ಬೀದರ್ | ಕನಕದಾಸರು ಸಮಾನತೆಯ ಹರಿಕಾರ : ಶಾಸಕ ಪ್ರಭು ಚೌವ್ಹಾಣ್
ಬೀದರ್ : ಕನಕದಾಸರು ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಯಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸಿ ಸಾಮಾಜಿಕ ಕ್ರಾಂತಿ ಮಾಡಿದ ಸಮಾನತೆಯ ಹರಿಹಾಕರರು ಎಂದು ಶಾಸಕ ಪ್ರಭು ಚೌವ್ಹಾಣ್ ತಿಳಿಸಿದರು.
ಔರಾದ್ ತಾಲೂಕಿನ ಬೋಂತಿಯ ಘಮಸುಬಾಯಿ ತಾಂಡಾದಲ್ಲಿನ ಗೃಹ ಕಚೇರಿಯಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ, ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕನಕ ಎಂಬುದು ಅಗಾಧಶಕ್ತಿ, ಅದಮ್ಯ ಚೇತನ. ಅವರು ಭಗವಂತನಿಗೆ ಹತ್ತಿರವಾಗಿದ್ದವರು. ಭಕ್ತಿಯ ಶಕ್ತಿಯನ್ನು ತೋರಿಸಿಕೊಟ್ಟವರು. ಸಮಾಜದ ಹಲವು ಲೋಪದೋಷಗಳನ್ನು ನಿವಾರಿಸಿ ಮಾನವೀಯತೆಯ ದಾರಿ ತೋರಿಸಿದ ಮಹಾನ್ ದಾರ್ಶನಿಕರು. ಅವರನ್ನು ಒಂದು ಜಾತಿಗೆ ಸೀಮಿತವಾಗಿಸದೆ ಅವರ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆಯಂತಹ ಮೇರು ಕೃತಿಗಳನ್ನು ನೀಡಿದ ಅವರು, ಕೀರ್ತನೆ, ನಾಟಕಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಅವರ ಚಿಂತನೆಗಳು ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. ಅವುಗಳನ್ನು ಅನುಸರಿಸಿದಲ್ಲಿ ಸಮಾಜವು ಸುವ್ಯವಸ್ಥೆಯಿಂದ ಇರಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರವೀಣ್ ಕಾರಬಾರಿ, ಸಚಿನ್ ರಾಠೋಡ್, ಭರತ್ ಕದಮ್, ಗುರುನಾಥ್ ರಾಜಗೀರಾ, ಗುಂಡಪ್ಪ ನಿಡೋದೆ, ಸಂದೀಪ್ ಜಾಧವ್, ಓಂಕಾರ್ ಮೇತ್ರೆ, ಸುಭಾಷ್ ಲಕ್ಷ್ಮೀನಗರ ಹಾಗೂ ಬಾಲಾಜಿ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.