ಬ್ಯಾರೀಸ್ ಫೆಸ್ಟಿವಲ್, ಪುತ್ತೂರು ಕಮ್ಯೂನಿಟಿ ಸೆಂಟರ್ ಸಹಯೋಗದಲ್ಲಿ ಪಿಯುಸಿ ಉನ್ನತ ಶ್ರೇಣಿಯಲ್ಲಿ ಪಾಸಾದ 518 ವಿದ್ಯಾರ್ಥಿಗಳಿಗೆ ಸನ್ಮಾನ
ಮಂಗಳೂರು: ಕರ್ನಾಟಕ ಬ್ಯಾರೀಸ್ ಸೋಷಿಯಲ್ ಮತ್ತು ಕಲ್ಚರಲ್ ಫೋರಂ ಇದರ ವತಿಯಿಂದ ನಿವೃತ್ತ ಡಿಸಿಪಿ ಜಿ.ಎ. ಬಾವ ಅವರ ನೇತೃತ್ವದಲ್ಲಿ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಬ್ಯಾರೀಸ್ ಉತ್ಸವದಲ್ಲಿ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ 518 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಬ್ಯಾರೀಸ್ ಉತ್ಸವದ ಎರಡನೇ ದಿನ ನಡೆದ ಶೈಕ್ಷಣಿಕ ಮೇಳದಲ್ಲಿ ಕೆಬಿಎಸ್ ಸಿ ಫೋರಂ ಮತ್ತು ಪುತ್ತೂರು ಕಮ್ಯೂನಿಟಿ ಸೆಂಟರ್ ಸಹಯೋಗದಲ್ಲಿ 518 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಮ್ಯೂನಿಟಿ ಸೆಂಟರ್ನ ಪ್ರಯೋಜನ ಪಡೆದು ವಿವಿಧ ವೃತ್ತಿಪರ ಕೋರ್ಸ್ ಗಳಾದ MBBS, Law, CA, Professorship, engineering ಹಾಗೂ ಇನ್ನಿತರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿ ಕೌನ್ಸಿಲ್ ಸದಸ್ಯರು ಪಿಯುಸಿಯ 800ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಒನ್ ಟೂ ಒನ್ ಕೌನ್ಸಿಲ್ ಮಾಡಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಸಾಧಕ ವಿದ್ಯಾರ್ಥಿಗಳು ಇಲ್ಲಿ ತಮ್ಮ ಶೈಕ್ಷಣಿಕ ದಾರಿಯಲ್ಲಿ ಸರಿಯಾದ ಮಾರ್ಗದರ್ಶನ ಪಡೆದರು. ನೀಟ್ ನಲ್ಲಿ ಸಾದನೆ ಮಾಡಿ MBBS ಸರಕಾರಿ ಸೀಟು ಪಡೆದ 10 ವೈದ್ಯಕೀಯ ವಿದ್ಯಾರ್ಥಿಗಳು ನೀಟ್ ಮತ್ತು ಮೆಡಿಕಲ್ ವಿಭಾಗದ ಕುರಿತಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು ಮತ್ತು ತಾವು ಸಾಗಿ ಬಂದ ದಾರಿಯನ್ನು ಪರಿಚಯಿಸಿದರು.
JEE ಪರೀಕ್ಷೆ ಬರೆದು ಉನ್ನತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಬಗ್ಗೆ, ಕಾನೂನು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಕಾನೂನು ಪದವಿಯ ಬಗ್ಗೆ ಅನುಭವದ ಮಾರ್ಗದರ್ಶನ ನೀಡಿದರು. ಹೀಗೆ ಪ್ರತೀ ವೃತ್ತಿಪರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಮತ್ತು ವಿದ್ಯಾರ್ಥಿಗಳ ನಡುವಿನ ಈ ಸಂವಹನ ಪ್ರೇರಣಾತ್ಮಕ ಹಾಗೂ ಪರಿಣಾಮಕಾರಿಯಾಗಿತ್ತು.
ಭಾರತ್ ಇನ್ಫ್ರಾಟೆಕ್ ನ ಮಾಲಕರಾದ ಎಸ್.ಎಂ. ಮುಸ್ತಫಾ ಅವರು ವಿದ್ಯಾರ್ಥಿಗಳಿಗೆ ಅಭಿನಂದಿಸುತ್ತಾ, ಅವರಲ್ಲಿ ಧನಾತ್ಮಕ ಆಲೋಚನೆಗಳನ್ನು ಬೆಳೆಸುವ ಮೋಟಿವೇಶನ್ ಸ್ಪೀಚ್ ನೀಡಿದರು. ಸೌದಿ ಅರೇಬಿಯಾದ ಅಲ್ ಮುಝೈನ್ ನ ಮಾಲಕರಾದ ಝಕರಿಯಾ ಹಾಜಿ ಜೋಕಟ್ಟೆ ಅವರು ಕೌನ್ಸಿಲಿಂಗ್ ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ದೈರ್ಯ ತುಂಬಿ ಅವರ ಮುಂದಿನ ಶಿಕ್ಷಣಕ್ಕೆ ಬೇಕಾದ ನೆರವು ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮೈನಾರಿಟಿ ಕಮಿಷನರ್ ನಿಸಾರ್ ಅಹ್ಮದ್, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಪ್ರಧಾನ ನಿರ್ದೇಶಕರಾದ ಮಹಮ್ಮದ್ ನಝೀರ್, ನಿವೃತ್ತ ಡಿಸಿಪಿ ಜಿ.ಎ ಬಾವ, ಸರ್ಕಲ್ ಇನ್ಸ್ಪೆಕ್ಟರ್ ಸಲೀಂ, ರಝಾಕ್ ಕಾಪು, ಹನೀಫ್ ಹಾಜಿ ಗೋಳ್ತಮಜಲು, ಅಡ್ವಕೆಟ್ ಮನ್ನಾನ್ ಮೈಸೂರು, ಉಮ್ಮರ್ ಹಾಜಿ ಬೆಂಗಳೂರು, ಥೀಂ ಇನ್ಟೀರಿಯರ್ ನ ಮಾಲಕರಾದ ವಹೀದ್ ಖೈರ್ ಖಾನ್, ನಮ್ಮ ನಾಡ ಒಕ್ಕೂಟದ ಸ್ಥಾಪಕರಾದ ಮಹಮ್ಮದ್ ಸಲೀಂ, ಯುಪಿಎಸ್ಸಿ ಟ್ರೈನರ್ ಯು.ಟಿ. ಫರ್ಝಾನ, ಮಾಜಿ ಉಪ ಮೇಯರ್ ಬಶೀರ್ ಬೈಕಂಪಾಡಿ, ಬ್ಯಾರೀಸ್ ಇನ್ಫೋ ನ ಮಹಮ್ಮದ್ ಅಲಿ ಕಮ್ಮರಡಿ, ಕರ್ನಾಟಕ ಬ್ಯಾರೀಸ್ ಸೋಶಿಯಲ್ ಕಲ್ಚರಲ್ ಫೋರಂನ ಇಕ್ಬಾಲ್ ಪರ್ಲಿಯಾ, ಕಮ್ಯೂನಿಟಿ ಸೆಂಟರ್ ನ ಇಮ್ತಿಯಾಝ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮೋಟಿವೇಶನಲ್ ಸ್ಪೀಕರ್ ರಫೀಕ್ ಮಾಸ್ಟರ್, ಸೆಂಟರ್ ಕೌನ್ಸಿಲ್ ಸದಸ್ಯೆ ವೈದ್ಯಕೀಯ ವಿದ್ಯಾರ್ಥಿನಿ ಅಮ್ನಾಝ್ ನಿರ್ವಹಿಸಿದರು.