×
Ad

ಬಿಡುಗಡೆಯಾದ ಎರಡೇ ದಿನಕ್ಕೆ ದಿಲ್ಜಿತ್ ದೋಸಾಂಜ್ ನಟನೆಯ ‘ಸತ್ಲುಜ್’ ಒಟಿಟಿಯಿಂದ ಡಿಲೀಟ್!

►ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ►ZEE5 ಹೇಳಿದ್ದೇನು?

Update: 2026-07-06 14:10 IST

ಜುಲೈ 3ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಬಿಟ್ಟು ನೇರವಾಗಿ ಸ್ಟ್ರೀಮಿಂಗ್ ವೇದಿಕೆಯಲ್ಲಿ ಪ್ರಥಮ ಪ್ರದರ್ಶನಗೊಂಡ ಸಿನಿಮಾ ಈಗ ಭಾರತದಲ್ಲಿ ವೀಕ್ಷಕರಿಗೆ ಲಭ್ಯವಿಲ್ಲ.

--

ದಿಲ್ಜಿತ್ ದೋಸಾಂಜ್ ಅಭಿನಯದ ಸತ್ಲುಜ್ ಸಿನಿಮಾವನ್ನು ಡಿಜಿಟಲ್ ಪ್ರೀಮಿಯರ್ ಆದ ಕೇವಲ 2 ದಿನಗಳ ನಂತರ ಝೀ5ನಿಂದ ತೆಗೆದುಹಾಕಿರುವುದು ಆನ್ಲೈನ್ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಬಿಡುಗಡೆಗೆ ಮೊದಲೇ 120 ಕಡಿತಗಳನ್ನು ಸೂಚಿಸಿರುವುದು ವರದಿಯಾದ ನಂತರ ಚಿತ್ರವನ್ನು ತೆಗೆದು ಹಾಕಿರುವುದಕ್ಕೆ ಸಾಮಾಜಿಕ ಮಾಧ್ಯಮ ಬಳಕೆದಾರರು ನಿರಾಶೆ ವ್ಯಕ್ತಪಡಿಸಿದ್ದಾರೆ. ಜುಲೈ 3ರಂದು ಚಿತ್ರಮಂದಿರದಲ್ಲಿ ಬಿಡುಗಡೆಯನ್ನು ಬಿಟ್ಟು ನೇರವಾಗಿ ಸ್ಟ್ರೀಮಿಂಗ್ ವೇದಿಕೆಯಲ್ಲಿ ಪ್ರಥಮ ಪ್ರದರ್ಶನಗೊಂಡ ಸಿನಿಮಾ ಈಗ ಭಾರತದಲ್ಲಿ ವೀಕ್ಷಕರಿಗೆ ಲಭ್ಯವಿಲ್ಲ.

ಈ ಮೊದಲು ಸಿನಿಮಾಗೆ ‘ಪಂಜಾಬ್ 95’ ಎಂದು ಹೆಸರು ನೀಡಲಾಗಿತ್ತು. ಆದರೆ ಸೆನ್ಸಾರ್ ಮಂಡಳಿಯ ಕಾರಣದಿಂದ ಹೆಸರನ್ನು ಬದಲಿಸಲಾಗಿತ್ತು. ಈ ಸಂಪೂರ್ಣ ಸಿನಿಮಾ ಸಾಮಾಜಿಕ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಜೀವನವನ್ನು ಆಧರಿಸಿದೆ.

Full View

ಒಟಿಟಿಯಿಂದ ಚಿತ್ರವನ್ನು ತೆಗೆದು ಹಾಕಿರುವಕ್ಕೆ ಪ್ರತಿಕ್ರಿಯಿಸಿರುವ ನಾಯಕ ದಿಲ್ಜಿತ್ ದೊಸಾಂಜ್, “ಕತ್ತಲೆಗೆ ನಾನು ಸವಾಲೊಡ್ಡುತ್ತೇನೆ” ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ZEE5 ಹೇಳಿದ್ದೇನು?

ಅಧಿಕೃತ ಹೇಳಿಕೆಯಲ್ಲಿ ಸ್ಟ್ರೀಮಿಂಗ್ ವೇದಿಕೆ ಝೀ5 ಸಿನಿಮಾದ ತಯಾರಕರು ಮತ್ತು ಅವರ ಸೃಜನಶೀಲ ದೃಷ್ಟಿಕೋನವನ್ನು ಬೆಂಬಲಿಸುವುದಾಗಿ ಹೇಳೀದೆ. ಆದರೆ ಭಾರತದ ವೀಕ್ಷಕರಿಗೆ ಸಿನಿಮಾವನ್ನು ಮರಳಿ ತರಲು ಕಾನೂನು ಆಯ್ಕೆಗಳನ್ನು ಅನ್ವೇಷಿಸುತ್ತಿರುವುದಾಗಿ ತಿಳಿಸಿದೆ.

“ಸತ್ಲುಜ್ ಬಿಡುಗಡೆಯಾದಾಗಿನಿಂದ ಸಿನಿಮಾಗೆ ಅಗಾಧ ಪ್ರತಿಕ್ರಿಯೆ ಬಂದಿದೆ. ಸಿನಿಮಾಗೆ ಚಂದಾದಾರರಾಗಲು, ವೀಕ್ಷಿಸಲು ಮತ್ತು ಬೆಂಬಲಿಸಿದ ಪ್ರತಿ ವೀಕ್ಷಕರಿಗೂ ತುಂಬಾ ಕೃತಜ್ಞರಾಗಿರುತ್ತೇವೆ. ನಿಮ್ಮ ಪ್ರೀತಿ ಮತ್ತು ಬೆಂಬಲವು ನಮಗೆ ಮತ್ತು ಈ ಕತೆಯನ್ನು ಜೀವಂತಗೊಳಿಸಿದ ಎಲ್ಲರಿಗೂ ಬಹಳ ಅರ್ಥಪೂರ್ಣ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

“ಝೀ5ನಲ್ಲಿ ನಾವು ಸತ್ಲುಜ್ ಮತ್ತು ಅದರ ಹಿಂದಿನ ಸೃಜನಶೀಲ ದೃಷ್ಟಿಕೋನದ ಜೊತೆಗೆ ದೃಢವಾಗಿ ನಿಲ್ಲುತ್ತೇವೆ. ಶಕ್ತಿಯುತವಾದ ಕತೆ ಹೇಳುವಿಕೆಯು ಸ್ಫೂರ್ತಿ ನೀಡುವ, ಸಹಿಸಿಕೊಳ್ಳುವ ಮತ್ತು ಶಾಶ್ವತ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ ಎಂದು ನಂಬುತ್ತೇವೆ. ಅಧಿಕೃತ ಮತ್ತು ಅರ್ಥಪೂರ್ಣ ನಿರೂಪಣೆಗಳನ್ನು ಸಮರ್ಥಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಸಟ್ಲುಜ್’ ಸಿನಿಮಾ ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಮತ್ತು ಪಂಜಾಬ್ ನ ಕರಾಳ ಅಧ್ಯಾಯಗಳಲ್ಲಿ ಒಂದಾದ ನ್ಯಾಯಕ್ಕಾಗಿ ಅವರ ನಿರಂತರ ಹೋರಾಟದ ಕತೆಯನ್ನು ಅನುಸರಿಸುತ್ತದೆ. ನಿಜವಾದ ಘಟನೆಗಳಿಂದ ಪ್ರೇರಿತವಾದ ಸಿನಿಮಾ ಉಗ್ರಗಾಮಿ ಯುಗದಲ್ಲಿ ಸಾವಿರಾರು ಗುರುತಿಸಲಾಗದ ದೇಹಗಳನ್ನು ಅಕ್ರಮವಾಗಿ ದಹನ ಮಾಡಲಾಗಿದೆ ಎಂದು ಹೇಳಲಾದ ಪ್ರಕರಣವನ್ನು ಬಹಿರಂಗಪಡಿಸಲು ಖಲ್ರಾ ಅವರ ಪ್ರಯತ್ನಗಳನ್ನು ವಿವರಿಸುತ್ತದೆ. ಸಿನಿಮಾ ರಾಜ್ಯದ ಇತಿಹಾಸದರಲ್ಲಿ ಒಂದು ಭಯಾನಕ ಅವಧಿಯ ಮೇಲೆ ಬೆಳಕು ಚೆಲ್ಲುತ್ತದೆ.

ಹನಿ ಟ್ರೆಹಾನ್ ನಿರ್ದೇಶನದ ಸಿನಿಮಾದಲ್ಲಿ ಅರ್ಜುನ್ ರಾಂಪಾಲ್, ಕನ್ವಲ್ಜಿತ್ ಸಿಂಗ್, ಸುವಿಂದರ್ ವಿಕ್ಕಿ ಮತ್ತು ಗೀತಿಕಾ ವಿದ್ಯಾ ಓಹ್ಲ್ಯಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪತ್ರಕರ್ತರು ಮತ್ತು ಪಂಜಾಬ್ ಗೆ ಸಂಬಂಧಿತರು ಅನೇಕರು ಸಿನಿಮಾವನ್ನು ಒಟಿಟಿಯಿಂದ ತೆಗೆದು ಹಾಕಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಪತ್ರಕರ್ತ ರಾಹುಲ್ ರೌತ್, “ಇಂದಿನ ಪರಿಸರದಲ್ಲಿ ಸತ್ಯವನ್ನು ತೋರಿಸುವುದೂ ಒಂದು ಹೋರಾಟ. ಆದರೆ ಪ್ರಚಾರದ ಸಿನಿಮಾಗಳನ್ನು ಮಾರುವುದು ಸುಲಭ. ಚಿತ್ರ ನಿರ್ದೇಶಕರೊಬ್ಬರು ಸತ್ಯ ಹೇಳುವ ಧೈರ್ಯ ತೋರಿಸಿದ್ದಾರೆ. ನಾವು ಧೈರ್ಯವನ್ನು ಮೆಚ್ಚಬೇಕು” ಎಂದು ಬರೆದಿದ್ದಾರೆ.

ಖ್ಯಾತ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಅವರೂ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ನಿಷೇಧವನ್ನು ಟೀಕಿಸಿದ್ದಾರೆ.

“ಮುಖ್ಯವಾದ ವಿಷಯ: ಸೆನ್ಸಾರ್ಶಿಪ್ ಒಟಿಟಿಗೂ ತಲುಪಿದೆ? ‘ಸತ್ಲುಜ್’ ಸಿನಿಮಾವನ್ನು ಸ್ಪಷ್ಟವಾದ ಕಾರಣಗಳಿಲ್ಲದೆ ಝೀ5ನಿಂದ ತೆಗೆಯಲಾಗಿದೆ. ವೇದಿಕೆ ಭಾರತದಲ್ಲಿ ಲಭ್ಯವಿಲ್ಲ ಎಂದಷ್ಟೇ ಹೇಳುತ್ತಿದೆ. ಒಟಿಟಿ ದಿಟ್ಟತನದ ಮತ್ತು ಮೂಲ ಕತೆ ಹೇಳುವ ಮೂಲಕ ಜನರನ್ನು ರಂಜಿಸುತ್ತಿತ್ತು. ಆ ಜಾಗವೂ ಕಿರಿದಾಗುತ್ತಿದೆ. ಏನು ಉಳಿದಿದೆ?” ಎಂದು ಪ್ರಶ್ನಿಸಿದ್ದಾರೆ.

‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಅನೇಕ ಜನರು ಸಿನಿಮಾ ನಿಷೇಧವನ್ನು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News