (ಕಮಲನಗರ), ಉಮೇಶ್ ಅಡ್ಡೆ ಹಾಗೂ ನಾಗಣ್ಣ ಡೋಣೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಘಾಳೆಪ್ಪಾ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News