Bidar | ಅನುಮಾನಾಸ್ಪದ ರೀತಿಯಲ್ಲಿ ಕಲಾವಿದ ಸಿದ್ದಾರ್ಥ ಅವರ ಮೃತದೇಹ ಪತ್ತೆ
ಬೀದರ್ : ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ಕಲಾವಿದ ಸಿದ್ದಾರ್ಥ್ ಪರಶನೂರ್ (36) ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಹುಮನಾಬಾದ್ ತಾಲ್ಲೂಕಿನ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಸೋಮವಾರ ಅವರ ಮೃತದೇಹ ಪತ್ತೆಯಾಗಿದೆ.
ಹುಮನಾಬಾದ್ ನಗರದ ಟೀಚರ್ಸ್ ಕಾಲನಿಯಲ್ಲಿ ವಾಸವಿದ್ದ ಸಿದ್ದಾರ್ಥ ಅವರು ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ನ ಕಲಾವಿದರಾಗಿದ್ದರು. ಅವರ ತಾಯಿ ಕಸ್ತೂರಿಬಾಯಿ ಪರಸನೂರ್ ಅವರು ಹುಮನಾಬಾದ್ ನ ಮಾಜಿ ಪುರಸಭೆ ಅಧ್ಯಕ್ಷೆಯಾಗಿದ್ದರು.
ಜೂ. 13ರಂದು ಸಿದ್ದಾರ್ಥ್ ಸ್ನೇಹಿತರೊಂದಿಗೆ ಮನೆಯಿಂದ ಹೊರ ಹೋಗಿದ್ದರು. ಆದರೆ 3 ದಿನ ಕಳೆದರೂ ಅವರು ಮನೆಗೆ ಬಾರದ ಕಾರಣ, ಆತಂಕಗೊಂಡ ಅವರ ಕುಟುಂಬಸ್ಥರು ಸೋಮವಾರ ಬೆಳಿಗ್ಗೆ ಹುಮನಬಾದ್ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಪ್ರಕರಣ ದಾಖಲಿಸಲು ಹೋಗಿದ್ದರು. ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಮಾಹಿತಿ ಕಲೆ ಹಾಕಿದ್ದಾಗ ಹುಮನಾಬಾದ್ ತಾಲ್ಲೂಕಿನ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ.
ಬ್ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಅವರ ಮೃತದೇಹ ಸಾಗಿಸಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹುಮನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.