ಭಾಲ್ಕಿ: ಬರಪೀಡಿತ ಪಟ್ಟಿಗೆ ಭಾಲ್ಕಿ ತಾಲೂಕನ್ನು ಸೇರಿಸುವಂತೆ ಆಗ್ರಹಿಸಿ ಪಟ್ಟಣದ ಮಹಾತ್ಮಗಾಂಧಿ ವೃತ್ತದ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಈ ವೇಳೆ ರೈತ ಮುಖಂಡ ಕಾಶೀನಾಥ್ ಭೂರೆ ಮಾತನಾಡಿ, ತಾಲೂಕಿನ ರೈತರು ಮಳೆ ಆಧಾರಿತ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಮಳೆಯ ಅಭಾವದಿಂದ ತಾಲೂಕಿನಾದ್ಯಂತ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಈ ಭಾಗದ ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಆರೋಪಿಸಿದರು.

ಸಂಘದ ಮುಖಂಡ ಕಿರಣಕುಮಾರ್ ಖಂಡ್ರೆ ಮಾತನಾಡಿ, ಬೀದರ್ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬರ ಪರಿಸ್ಥಿತಿ ಇದೆ. ಆದರೆ ನಾಲ್ಕು ತಾಲೂಕುಗಳನ್ನು ಮಾತ್ರ ಬರಪೀಡಿತ ಪಟ್ಟಿಗೆ ಸೇರಿಸಿ, ಭಾಲ್ಕಿ ಸೇರಿದಂತೆ ಉಳಿದ ನಾಲ್ಕು ತಾಲೂಕುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಇದರಿಂದ ಭಾಲ್ಕಿ ತಾಲೂಕಿನ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ಭಾಲ್ಕಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸುವವರೆಗೆ ನಿರಂತರ ಹೋರಾಟ ಹಾಗೂ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ್ ಸ್ವಾಮಿ, ನಾಗಶೆಟ್ಟೆಪ್ಪ ಲಂಜವಾಡೆ, ಜೈರಾಜ್ ಕೊಳ್ಳಾ, ಕಲ್ಯಾಣರಾವ್ ಪಾಟೀಲ್ ಸಂಗಮ್, ಭವರಾವ್ ನೆಲವಾಡೆ, ಮಲ್ಲಿಕಾರ್ಜುನ್ ಬಿರಾದಾರ್, ಅಶೋಕ್ ಕಾರಬಾರಿ ಗೋರಚಿಂಚೋಳಿ, ರಾಜೇಂದ್ರ ಪಾಟೀಲ್, ಪ್ರಹ್ಲಾದರಾವ್ ಬಿರಾದಾರ್, ಮಾಣಿಕಪ್ಪ ಮಸ್ಕಲೆ, ರಿಯಾಜ್, ಬಾಲಾಜಿ, ಶಿವರಾಜ್ ಜಲದೆ, ಕಲ್ಲಪ್ಪ ದಾನಾ, ಚಂದ್ರಕಾಂತ್ ಹುಲಸೂರೆ, ನರಸಿಂಗರಾವ್, ವಿಜಯಕುಮಾರ್ ಬಾವುಗೆ, ರಾಘವೇಂದ್ರ ಗುತ್ತೆದಾರ್, ಓಂಪ್ರಕಾಶ್ ಕನ್ನಾಳೆ, ಜಗನ್ನಾಥಪ್ಪ ಕನ್ನಾಳೆ, ಬಾಬುರಾವ್ ಭಾಸಗೆ, ರಂಗರಾವ್ ಕಾರಬಾರಿ, ದತ್ತಾತ್ರಿ ಕರಕಾಳೆ, ವಿಠಲರಾವ್ ಕಾರಬಾರಿ, ಜಗನ್ನಾಥ್ ಹಂದ್ರಾಳೆ, ದೀಪಕ್ ಪಾಟೀಲ್, ಮಾಣಿಕರಾವ್ ಕುಂಟೆಸಿರಸಿ, ಕೀರ್ತಿರತನ್ ಸೊನಾಳೆ, ಬಂಡೆಪ್ಪ ಬಿರಾದಾರ್, ಸಂದೀಪ್ ಭೋಳೆ ಕೇರುರ್ ಹಾಗೂ ವಿಠಲರೆಡ್ಡಿ ಸೇರಿದಂತೆ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor