ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ ʼನಭಾ-2024ʼ
ವಿಟ್ಲ: ವಿದ್ಯಾ ಸಂಸ್ಥೆ ಕಟ್ಟುವ ನಾವು ಬಹಳಷ್ಟು ಎಚ್ಚರದಿಂದ ಇರಬೇಕಾಗುತ್ತದೆ. ಮತ ಧರ್ಮದಲ್ಲಿ ನಾವು ಸದಾ ಎಚ್ಚರ ದಿಂದ ಇರಬೇಕು. ಪ್ರತಿಯೋರ್ವರನ್ನು ಗೌರವಿಸುವುದು ಅತೀ ಅಗತ್ಯ. ನಮ್ಮ ಪೂರ್ವಜರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರು ಮುನ್ನಡೆಯೋಣ. ಪ್ರೀತಿ ಇದ್ದೆಡೆ ಧ್ವೇಷವಿಲ್ಲ. ನಮ್ಮ ಧರ್ಮ ಮತವನ್ನು ಅರಿತು ಬಾಳುವುದು ಅಗತ್ಯ. ಮಕ್ಕ ಳಿಗೆ ಸೌಂದರ್ಯ ಪ್ರಜ್ಞೆ ಅಗತ್ಯ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಹೇಳಿದರು.
ಅವರು ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ʼನಭಾ-2024ʼನ್ನು ಉದ್ಘಾಟಿಸಿ ಮಾತನಾಡಿದರು.
ಎಸ್.ಎಂ.ಆರ್ ಗ್ರೂಪ್ಸ್ ನ ಆಡಳಿತ ನಿರ್ದೇಶಕರಾದ ಎಸ್.ಎಂ. ರಶೀದ್ ಹಾಜಿರವರು ಮಾತನಾಡಿ ಬಶೀರ್ ಅವರ ಹೆಸರೇ ಬಹಳ ಜನಪ್ರೀಯವಾಗಿದೆ. ಶಾಲೆಯ ವ್ಯವಸ್ಥೆ ಬಹಳಷ್ಟು ಸುಂದರವಾಗಿದೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ. ಶಿಕ್ಷಣದಲ್ಲಿ ಕ್ವಾಲಿಟಿ ಅಗತ್ಯ. ಶಾಲೆಗಳು ಜಾತ್ಯಾತೀತವಾಗಿರಬೇಕು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಂ.ಎಸ್.ಮಹಮ್ಮದ್ ರವರು ಮಾತನಾಡಿ, ಬಹಳಷ್ಟು ಸಂಭ್ರಮದ ಕಾರ್ಯ ಕ್ರಮವಿದು. ಪೇಟೆ ಪಟ್ಟಣಗಳಲ್ಲಿ ನಡೆಯುವ ಶೈಲಿಯ ಕಾರ್ಯಕ್ರಮ ಕಂಬಳಬೆಟ್ಟುವಿನಲ್ಲಿ ನಡೆಯುತ್ತಿದೆ. ಸಾಮಾಜಿಕ ಕೆಲಸದಲ್ಲಿ ಬದ್ರಿಯ ಕುಟುಂಬದ ಸಾಧನೆ ಅಪಾರ, ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಬದ್ರಿಯಾ ಕುಟುಂಬದ ಸದಸ್ಯರು ನಡೆಯುತ್ತಿದ್ದಾರೆ. ಡಾ. ಅಬ್ದುಲ್ ಬಶೀರ್ ರವರ ಇಚ್ಚಾಶಕ್ತಿಯಿಂದ ಅವರು ಇಷ್ಟೊಂದು ಮೇಲಕ್ಕೇರಲು ಸಾಧ್ಯವಾಗಿದೆ ಎಂದರು.
ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ.ಮಾತನಾಡಿ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಕೆಲಸ ಮಾಡುತ್ತಾ ಬಂದಿದ್ದೇವೆ. ಎಲ್ಲಾ ಜಾತಿಯವರು ಸರ್ವ ಸಮಾನರು. ಸಮಾಜದ ಸರ್ವ ಜಾತಿಯವರನ್ನು ಸಮಾನವಾಗಿ ಕಾಣುವವರು ನಾವು. ವೈದ್ಯನಾಗಿ ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ನನ್ನಿಂದ ಆಗುವ ಸಹಕಾರವನ್ನು ಸಮಾಜಕ್ಕೆ ನೀಡುತ್ತಾ ಬರುತ್ತಿದ್ದೇನೆ. ದುಡ್ಡು ಮಾಡುವ ದೃಷ್ಟಿಯಿಂದ ಸಂಸ್ಥೆಯ ಹುಟ್ಟಾಗಿಲ್ಲ. ಗ್ರಾಮೀಣ ಭಾಗದ ಜನರಿಗೆ ಅತೀ ಖಡಿಮೆ ಮೊತ್ತದಲ್ಲಿ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದೇನೆ. ಈ ಭಾಗದ ಜನರು ನಮಗೆ ಆರಂಭದ ದಿನಗಳಿಂದಲೂ ಉತ್ತಮ ರೀತಿಯಲ್ಲಿ ಸಹಕಾರವನ್ನು ನೀಡುತ್ತಾ ಬಂದಿದ್ದೀರಿ. ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಮನುಷ್ಯನಲ್ಲಿರುವ ಉತ್ತಮ ಗುಣಗಳು ಆತನನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.
ಜನಪ್ರಿಯ ಶಾಲಾ ಅಧ್ಯಕ್ಷರಾದ ಫಾತಿಮ ನಸ್ರೀನ ಬಶೀರ್, ಜನಪ್ರಿಯ ಫೌಂಡೇಶನ್ ನ ನಿರ್ದೇಶಕರಾದ ಕಿರಾಶ್ ಪರ್ತಿ ಪ್ಪಾಡಿ, ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನಿರ್ದೇಶಕರಾದ ನೌಶೀನ್ ಬದ್ರಿಯಾ, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಬದ್ರಿಯಾ, ಮಂಗಳೂರು ಜನಪ್ರೀಯ ಆಸ್ಪತ್ರೆಯ ನಿರ್ದೇಶಕರಾದ ಡಾ.ಮಹಮ್ಮದ್ ನೂಮಾನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಯರಾದ ಲಿಬಿನ್ ಕ್ಸೇವಿಯರ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಶಾಲಾ ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಸ್ವಾಗತಿಸಿದರು. ಯುನೈಟೆಡ್ ನೇಷನ್ಸ್ನ ರಾಷ್ಟ್ರೀಯ ಕಾರ್ಯದರ್ಶಿ ಡಾ. ರವಿ ಕುಮಾರ್ ಎಲ್.ಪಿ. ವಂದಿಸಿದರು.