×
Ad

ಮಾದಕ ವ್ಯಸನದ ವಿರುದ್ಧ ಸಮಗ್ರ ಜಾಗೃತಿ ಅಗತ್ಯ: ಮಸೀಹುಝ್ಝಮಾ ಅನ್ಸಾರಿ

ತರೀಕೆರೆಯಲ್ಲಿ 'ಚಿಕ್ಕಮಗಳೂರು ಜಿಲ್ಲಾ ಯುವ ಸಮಾವೇಶ'

Update: 2026-05-21 15:48 IST

ಚಿಕ್ಕಮಗಳೂರು: ತರೀಕೆರೆ ಯುವ ಸಮಿತಿ ಹಾಗೂ ಸೋಲಿಡಾರಿಟಿ ಯೂತ್ ಮೂವ್ ಮೆಂಟ್, ತರೀಕೆರೆ ಘಟಕದ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ 'ಉತ್ತಮ ಸಮಾಜಕ್ಕಾಗಿ ಸಬಲ ಯುವಜನತೆ' ಎಂಬ ವಿಷಯದಡಿ ಚಿಕ್ಕಮಗಳೂರು ಜಿಲ್ಲಾ ಯುವ ಸಮಾವೇಶ ಆಯೋಜಿಸಲಾಗಿತ್ತು.

ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಯುವಜನ ಒಕ್ಕೂಟದ ಅಧ್ಯಕ್ಷ ಮಸೀಹುಝ್ಝಮಾ ಅನ್ಸಾರಿ, ಜೆಐಎಚ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಸಾದ್ ಬೆಳಗಾಮಿ, ತರೀಕೆರೆಯ ಸಬ್ ಇನ್ ಸ್ಪೆಕ್ಟರ್ ಮಂಜುನಾಥ್ ಮಲ್ಲಂಗಿ ಹಾಗೂ ಎಸ್ ವೈಎಂ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್ ಭಾಗವಹಿಸಿದ್ದರು.

ದಿಕ್ಸೂಚಿ ಭಾಷಣ ಮಾಡಿದ ಮಸೀಹುಝ್ಝಮಾ ಅನ್ಸಾರಿ, ಯುವಜನತೆ ಮಾದಕ ವ್ಯಸನದ ಬಲೆಗೆ ಸಿಲುಕುತ್ತಿರುವುದು ಸಮಾಜಕ್ಕೆ ದೊಡ್ಡ ಸವಾಲಾಗಿದ್ದು, ಇದರ ವಿರುದ್ಧ ಸಮಗ್ರ ಜಾಗೃತಿ ಅಗತ್ಯವಿದೆ ಎಂದು ತಿಳಿಸಿದರು.

ಮಂಜುನಾಥ್ ಮಲ್ಲಂಗಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳು ಪೋಷಕರನ್ನೇ ಅನುಕರಿಸುವುದರಿಂದ ಕುಟುಂಬದಲ್ಲಿ ನೈತಿಕ ಮೌಲ್ಯಗಳು ಬಲವಾಗಿರಬೇಕು ಎಂದು ಹೇಳಿದರು.

ಮಾದಕ ಪದಾರ್ಥಗಳ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವಜನತೆ ಮಾದಕ ವ್ಯಸನ, ಆನ್ ಲೈನ್ ಗೇಮ್ ಹಾಗೂ ಆನ್ ಲೈನ್ ಜೂಜಿನಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.

ಕಳೆದ ಒಂದು ವಾರದಿಂದ ಮಾದಕ ವ್ಯಸನ ಮತ್ತು ಜೂಜಿನ ವಿರುದ್ಧ ಜಾಗೃತಿ ಅಭಿಯಾನ ನಡೆಸಿ ಯುವ ಸಮಾವೇಶ ಆಯೋಜಿಸಿರುವ ತರೀಕೆರೆ ಯುವ ಸಮಿತಿ ಹಾಗೂ ಸೋಲಿಡಾರಿಟಿ ತಂಡದ ಕಾರ್ಯವನ್ನು ಶ್ಲಾಘಿಸಿದರು.

ಹಿರಿಯ ವೈದ್ಯ ಹಾಗೂ ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಕರ್ನಾಟಕದ ಮೇಲ್ವಿಚಾರಕ ಡಾ. ಸಾದ್ ಬೆಳಗಾಮಿ, ಮಾದಕ ವ್ಯಸನದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಯುವಜನತೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿ ಆತ್ಮಹತ್ಯೆಗಳಂತಹ ದುರಂತಗಳಿಗೆ ತುತ್ತಾಗುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ನಸೀಮ್ ಅಹ್ಮದ್, ಯುವಜನತೆ ದುಶ್ಚಟಗಳಿಂದ ದೂರವಿದ್ದು ನೈತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.

ಧರ್ಮ, ಜಾತಿ ಭೇದವಿಲ್ಲದೆ ಸಮಾಜದ ಪ್ರತಿಯೊಬ್ಬ ಯುವಕನನ್ನೂ ಇಂತಹ ಕೆಡುಕುಗಳಿಂದ ರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಯುವಜನತೆ ದೇಶದ ಅಮೂಲ್ಯ ಆಸ್ತಿಯಾಗಿದ್ದು, ಅವರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವುದು ಅತ್ಯಗತ್ಯ ಎಂದು ಹೇಳಿದರು.

ಪ್ರವಾದಿ ಮುಹಮ್ಮದ್ (ಸ.) ಅವರು ತಮ್ಮ ಯೌವನದಲ್ಲಿ 'ಹಿಲ್ಫುಲ್ ಫಝೂಲ್' ಎಂಬ ಒಡಂಬಡಿಕೆಯ ಮೂಲಕ ವಿವಿಧ ಸಮುದಾಯದ ಜನರನ್ನು ಒಗ್ಗೂಡಿಸಿ ಅನ್ಯಾಯದ ವಿರುದ್ಧ ಹೋರಾಡಿದ ಉದಾಹರಣೆಯನ್ನು ಉಲ್ಲೇಖಿಸಿದ ಡಾ.ನಸೀಮ್ ಅಹ್ಮದ್, ಇಂದಿನ ಎಲ್ಲ ಯುವ ಸಂಘಟನೆಗಳೂ ಸಮಾಜದ ಕೆಡುಕುಗಳ ವಿರುದ್ಧ ಒಗ್ಗೂಡಿ ಹೋರಾಡಬೇಕು ಎಂದು ಹೇಳಿದರು.

ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿದ ತರೀಕೆರೆ ಯುವ ಸಮಿತಿ ಹಾಗೂ ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ತರೀಕೆರೆ ಘಟಕಕ್ಕೆ ಅಭಿನಂದನೆ ಸಲ್ಲಿಸಿದರು. ಮುಂದಿನ ಹಂತವಾಗಿ ಯುವಜನರನ್ನು ಮಾದಕ ವ್ಯಸನದಿಂದ ರಕ್ಷಿಸುವ ಉದ್ದೇಶದಿಂದ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಕರ್ನಾಟಕದ ವತಿಯಿಂದ ಪ್ರಕಟಿಸಲಾದ 'ಡಿಜಿಟಲ್ ಸ್ವಾತಂತ್ರ್ಯ' ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News