ಬೀದರ್ | ಕನಕದಾಸರು ತಳ ಜನತೆಯ ಧ್ವನಿಯಾಗಿದ್ದರು : ಎಸ್.ಎಂ. ಜನವಾಡಕರ್
'ಕನಕ ಸಂಸ್ಕೃತಿ ಸಂಚಲನ, ಕನಕ ನಡೆ ನುಡಿ ಉತ್ಸವ' ಕಾರ್ಯಕ್ರಮ
ಬೀದರ್ : ಕನಕದಾಸರು ಕೇವಲ ದೇವರ ಭಕ್ತನಾಗಿ ಸೀಮಿತನಾದವರಲ್ಲ. ಅವರು ತತ್ವ ಚಿಂತಕರು, ಸಾಮಾಜಿಕ ವಿಶ್ಲೇಷಕರು ಹಾಗೂ ತಳಜನತೆಯ ಪರವಾಗಿ ಗಟ್ಟಿ ಧ್ವನಿ ಎತ್ತಿದ ಯೋಧರಾಗಿದ್ದರು ಎಂದು ಹಿರಿಯ ಸಾಹಿತಿ ಎಸ್.ಎಂ. ಜನವಾಡಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ, ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ್ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ 'ಕನಕ ಸಂಸ್ಕೃತಿ ಸಂಚಲನ, ಕನಕ ನಡೆ ನುಡಿ ಉತ್ಸವ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ಅವರು ತಮ್ಮ ಸಂಗೀತ, ಪದ್ಯ ಹಾಗೂ ಕೀರ್ತನೆಗಳಲ್ಲಿ ದೇವರ ಮಹಿಮೆ ಹೇಳಿದರೂ, ಅದರ ಒಳನೋಟದಲ್ಲಿ ನಮ್ಮ ಸಮಾಜದ ದುರವಸ್ಥೆ, ನೈತಿಕ ಪಾಠಗಳನ್ನು ಮುಡಿಪಾಗಿಸಿ ಜನರ ಹೃದಯದಲ್ಲಿ ಬದಲಾವಣೆಯ ಬೀಜ ಬಿತ್ತಿದರು ಎಂದು ತಿಳಿಸಿದರು.
ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಂಚಾಲಕ ಡಾ. ಸಂಜೀವಕುಮಾರ್ ಅತಿವಾಳೆ ಅವರು ಮಾತನಾಡಿ, ಇಂದಿನ ಯುವ ಜನತೆ ಕನಕದಾಸರ ಆದರ್ಶಮಯ ಜೀವನ ಶೈಲಿ ಮತ್ತು ಆಚಾರ ವಿಚಾರಗಳಿಂದ ಪ್ರೇರಣೆ ಪಡೆಯಬೇಕು. ಈ ಉದ್ದೇಶದಿಂದಲೆ ಈ ಕಾರ್ಯಕ್ರಮವನ್ನು ಕಾಲೇಜುಗಳ ಹಂತದಲ್ಲಿ ಆಯೋಜಿಸಲಾಗಿದೆ ಎಂದರು.
ಪ್ರಾಚಾರ್ಯರಾದ ಪ್ರೊ.ಶರಣಪ್ಪ ಮಲಗೊಂಡ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಶಂಕರ್ ಗಣಗೊಂಡ್, ಡಾ.ರಾಜಕುಮಾರ್ ಅಲ್ಲೂರೆ, ನಿವೃತ್ತ ಉಪನ್ಯಾಸಕ ಉಮಾಕಾಂತ್ ಮೀಸೆ, ಬಿ.ಎಂ.ಅಮರವಾಡಿ, ಸತ್ಯನಾರಾಯಣ, ಲಕ್ಷಣ್ ಮೇತ್ರೆ ಹಾಗೂ ಭೀಮಶಾ ಬರಗಾಲ ಸೇರಿದರೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.