Chikkamagaluru | ವಿದೇಶದಲ್ಲಿ ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ ಆರೋಪ: ಯುವತಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಎಸ್ಪಿಗೆ ಪತ್ರ
ಯುವತಿಯ ರಕ್ಷಣೆ
ಚಿಕ್ಕಮಗಳೂರು: ವಿದೇಶದಲ್ಲಿ ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಕೋರರಿಗೆ ಮಾರಾಟ ಮಾಡಿದ್ದ ಅಮಾನವೀಯ ಘಟನೆಯೊಂದು ವರದಿಯಾಗಿದ್ದು, ನೊಂದ ಯುವತಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಹಕ್ಕಿಪಿಕ್ಕಿ ಸಮುದಾಯ ಜಿಲ್ಲಾ ಎಸ್ಪಿಗೆ ಪತ್ರ ಬರೆದಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಕಾಲನಿಯ ದಂಪತಿ 20 ವರ್ಷದ ಮಗಳೊಂದಿಗೆ ಗಿಡಮೂಲಿಕೆಗಳ ಮಾರಾಟಕ್ಕೆಂದು 10 ದಿನಗಳ ಹಿಂದೆ ಸೆನೆಗಲ್ ದೇಶಕ್ಕೆ ತೆರಳಿದ್ದರು. ಈ ವೇಳೆ ಮಗಳನ್ನು 7 ಲಕ್ಷ ರೂ. ಗೆ ವೇಶ್ಯಾವಾಟಿಕೆ ದಂಧೆಕೋರರಿಗೆ ಮಾರಾಟ ಮಾಡಿ, ಅಲ್ಲಿ ತಮ್ಮೊಂದಿಗೆ ಬಂದಿದ್ದವರ ಬಳಿ, ಮಗಳು ಭಾರತಕ್ಕೆ ಹೋಗಿದ್ದಾಳೆಂದು ಸುಳ್ಳು ಹೇಳಿದ್ದರು ಎಂದು ಆರೋಪಿಸಲಾಗಿದೆ.
ತನ್ನ ಪೋಷಕರ ಈ ಕೃತ್ಯದಿಂದ ನೊಂದ ಯುವತಿ ಸೆನೆಗಲ್ ದೇಶದಿಂದಲೇ ತನ್ನ ಪರಿಚಯಸ್ಥರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾಳೆ. ಅಲ್ಲದೇ ವೀಡಿಯೊ ಮಾಡಿ ಪೋಷಕರ ಕೃತ್ಯವನ್ನು ಹೇಳಿಕೊಂಡಿದ್ದಾಳೆ. ಈ ಸಂಬಂಧ ಆಕೆಯ ಪರಿಚಯಸ್ಥರು ಮತ್ತು ಹಕ್ಕಿಪಿಕ್ಕಿ ಸಮುದಾಯದ ಸಂಘಟನೆಗಳು, ಮುಖಂಡರು ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಹಂಚಿಕೊಂಡಿದ್ದಾರೆ. ನಂತರ ಸ್ಥಳೀಯ ಪೊಲೀಸರ ನೆರವಿನಿಂದ ಯುವತಿಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಯುವತಿ ಪೋಷಕರು ಚಿಕ್ಕಮಗಳೂರಿನ ಮಲ್ಲೇನಹಳ್ಳಿಗೆ ಹಿಂದಿರುಗಿದ್ದಾರೆ ಎನ್ನಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.