ಬೀದರ್ | ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ತಲಾ 10 ಸಸಿ ನೆಡಬೇಕು : ಜಿ.ಕೆ.ಬಿರಾದಾರ್
ಬೀದರ್ : ಪ್ರತಿಯೊಬ್ಬ ವಿದ್ಯಾರ್ಥಿಯು ತಲಾ 10 ಸಸಿಗಳನ್ನು ಕಡ್ಡಾಯವಾಗಿ ನೆಡಬೇಕು. ಇದರಿಂದ ಶುದ್ಧ ಗಾಳಿ ಸಿಗುತ್ತದೆ. ಪರಿಸರ ಚೆನ್ನಾಗಿದ್ದರೆ ಆರೋಗ್ಯವೂ ಸದೃಢವಾಗಿರುತ್ತದೆ ಎಂದು ಬೀದರ್ ನ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಕೆ.ಬಿರಾದಾರ್ ಅವರು ಹೇಳಿದರು.
ನಗರದ ನೌಬಾದ್ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ಶಾಹು ಮಹಾರಾಜ ಪಿಯು ಕಾಲೇಜಿನಲ್ಲಿ ನಡೆದ 'ಶುದ್ಧ ಮತ್ತು ಮಾಲಿನ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ' ಎಂಬ ಘೋಷ ವಾಕ್ಯದಡಿ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಹೀಗಾಗಿ, ನಾಳಿನ ಜೀವನಕ್ಕಾಗಿ ಇಂದೇ ಎಲ್ಲರೂ ಸಸಿ ನೆಟ್ಟು, ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ಸಿಗುವಂತೆ ಮಾಡೋಣ ಎಂದು ಸಲಹೆ ನೀಡಿದರು.
ಅಶುದ್ಧ ಗಾಳಿಯಿಂದಾಗಿ ಶ್ವಾಸಕೋಶ ಸಂಬಂಧಿ ರೋಗಗಳ ಜೊತೆಗೆ ಇನ್ನಿತರೆ ರೋಗಗಳು ಉಲ್ಭಣಿಸುತ್ತವೆ. ಅವೆಲ್ಲವನ್ನೂ ತಡೆಯಬೇಕೆಂದರೆ ಗಿಡ, ಮರ ನೆಟ್ಟು ಬೆಳೆಸುವುದೊಂದೇ ದಾರಿ ಉಳಿದಿದೆ. ಮನೆಯ ಸುತ್ತಲೂ ಹಾಗೂ ಎಲ್ಲೇ ಖಾಲಿ ಜಾಗ ಕಂಡರೂ ಸಸಿಗಳನ್ನು ನೆಡುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.
ಮೋಟಾರು ವಾಹನ ನಿರೀಕ್ಷಕ ಅನಂತುರಾಮ್ ಅವರು ಮಾತನಾಡಿ, ಶಬ್ದ ಮಾಲಿನ್ಯ, ಜಲ ಮಾಲಿನ್ಯ, ಪರಿಸರ ಮಾಲಿನ್ಯ, ಭೂ ಮಾಲಿನ್ಯ ಎಲ್ಲವನ್ನೂ ತಡೆಯಲು ಎಕೈಕ ಮಾರ್ಗ ಎಂದರೆ ಸಸಿಗಳು ನೆಟ್ಟು, ಪೋಷಣೆ ಮಾಡುವುದು. ಹೀಗಾಗಿ, ಈ ನಿಟ್ಟಿನಲ್ಲಿ ಯುವಕರು ಜಾಗೃತರಾಗಬೇಕು ಎಂದರು.
ರಾಜ್ಯ ಮೋಟಾರು ವಾಹನ ತರಬೇತಿ ಶಾಲೆಯ ಸಂಘಟನಾ ಕಾರ್ಯದರ್ಶಿ ಶಿವರಾಜ ಜಮಾದಾರ್ ಖಾಜಾಪುರ್ ಅವರು ಮಾತನಾಡಿ, ಜನ್ಮ ದಿನ ಕಾರ್ಯಕ್ರಮ, ಮನೆ ಶಾಂತಿ, ಮದುವೆ, ಜಾವಳ ಹೀಗೆ ಯಾವುದೇ ಸಂಭ್ರಮದ ಕಾರ್ಯಕ್ರಮಗಳಲ್ಲಿ ಸಸಿಗಳನ್ನು ವಿತರಿಸುವ ಪರಿಪಾಠ ರೂಢಿಸಿಕೊಳ್ಳಬೇಕು. ಈ ದಿನಗಳಲ್ಲಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಡೈಮಂಡ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ವೈ.ಮಾಧವರಾವ್, ಕಚೇರಿ ಅಧೀಕ್ಷಕ ಮಲ್ಲಿಕಾರ್ಜುನ್ ಎಂ., ಬೀದರ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಅದ್ಯಕ್ಷ ಪ್ರಕಾಶ್ ಗುಮ್ಮೆ, ಶಾಹು ಮಹಾರಾಜ್ ಪಿಯು ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ನಿಲಂಗೆ, ಉಪ ಪ್ರಾಂಶುಪಾಲ ಸುನಂದಾ ಬಿರಾದಾರ್, ವಿಕಾಸ ಕಾಂಬಳೆ ಹಾಗೂ ಆರ್ಟಿಒ ಕಚೇರಿ ಮತ್ತು ಕಾಲೇಜು ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.