×
Ad

"ವರಾಹ ಫೌಂಡೇಶನ್" ಉದ್ಘಾಟನಾ ಸಮಾರಂಭ

Update: 2025-10-26 18:46 IST

ಕುಪ್ಪೆಪದವು:  ಯುವ ಕಾಂಗ್ರೇಸ್ ಮುಖಂಡ ಗಿರೀಶ್ ಆಳ್ವ ನೇತೃತ್ವದಲ್ಲಿ ರೂಪುಗೊಂಡ "ವರಾಹ ಫೌಂಡೇಶನ್"ನ ಉದ್ಘಾಟನಾ ಸಮಾರಂಭವು ರವಿವಾರ ಕುಪ್ಪೆಪದವು ಚರ್ಚ್‌ ವಠಾರದಲ್ಲಿ ನಡೆಯಿತು.

"ವರಾಹ ಫೌಂಡೇಶನ್" ಉದ್ಘಾಟನೆ ನಿಮಿತ್ತ ಕೆಎಂಸಿ ಆಸ್ಪತ್ರೆ, ಮಣಿಪಾಲ್ ಡೆಂಟಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್, ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ, ಪ್ರಸಾದ್ ನೇತ್ರಾಲಯ, ಸೂಪರ್ ಸ್ಲೆಷಾಲಿಟಿ ಆಸ್ಪತ್ರೆ ಮಂಗಳೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಡಾ.ಪಿ. ದಯಾನಂದ್ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್, ಕೊಳವೂರು-ಮುತ್ತೂರು-ಕಿಲೆಂಜಾರು ಗ್ರಾಮದ ಸರ್ವ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ದಾಖಲೆಗಳ ತಿದ್ದುಪಡಿ ಶಿಬಿರ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಅವರು, ಅತ್ಯಂತ ಪ್ರೀತಿ‌ನೀಡಿದ ಕುಪ್ಪೆಪದವು ನನ್ನ ತವರು ಊರು. ಎಲ್ಲಾ ಸಮಾಜವನ್ನು ಒಗ್ಗೂಡಿಕೊಂಡು ಕುಪ್ಪೆಪದವು ಮುನ್ನಡೆಯುತ್ತಿರುವುದು ಸಂತಸದ ವಿಚಾರ ಎಂದರು. ಮೈಲಿಗೆ ಇಲ್ಲದ ಮನಸುಗಳನ್ನು ಒಗ್ಗೂಡಿಸುವ ಕೆಲಸ ವರಾಹ ಫೌಂಡೇಶನ್ ನಿಂದ ಆಗಬೇಕು. ಎಲ್ಲರೂ ಸ್ವತಂತ್ರ ಭಾರತದಲ್ಲಿ ಧ್ವೇಷ ಅಸೂಯೆ ತ್ಯಜಿಸಿ ಬದುಕುವಂತಾಗಬೇಕು ಎಂದ ಅವರು, ತನ್ನ ರಾಕೀಯ ಜೀವನದಲ್ಲಿ ಕುಪ್ಪೆಪದವಿನ ಜನರ ಪ್ರೀತಿ, ವಿಶ್ವಾಸವನ್ನು ನೆನೆದು ಬಾವುಕರಾದರು.

ಸಮಾರಂಭವನ್ನು ಕುಪ್ಪೆಪದವು ಇಮ್ಯಾಕುಲೇಟ್ ಹಾರ್ಟ್ ಮೇರಿ ಚರ್ಚ್ ಪ್ರಧಾನ ಧರ್ಮಗುರು ಮಾರ್ಸಲ್ ಸಲ್ಡಾನ, ಲಿಮ್ರಾ ಎಜು ಗ್ರೂಪ್ ಕರ್ನಾಟಕದ ನಿರ್ದೇಶಕರಾದ ಶೇಖ್ ಮುಹಮ್ಮದ್ ಇರ್ಫಾನಿ ಅವರು ಉದ್ಘಾಟಿಸಿ ದರು. ಗಿರೀಶ್‌ ಆಳ್ವ ಅವರ ತಂದೆ ಕೆ. ಕೋಚಣ್ಣ ಆಳ್ವ ಕಂಗನಡಿ ಮತ್ತು ಮಾವ ಸಂಜೀವ ಶೆಟ್ಟಿ ನಡುಗುಂಡ್ಯ ಗುತ್ತು ಅವರು ವರಾಹ ಫೌಂಡೇಶನ್‌ ನ ಲೊಗೊ ಅನಾವರಣ ಗೊಳಿಸಿದರು.

ಬಳಿಕ ಮಾತನಾಡಿದ ಕೇಮಾರು ಮಠದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಅವರು, ವರಾಹ ಪೌಂಡೇಶನ್‌ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಮಾಜ ಸೇವೆ ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಶಿಕ್ಷಣಕ್ಕೆ ಒತ್ತು ನೀಡುವ ಸಂಸ್ಥೆ ತಮ್ಮ ಅತೀ ಹೆಚ್ಚಿನ ಪ್ರೋತ್ಸಾಹವನ್ನು ಕನ್ನಡೆ ಮಾಧ್ಯಮಗಳಿಗೆ ನೀಡುವಂತಾಬೇಕು ಎಂದರು. ದೇವರಿಗೆ ದುಂದುವೆಚ್ಚದ ನೈವೇದ್ಯ ಮಾಡಿ ಬಡಿಸುವುದು ದೇವರಿಗೆ ಸಲ್ಲುತ್ತದೆಯೋ ಇಲ್ಲವೋ ತಿಳಿದಿಲ್ಲ. ಆದರೆ, ಬಡವರಿಗೆ ನೀಡುವ ಅನ್ನ, ಸಹಾಯ ಸಹಕಾರ ನೇರ ದೇವತಿಗೆ ತಲುಪುತ್ತದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಅವರು, ಯುವ ಕಾಂಗ್ರೇಸ್ ಮುಖಂಡ ಗಿರೀಶ್ ಆಳ್ವ ಅವರು ನೈಜ ಸಮಾಜ ಸೇವಕ. ಅವರು ರಾಜಕೀಯವಾಗಿ ಯಾವುದೇ ಪದವಿಗಳನ್ನು ಬಯಸದೇ ಜನರ ಮಧ್ಯೆ ಇದ್ದು ಜನಸೇವೆ ಮಾಡುವವರು. ಈ ಗುಣ ಅವರ ಪೋಷಕರಿಂದ ಬಳವಳಿಯಾಗಿ ಬಂದಿರುವಂತದ್ದು. ಇಂದು ಉದ್ಘಾಟನೆ ಗೊಂಡ ವರಾಹ ಪೌಂಡೇಶನ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯಿಂದ ಆರಂಭಗೊಂಡು ರಾಷ್ಟಮಟ್ಟದಲ್ಲೂ ತಮ್ಮ ಸೇವೆ ನೀಡುವಂತಾಗಲಿ ಎಂದು ಶುಭಹಾರೈಸಿದರು.

ಇದೇ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಪೂಜಾರಿ, ಪ್ರಥ್ವಿರಾಜ್ ಆರ್.ಕೆ. ಮೊದಲಾದವರು ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು. ಇದೇ ಸಂದರ್ಭ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತ್ಯಧಿಕ ಅಂಕಗಳಿಸಿದ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಗೈದ ಸ್ಥಳೀಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು ಮತ್ತು ಉಚಿತ ವೈದ್ಯಕೀಯ ಸೇವೆ ನೀಡಿದ ವೈದ್ಯರುಗಳನ್ನು ಗೌರವಿಸಲಾಯಿತು.

ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕೆಪಿಸಿಸಿ ಸದಸ್ಯ ವಸಂತ ಬರ್ನಾಡ್, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಧ್ಯಕ್ಷ ಹರೀಶ್ ಕುಮಾರ್, ಗಿರೀಶ್‌ ಆಳ್ವ ಅವರ ತಂದೆ ಕೋಚಣ್ಣ, ಮಾವ ಚಂದ್ರಪ್ರಕಾಶ್ ಶೆಟ್ಟಿ, ಗುರುಪುರ ಬಿಎಲ್ ಪದ್ಮನಾಭ್ ಕೋಟ್ಯಾನ್, ಮನಪ ಮಾಜಿ ಸದಸ್ಯ ಅನಿಲ್ ಕುಮಾರ್, ಸಮಾಗಮ ಸಂಸ್ಥೆಯ ಪುರುಷೋತ್ತಮ, ಕುಪ್ಪೆಪದವು ಜುಮಾ ಮಸೀದಿಯ ಖತೀಬ್‌ ಅಬ್ದುಲ್ ಸಲಾಂ, ಕೃಷ್ಣ ಅಸ್ರಣ್ಣ, ಸತೀಶ್ ಪುಜಾರಿ ಬಲ್ಲಾಜೆ, ಚಂದ್ರಹಾಸ್ ಶೆಟ್ಟ್ಠಿ ಮುತ್ತುರು, ಇಬ್ರಾಹಿಂ ನವಾಝ್, ಗಜಾನನ ಜಗದೀಶ್ ಕುಲಾಲ್ ಪಕಾಜೆ, ಧಾರ್ಮಿಕ ಪರಿಷತ್‌ ಸದಸ್ಯ ಹರಿಯಪ್ಪ ಮುತ್ತೂರು, ನಾಗೇಶ್ ಮುತ್ತೂರು, ವಿಶ್ವನಾಥ್ ಪಾಕಾಜೆ, ಮುಹಮ್ಮದ್ ಶರೀಫ್ ಕಜೆ, ಸಿಪಿಐಎಂ ಮುಖಂಡ ವಸಂತ್ ಆಚಾರ್ಯ, ಗುರುಪುರ ಕಾಂಗ್ರೆಸ್‌ ವಲಯಾಧ್ಯಕ್ಷ ಅಬ್ದುಲ್ ರಝಾಕ್ ಮೊದಲಾದವರು ಉಪಸ್ಥಿತರಿದ್ದರು.

"ವರಾಹ ಫೌಂಡೇಶನ್"ನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕುಪೆಪಪದವು ಚರ್ಚ್‌ ಸಭಾಂಗಣದಲ್ಲಿ ನಡೆಸ ಲಾದ ಉಚಿತ ವೈದ್ಯಕೀಯ ಸೇವೆಗಳಲ್ಲಿ ನಾಗರೀಕರಿಗೆ ಆಧಾರ್ ಕಾರ್ಡ್ ತಿದ್ದುಪಡಿ, ದಂತ ಚಿಕಿತ್ಸೆ, ಹೃದ್ರೋಗ, ಬೆನ್ನುಮೂಳೆ, ನರರೋಗ, ಮೂಳೆ ತಜ್ಞರು, ಕಣ್ಣಿನ ತಪಾಸನೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಸೇರಿ ಹಲವು ವೈದ್ಯಕೀಯ ಸೇವೆಗಳನ್ನು ಏರ್ಪಡಿಸಲಾಗಿತ್ತು. ಈ ಪೈಕಿ ಸುಮಾರು 1350ಕ್ಕೂ ಹೆಚ್ಚಿನ ಫಲಾನುಭವಿಗಳು ಭಾಗವಹಿಸಿದ್ದರು.







 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News