×
Ad

ಬೀದರ್ ಮೂಲದ ಯುವಕ ಹೈದರಾಬಾದ್‌ನಲ್ಲಿ ಅನುಮಾನಾಸ್ಪದ ಮೃತ್ಯು : ಪತ್ನಿ ವಿರುದ್ಧವೇ ಕೊಲೆ ಆರೋಪ

Update: 2026-07-03 19:17 IST

ಬೀದರ್ : ಹೈದರಾಬಾದ್‌ನ ಆಸಿಫ್ ನಗರದಲ್ಲಿ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಣಿಗೆಂಪೂರ್ ಗ್ರಾಮದ ನಿವಾಸಿ ದತ್ತಾತ್ರಿ ಲದ್ದೆ‌ ಎನ್ನುವ ನನ್ನ ಸಹೋದರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಇದು ಆತನ ಪತ್ನಿಯೇ ಮಾಡಿದ ಕೊಲೆಯಾಗಿದೆ ಎಂದು ಮೃತನ ಸಹೋದರಿ ಪಲ್ಲವಿ ತಿಪ್ಪರಗೆ ಅವರು ಆರೋಪಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

ಈ ಕುರಿತು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದತ್ತಾತ್ರಿ ಮಾ.24ರಂದು ಹೈದರಾಬಾದ್‌ನ ಆಸಿಫ್ ನಗರದ ಯಾದವ್ ಬಸ್ತಿಯಲ್ಲಿರುವ ತನ್ನ ನಿವಾಸದಲ್ಲಿ ಸಾವಿಗೀಡಾಗಿದ್ದನು. ಪತ್ನಿ ನೀಲಾಂಬಿಕಾ ನೀಡಿದ ದೂರಿನ ಮೇರೆಗೆ ಆಸಿಫ್ ನಗರ ಪೊಲೀಸ್ ಠಾಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಎಂದು ಎಫ್‌ಐಆರ್ ದಾಖಲಾಗಿದೆ. ಆದರೆ, ಇದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂದು ಪಲ್ಲವಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಮೃತನ ತಲೆಯ ಕೆಳಭಾಗದಲ್ಲಿ ಹಾಗೂ ಮೈಮೇಲೆ ಭಾರೀ ರಕ್ತಗಾಯಗಳು ಮತ್ತು ಹಲ್ಲೆ ನಡೆಸಿದ ಗುರುತುಗಳಿದ್ದು, ಇದು ನೇಣು ಹಾಕಿಕೊಂಡ ಸಾವಲ್ಲ ಎಂಬುದು ಲಭ್ಯವಿರುವ ಫೋಟೋಗಳಿಂದ ಸ್ಪಷ್ಟವಾಗುತ್ತದೆ, ಘಟನೆ ನಡೆದ ದಿನ ರಾತ್ರಿ 11:22 ಗಂಟೆಯಿಂದ 11:37 ಗಂಟೆವರೆಗಿನ ಸುಮಾರು 15 ನಿಮಿಷಗಳ ಕಾಲ ಆ ಬಿಲ್ಡಿಂಗ್‌ನ ಸಿಸಿಟಿವಿ ಕ್ಯಾಮೆರಾವನ್ನು ಉದ್ದೇಶಪೂರ್ವಕವಾಗಿ ಆಫ್ ಮಾಡಲಾಗಿತ್ತು. ಇದೇ ಅವಧಿಯಲ್ಲಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಈ ಕೃತ್ಯ ನಡೆದ ಕೆಲವೆ ಕ್ಷಣಗಳಲ್ಲಿ ಮೃತದೇಹ ತೆಗೆದುಕೊಂಡು ಹೋದ ಪೋಲಿಸರು, ಸಂಬಂಧಿಕರಿಗೆ ಮಾಹಿತಿ ನೀಡದೆ ಶವ ಪರಿಕ್ಷೆ ನಡೆಸಿದ್ದಾರೆ. ಆದ್ದರಿಂದ ಪೊಲೀಸರ ಮೇಲೂ ಅನುಮಾನ‌ ಮೂಡುವಂತೆ ಮಾಡಿದೆ. ಮೃತ ವ್ಯಕ್ತಿಯ ಮೈಮೇಲೆ ಒಂದು ತುಂಡು ಬಟ್ಟೆ ಇರದೆ ಇರುವುದು ಗಮನಿಸಿದರೆ, ಸುತ್ತಮುತ್ತಲಿನ ನೆರೆಹೊರೆಯವರು ಹೇಳುವ ರೀತಿ ನೋಡಿದರೆ ಇದು ಸುವ್ಯವಸ್ಥಿತ ಕೊಲೆಯಾಗಿದೆ ಎಂದು ಅವರು ಕಣ್ಣಿರಿಟ್ಟರು.

ಮೃತ ದತ್ತಾತ್ರಿ ವಿವಿಧೆಡೆ ಕೆಲಸ ಮಾಡಿ ಸಂಪಾದಿಸಿದ್ದ ಸುಮಾರು 6.80 ಲಕ್ಷ ರೂ. ಹಣವು ಆತನ ಪತ್ನಿ ನೀಲಾಂಬಿಕಾಳ ಸ್ನೇಹಿತರ ಖಾತೆಗಳಿಗೆ ವರ್ಗಾವಣೆಯಾಗಿದೆ. ಜೊತೆಗೆ ಆಕೆಯು ಮನೆಯಲ್ಲಿದ್ದ ಚಿನ್ನಾಭರಣಗಳನ್ನೂ ತೆಗೆದುಕೊಂಡು ಹೋಗಿದ್ದಾಳೆ. ಹಾಗೆಯೇ 15 ಲಕ್ಷ ರೂ. ಹಾಗೂ ಮಾಧ್ಯಮಗಳಿಗೆ 25 ಲಕ್ಷ ರೂ. ಸಾಲವಿತ್ತು ಎಂದು ನೀಲಾಂಬಿಕಾಳು ಪೊಲೀಸರಿಗೆ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದು, ವಾಸ್ತವದಲ್ಲಿ ಮೃತನಿಗೆ ಯಾವುದೇ ಸಾಲವಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೃತನ ಅಂತಿಮ ಸಂಸ್ಕಾರದ ಬಳಿಕ ನಾವು ಆಸಿಫ್ ನಗರ ಪೊಲೀಸ್ ಠಾಣೆಗೆ ತೆರಳಿ ಅನುಮಾನಗಳ ಬಗ್ಗೆ ವಿವರಿಸಿ, ಆತನ ಪತ್ನಿಯ ವಿರುದ್ಧ ದೂರು ನೀಡಲು ಹೋದಾಗ ಅಲ್ಲಿನ ಪಿಎಸ್‌ಐ ಕೆ.ಆಂಜನೆಯಲು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ (ಪಿ.ಎಂ) ವರದಿಯು ಘಟನೆ ನಡೆದ ಮರು ದಿನವೇ ಮಧ್ಯಾಹ್ನ ಸಿದ್ಧವಿದ್ದರೂ ಕುಟುಂಬಸ್ಥರಿಗೆ ನೀಡಲಿಲ್ಲ. ಠಾಣೆಗೆ ಹತ್ತಾರು ಬಾರಿ ಅಲೆದಾಡಿಸಿ 25 ದಿನಗಳ ಕಾಲ ಸತಾಯಿಸಿ 5 ಸಾವಿರ ರೂ. ಲಂಚ ಪಡೆದು ಮರಣೋತ್ತರ ಪರೀಕ್ಷೆಯ ವರದಿ ನೀಡಲಾಗಿದೆ. ಇದು ಪೊಲೀಸ್ ಇಲಾಖೆಯ ಮೇಲೂ ಸಂಶಯ ಮೂಡುವಂತೆ ಮಾಡಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.

ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ವೃದ್ಧ ತಂದೆ-ತಾಯಿಗೆ ನ್ಯಾಯ ಒದಗಿಸಬೇಕು. ಪತ್ನಿ ನೀಲಾಂಬಿಕಾ ಮತ್ತು ಆಕೆಯ ತಂದೆ ಬಳಸುತ್ತಿರುವ ಮೊಬೈಲ್ ಸಂಖ್ಯೆಗಳ ಕರೆಗಳ ಮಾಹಿತಿ (ಸಿಡಿಆರ್), ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಪರಿಶೀಲಿಸಬೇಕು. ವರ್ಗಾವಣೆಯಾದ ಹಣವನ್ನು ವಸೂಲಿ ಮಾಡಿ ವೃದ್ಧ ಪೋಷಕರಿಗೆ ನೀಡಬೇಕು. ಹಾಗೆಯೇ ಈ ಪ್ರಕರಣದ ಕುರಿತು ಉನ್ನತ ಮಟ್ಟದ, ನ್ಯಾಯಸಮ್ಮತ ತನಿಖೆ ನಡೆಸಿ ಸತ್ಯಾಂಶವನ್ನು ಹೊರ ತರಬೇಕು ಎಂದು ಮೃತನ ಸಹೋದರಿ ಆಗ್ರಹಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಮೃತನ ತಾಯಿ ಸಂಗಮ್ಮ, ತಂದೆ ಕರಬಸಪ್ಪ, ಚಿಕ್ಕಮ್ಮ ಭಾಗ್ಯಶ್ರೀ, ಚಿಕ್ಕಪ್ಪ ವಿಶ್ವನಾಥ್ ಕಾರಂಜಿ, ಸಂಬಂಧಿಕ ರಾಜಕುಮಾರ್ ನೌಬಾದ್ ಹಾಗೂ ಇತರರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News