ಪ್ರತ್ಯೇಕತಾವಾದಿಗಳ ಪಾಕ್ ವ್ಯಾಮೋಹಕ್ಕೆ ಕೊನೆ ಎಂದು?
ಅಪಾರ ದೇವಭಕ್ತಿ ಬೆಳೆಸಿಕೊಂಡವರಿಗೆ ಎಲ್ಲೆಲ್ಲೂ ಎಲ್ಲರಲ್ಲೂ ದೇವರೇ ಕಾಣುತ್ತಾನೆ ಎನ್ನುತ್ತಾರೆ. ಅದೇ ರೀತಿ ಪಾಕಿಸ್ತಾನದ ಬಗ್ಗೆ ಅಪಾರ ವ್ಯಾಮೋಹ ಬೆಳೆಸಿಕೊಂಡು ಪಾಕ್ ಭಕ್ತಿ ಪರವಶರಾದವರಿಗೆ ಎಲ್ಲೆಲ್ಲೂ, ಎಲ್ಲರಲ್ಲೂ ಪಾಕಿಸ್ತಾನವೇ ಕಾಣಿಸುತ್ತದೆ. ಜನರ ಮುಖಗಳಲ್ಲಿ ಮಾತ್ರವಲ್ಲ, ಕಣ್ಣು, ಕಿವಿ, ಮೂಗು, ನಾಲಗೆ ಇತ್ಯಾದಿಗಳಲ್ಲೂ ಇವರು ಪಾಕಿಸ್ತಾನದ ದರ್ಶನ ಮಾಡುತ್ತಿರುತ್ತಾರೆ. ಈ ಪಾಕ್ ಅಭಿಮಾನಿಗಳು ಭಾರತದಲ್ಲಿದ್ದುಕೊಂಡು, ಭಾರತದ ವಾಯುವನ್ನು ಸೇವಿಸುತ್ತಾ, ಭಾರತದ ನೀರು ಕುಡಿಯುತ್ತಾ, ಭಾರತದ ಅನ್ನ ತಿನ್ನುತ್ತಾ ಸದಾ ಪಾಕಿಸ್ತಾನವನ್ನು ಸ್ಮರಿಸುತ್ತಾ, ಪಾಕಿಸ್ತಾನದ ನಾಮ ಜಪಿಸುತ್ತಾ ಇರುತ್ತಾರೆ. ಈ ಮಟ್ಟದ ಕೊಳಕು ಪಾಕ್ ವ್ಯಾಮೋಹವನ್ನು ಮೊನ್ನೆ ತಾನೇ ನಮ್ಮ ರಾಜ್ಯದ ವಿಧಾನ ಪರಿಷತ್ತಿನಲ್ಲೂ ಪ್ರದರ್ಶಿಸಲಾಯಿತು.
ಏನಾದರೂ ಮಾಡಿ ಪಾಕಿಸ್ತಾನದ ಪ್ರವಾಸೋದ್ಯಮವನ್ನು ಬಲಪಡಿಸಬೇಕು ಎಂಬ ಸಂಕಲ್ಪ ಮಾಡಿರುವ ಪಾಕ್ ವ್ಯಾಮೋಹಿಗಳ ಛಲ ನಮ್ಮ ನೆಲದಲ್ಲಿ ಆಗಾಗ ಪ್ರಕಟವಾಗುತ್ತಲೇ ಇರುತ್ತದೆ. ಇವರು ಕಂಡಕಂಡವರೊಡನೆ, ‘‘ನೀವು ಪಾಕಿಸ್ತಾನಕ್ಕೆ ಹೋಗಿ’’ ಎಂದು ಅಂಗಲಾಚುತ್ತಲೇ ಇರುತ್ತಾರೆ. ಅದಕ್ಕೆ ಪೀಠಿಕೆಯಾಗಿ ನಿಮ್ಮಲ್ಲಿ ನನಗೆ ಪಾಕಿಸ್ತಾನ ಕಾಣಿಸುತ್ತಿದೆ ಎನ್ನುತ್ತಾರೆ. ಭಾರತೀಯರನ್ನು ಪಾಕಿಸ್ತಾನಕ್ಕೆ ಕಳಿಸುವ ಇವರ ಅಮಿತೋತ್ಸಾಹ ನೋಡಿದರೆ ಇವರು ಪಾಕಿಸ್ತಾನದ ಪರ ರಿಕ್ರೂಟ್ಮೆಂಟ್ ಏಜೆನ್ಸಿ ನಡೆಸುತ್ತಿರುವಂತೆ ತೋರುತ್ತದೆ. ವಿಪರ್ಯಾಸವೇನೆಂದರೆ ರಾಷ್ಟ್ರಪಿತನನ್ನು, ಸ್ವಾತಂತ್ರ್ಯ ಹೋರಾಟವನ್ನು, ರಾಷ್ಟ್ರಧ್ವಜ ವನ್ನು ವಿರೋಧಿಸಿದ ಕರಾಳ ಕಳಂಕ ತಮ್ಮ ತಲೆಮೇಲಿದ್ದರೂ ‘ನಾವು ಮಾತ್ರ ದೇಶಭಕ್ತರು’ ಎಂದು ಪೊಳ್ಳು ಬೊಗಳೆ ಕೊಚ್ಚಿಕೊಳ್ಳುತ್ತಲಿರುವ ಬಿಜೆಪಿಯ ಪಾಳಯದಲ್ಲಿ ಇಂತಹ ಪಾಕಿಸ್ತಾನ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
1927ರಲ್ಲಿ ಕರಾಚಿಯಲ್ಲಿ ಜನಿಸಿದ್ದ, ಬಿಜೆಪಿಯ ಅತ್ಯಂತ ಹಿರಿಯ ಜೀವಂತ ನಾಯಕ ಎಲ್.ಕೆ. ಅಡ್ವಾಣಿಯವರು 2005ರಲ್ಲಿ ತಮ್ಮ ತಾಯಿನಾಡಿಗೆ ಬಹಿರಂಗ ಭೇಟಿ ನೀಡಿದ್ದರು. ಆರು ದಿನಗಳ ಆ ತಮ್ಮ ಪಾಕಿಸ್ತಾನ ಭೇಟಿಯ ವೇಳೆ ಅಡ್ವಾಣಿಯವರು ತುಂಬಾ ಭಾವುಕರಾಗಿ ಬಿಟ್ಟಿದ್ದರು. ಕರಾಚಿ ನಗರದೊಂದಿಗೆ ತಮಗಿರುವ ಬಾಂಧವ್ಯದ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದರು. ತಾನು ಮತ್ತು ಆಗಿನ ಪಾಕಿಸ್ತಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ - ಇಬ್ಬರೂ ಕರಾಚಿಯ ಸೈಂಟ್ ಪ್ಯಾಟ್ರಿಕ್ಸ್ ಹೈಸ್ಕೂಲ್ ಎಂಬ ಒಂದೇ ಶಾಲೆಯಲ್ಲಿ ಕಲಿತವರೆಂಬುದನ್ನು ಅಭಿಮಾನಪೂರ್ವಕವಾಗಿ ಜಗತ್ತಿಗೆಲ್ಲಾ ತಿಳಿಸಿದ್ದರು. ಜನರಲ್ ಮುಷರ್ರಫ್ ಜೊತೆಗಿನ ಮಾತುಕತೆಯ ವೇಳೆಯೂ ಅವರು ಈ ವಿಷಯವನ್ನು ಆತ್ಮೀಯವಾಗಿ ಪ್ರಸ್ತಾಪಿಸಿದ್ದರು. ಸಾಲದ್ದಕ್ಕೆ ತಾನು ಬಾಲ್ಯದಲ್ಲಿ ಕಲಿತಿದ್ದ ಕರಾಚಿಯ ಸೈಂಟ್ ಪ್ಯಾಟ್ರಿಕ್ಸ್ ಹೈಸ್ಕೂಲ್ಗೆ ಅಡ್ವಾಣಿಯವರು ಭೇಟಿ ನೀಡಿದ್ದರು. ಹಾಗೆಂದು ಸ್ವಾತಂತ್ರ್ಯಾನಂತರ ಇದು ಪಾಕಿಸ್ತಾನಕ್ಕೆ ಅಡ್ವಾಣಿಯವರ ಮೊದಲ ಭೇಟಿಯಾಗಿರಲಿಲ್ಲ. ಸ್ವತಃ ಅವರೇ ಬಿಜೆಪಿಯ ಅಧಿಕೃತ ವೆಬ್ಸೈಟ್ನಲ್ಲಿ ಹೇಳಿಕೊಂಡಿರುವಂತೆ 1978ರಲ್ಲೂ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.
ಹೀಗೆ 2005ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ ಎಲ್.ಕೆ. ಅಡ್ವಾಣಿಯವರು ಕರಾಚಿಯಲ್ಲಿ ಪ್ರಥಮವಾಗಿ ಭೇಟಿ ನೀಡಿದ್ದು ಎಲ್ಲಿಗೆ ಗೊತ್ತೇ? ಬೇರೆಲ್ಲಿಗೂ ಅಲ್ಲ. ಪಾಕಿಸ್ತಾನದ ಸ್ಥಾಪಕ ಹಾಗೂ ರಾಷ್ಟ್ರಪಿತ ಮುಹಮ್ಮದ್ ಅಲಿ ಜಿನ್ನಾ ಅವರ ಸಮಾಧಿಗೆ. ಅವರ ಆ ಭೇಟಿ ಕೂಡಾ ಕೇವಲ ಔಪಚಾರಿಕ ಸ್ವರೂಪದ್ದಾಗಿರಲಿಲ್ಲ. ಅಲ್ಲೂ ಅವರು ತುಂಬಾ ಭಾವುಕರಾಗಿ ಬಿಟ್ಟಿದ್ದರು. ಅಲ್ಲಿ ಅವರು ‘ಸಂದರ್ಶಕರ ಪುಸ್ತಕ’ದಲ್ಲಿ ಬರೆದ ಸಂದೇಶವು ಐತಿಹಾಸಿಕವಾಗಿ ಬಿಟ್ಟಿತು: ಎಲ್.ಕೆ. ಅಡ್ವಾಣಿಯವರು ಜಿನ್ನಾ ಸ್ಮಾರಕದಲ್ಲಿ ಬರೆದ ಸಂದೇಶದ ಕನ್ನಡ ಅನುವಾದ ಇಲ್ಲಿದೆ:
ಇತಿಹಾಸದ ಪುಟಗಳ ಮೇಲೆ ಅಳಿಸಲಾಗದ ಛಾಪನ್ನುಮೂಡಿಸಿ ಹೋಗುವವರು ಅನೇಕರಿದ್ದಾರೆ. ಆದರೆ ನಿಜವಾಗಿಯೂ ಇತಿಹಾಸವನ್ನು ಸೃಷ್ಟಿಸುವವರು ಬಹಳ ವಿರಳ. ಕಾಯಿದೆ ಆಝಮ್ (ಮಹಾನಾಯಕ) ಮುಹಮ್ಮದ್ ಅಲಿ ಜಿನ್ನಾ ಅವರು ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರ ಆರಂಭಿಕ ದಿನಗಳಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕಿಯಾಗಿದ್ದ ಸರೋಜಿನಿ ನಾಯ್ಡು ಅವರು ಜಿನ್ನಾ ಅವರನ್ನು ‘ಹಿಂದೂ-ಮುಸ್ಲಿಮ್ ಏಕತೆಯ ರಾಯಭಾರಿ’ ಎಂದು ಬಣ್ಣಿಸಿದ್ದರು. ಆಗಸ್ಟ್ 11, 1947ರಂದು ಪಾಕಿಸ್ತಾನದ ಸಂವಿಧಾನ ರಚನಾ ಸಭೆಯನ್ನು ಉದ್ದೇಶಿಸಿ ಅವರು ಮಾಡಿದ ಭಾಷಣವು ಒಂದು ಸಾರ್ವಕಾಲಿಕ ಶ್ರೇಷ್ಠ ದಾಖಲೆಯಾಗಿದೆ. ಅದು ಜಾತ್ಯತೀತ ರಾಷ್ಟ್ರದ ಕಲ್ಪನೆಯನ್ನು ಬಲವಾಗಿ ಪ್ರತಿಪಾದಿಸುತ್ತದೆ; ಅಂತಹ ರಾಷ್ಟ್ರದಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಧರ್ಮವನ್ನು ಪಾಲಿಸಲು ಸ್ವತಂತ್ರನಾಗಿರುತ್ತಾನೆ ಮತ್ತು ಸರಕಾರವು ಧರ್ಮದ ಆಧಾರದ ಮೇಲೆ ನಾಗರಿಕರ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಈ ಮಹಾನ್ ವ್ಯಕ್ತಿಗೆ ನನ್ನ ಗೌರವಪೂರ್ವಕ ನಮನಗಳು.
ನೆನಪಿರಲಿ ಇವೆಲ್ಲಾ ನಮ್ಮ ರಾಜ್ಯದ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರ ಹೇಳಿಕೆಗಳಲ್ಲ. ಸಿ.ಟಿ. ರವಿಯವರ ಪಕ್ಷದ ಅತ್ಯುನ್ನತ ಮಟ್ಟದ ಹಿರಿಯ ನಾಯಕರಾದ ಸಾಕ್ಷಾತ್ ಎಲ್.ಕೆ. ಅಡ್ವಾಣಿಯವರು, ಯಾರೂ ಅಳಿಸಲಾಗದ ರೀತಿಯಲ್ಲಿ ಬರೆದು ದಾಖಲಿಸಿರುವ ಮಾತುಗಳು. ಅಡ್ವಾಣಿಯವರು ಜಿನ್ನಾ ಅವರ ಕುರಿತು ಬರೆದ ಈ ಉತ್ಪ್ರೇಕ್ಷಿತ ಪ್ರಶಂಸೆಯ ಮಾತುಗಳನ್ನು ಖುದ್ದಾಗಿ ಓದಬಯಸುವವರು ಬಿಜೆಪಿಯ ಈ ಕೆಳಗಿನ ಅಧಿಕೃತ ವೆಬ್ಸೈಟ್ನಲ್ಲಿ ಅದನ್ನು ಓದಿ ತಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು.
https://www.bjp.org/pressreleases/shri-advani-visits-jinnah-mausoleum-karachi
ಇದು ‘ರಥಯಾತ್ರೆ’ ಖ್ಯಾತಿಯ ಅಡ್ವಾಣಿಯವರ ಕತೆಯಾದರೆ 1999 ಫೆಬ್ರವರಿ ತಿಂಗಳಲ್ಲಿ, ಆಗ ದೇಶದ ಪ್ರಧಾನಿಯಾಗಿದ್ದ ಎ.ಬಿ. ವಾಜಪೇಯಿ ಅವರು ಪಾಕಿಸ್ತಾನದ ಲಾಹೋರ್ಗೆ ಒಂದು ‘ಬಸ್ ಯಾತ್ರೆ’ ನಡೆಸಿದ್ದರು. ಆಗ ಪಾಕ್ ಪ್ರಧಾನಿಯಾಗಿದ್ದ ನವಾಝ್ ಷರೀಫ್ ಅವರನ್ನು ಭೇಟಿಯಾಗಿ ಒಂದು ಶಾಂತಿ ಒಪ್ಪಂದಕ್ಕೆ ಸಹಿಹಾಕಿದ್ದರು. ಲಾಹೋರ್ನಲ್ಲಿರುವ 70 ಅಡಿ ಎತ್ತರದ ‘ನಿಶಾನೆ ಪಾಕಿಸ್ತಾನ್’ ಸ್ಮಾರಕವನ್ನು ಸಂದರ್ಶಿಸಿ ತಮ್ಮ ಶ್ರದ್ಧಾ ಪೂರ್ವಕ ನಮನ ಸಲ್ಲಿಸಿದ್ದರು. ಅದೇ ಪಾಕ್ ಭೇಟಿಯ ಸಂದರ್ಭದಲ್ಲಿ ಲಾಹೋರ್ನಲ್ಲಿ ವಾಜಪೇಯಿ ಅವರು ಒಂದು ಅದ್ಭುತ ಭಾಷಣವನ್ನೂ ಮಾಡಿದ್ದರು. ಅವರ ಭಾಷಣ ಕೇಳಿದ ಪಾಕ್ ಪ್ರಧಾನಿ ನವಾಝ್ ಷರೀಫ್ ಅವರು, ವಾಜಪೇಯಿ ಜೀ, ಈಗ ನೀವು ಪಾಕಿಸ್ತಾನದಲ್ಲೂ ಚುನಾವಣೆ ಗೆಲ್ಲಬಲ್ಲಿರಿ ಎಂದಿದ್ದರು.
2015 ಡಿಸೆಂಬರ್ನಲ್ಲಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕೃತ ಭೇಟಿಗಾಗಿ ಅಫ್ಘಾನಿಸ್ತಾನಕ್ಕೆ ಹೋಗಿದ್ದರು. ಭೇಟಿ ಮುಗಿಸಿ ಅವರು ಭಾರತಕ್ಕೆ ಮರಳುತ್ತಾರೆ ಎಂದೇ ಎಲ್ಲರೂ ನಂಬಿದ್ದರು. ಆದರೆ ಡಿಸೆಂಬರ್ 25 ರಂದು ಮೋದಿಯವರು ಹಠಾತ್ತನೆ ಪಾಕಿಸ್ತಾನದಲ್ಲಿ ಪ್ರತ್ಯಕ್ಷರಾಗಿ ಬಿಟ್ಟರು. ಕಾರಣ ಗೊತ್ತೇ? ಡಿಸೆಂಬರ್ 25 ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಝ್ ಷರೀಫ್ ಅವರ ಜನ್ಮದಿನವಾಗಿತ್ತು. ಪಾಕ್ ಪ್ರಧಾನಿಯವರು ತನ್ನ ಜನ್ಮ ದಿನವನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಸೇರಿ ಸಂಭ್ರಮದಿಂದ ಆಚರಿಸಿದರು. ಅಪ್ಪುಗೆ, ತಬ್ಬುಗೆ, ಔತಣ, ಭೋಜನ ಇತ್ಯಾದಿ ಎಲ್ಲವೂ ನಡೆಯಿತು. ತಮ್ಮ ನಾಯಕರುಗಳ ಈಮಟ್ಟದ ಪಾಕಿಸ್ತಾನ ಪ್ರೇಮ, ಜನರಲ್ ಮುಷರ್ರಫ್ ಪ್ರೇಮ ಮತ್ತು ನವಾಝ್ ಷರೀಫ್ ಪ್ರೇಮವನ್ನು ಸಿ.ಟಿ. ರವಿಯವರು ಹೇಗೆಂದು ವರ್ಣಿಸುತ್ತಾರೆ? ತಮ್ಮ ಪ್ರಸ್ತುತ ನಾಯಕರನ್ನು ಪೂಜಿಸುವ ಈ ಮಟ್ಟದ ಪಾಕ್ ಪ್ರೇಮಿ ಮಂದಿಗೆ ಎಲ್ಲೆಂದರಲ್ಲಿ ಪಾಕಿಸ್ತಾನ ಕಾಣಿಸಿದರೆ ಅಚ್ಚರಿಯೇನಿಲ್ಲ. ಆದರೆ ಇಂಥವರು ಭಾರತೀಯರ ದೇಶನಿಷ್ಠೆಯನ್ನು ಪ್ರಶ್ನಿಸುವ ಭಂಡತನ ತೋರಿದರೆ ಅದು ನಿಜವಾದ ದೇಶದ್ರೋಹ. ದ್ರೋಹಗಳ ಪೈಕಿ ಅತ್ಯಂತ ಅಕ್ಷಮ್ಯ ದ್ರೋಹ.