ತೆಲಂಗಾಣದ ಜಹೀರಾಬಾದ್ ಬಳಿ ಭೀಕರ ರಸ್ತೆ ಅಪಘಾತ : ಬೀದರ್ ಮೂಲದ ಐವರು ಮೃತ್ಯು

Update: 2026-08-12 08:44 IST

ಬೀದರ್ : ನೆರೆಯ ತೆಲಂಗಾಣದ ಜಹೀರಾಬಾದ್ ಬಳಿ ಮಂಗಳವಾರ ಸಾಯಂಕಾಲ ಲಾರಿ ಹಾಗೂ ಟಂಟಂ ವಾಹನದ ನಡುವೆ ಭೀಕರ ಭೀಕರ ಅಪಘಾತ ಸಂಭವಿಸಿದ್ದು, ಬೀದರ್ ಜಿಲ್ಲೆಯ ಸಿಂಧೋಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಗೀರಾ ಗ್ರಾಮದ ಐವರು ಮೃತಪಟ್ಟಿರುವ ಘಟನೆ ನಡೆದಿದೆ.

ಹುಮನಾಬಾದ್ ತಾಲೂಕಿನ ರಾಜಗಿರಾ ಗ್ರಾಮಸ್ಥರಾದ ಆಟೋ ಚಾಲಕ ದೇವಿದಾಸ್, ಕವಿತಾ, ರೇಖಾ, ರೇಷ್ಮಾ ಹಾಗೂ ಶ್ರೀದೇವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಇನ್ನುಳಿದ 7ರಿಂದ 8 ಜನರು ಗಂಭಿರವಾಗಿ ಗಾಯಗೊಂಡಿದ್ದು, ಕೆಲವರನ್ನು ತೆಲಂಗಾಣದ ಸಂಗಾರೆಡ್ಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದ್ದು, ಉಳಿವರಿಗೆ ಬೀದರ್ ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಾಜಗಿರಾ ಗ್ರಾಮದಿಂದ ಪಕ್ಕದ ತೆಲಂಗಾಣ ರಾಜ್ಯದ ಹಳ್ಳಿಗಳಲ್ಲಿ ಇವರು ದಿನಾಲೂ ಕೂಲಿ ಕೆಲಸ ಮಾಡಲು ಹೋಗುತ್ತಿದ್ದರು. ಎಂದಿನಂತೆ ಮಂಗಳವಾರ ಕೂಡ ಕೂಲಿ ಕೆಲಸಕ್ಕೆ ತೆರಳಿದ್ದರು. ಕೂಲಿ ಕೆಲಸ ಮುಗಿಸಿಕೊಂಡು ಮರಳಿ ಮನೆಕಡೆಗೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ.

ಸಚಿವ ಈಶ್ವರ್ ಖಂಡ್ರೆ ಸಂತಾಪ :

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಈ ಘಟನೆ ಕುರಿತು ಸಂತಾಪ ಸೂಚಿಸಿದ್ದು, ರಾಜಗೀರಾ ಗ್ರಾಮದ 5 ಮಂದಿ ಮೃತಪಟ್ಟಿರುವ ಸುದ್ದಿ ಅತ್ಯಂತ ದುಃಖ ತಂದಿದೆ. ಈ ಹೃದಯವಿದ್ರಾವಕ ಘಟನೆಯಿಂದ ತೀವ್ರ ದಿಗ್ಭ್ರಮೆಗೊಂಡಿದ್ದೇನೆ. 

ಮೃತರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ. ಹಾಗೆಯೇ ಗಾಯಗೊಂಡಿರುವ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಹಾಗೂ ಮೃತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸುವ ಕುರಿತು ತೆಲಂಗಾಣದ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿರಲು ಬೀದರ್ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ ಅವರು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸುವಂತೆ ಬೀದರ್ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ದುಃಖದ ಸಂದರ್ಭದಲ್ಲಿ ಮೃತರ ಕುಟುಂಬಗಳೊಂದಿಗೆ ಸರ್ಕಾರ ಹಾಗೂ ನಾನು ಸದಾ ನಿಲ್ಲುತ್ತೇವೆ ಎನ್ನುವ ಭರವಸೆ ಅವರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News