×
Ad

ಕಾಂಗ್ರೆಸ್‌ನ ರಾಜಕೀಯ ಸೇಡಿನಿಂದ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನೆನೆಗುದಿಗೆ : ಬಿಜೆಪಿ ಆರೋಪ

Update: 2026-01-12 15:22 IST

ಕಾರ್ಕಳ: ಕಾಂಗ್ರೆಸ್‌ನ ರಾಜಕೀಯ ಸೇಡಿನ ಪರಿಣಾಮವಾಗಿ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಕಾರ್ಕಳದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ಉದಯ ಕುಮಾರ್ ಶೆಟ್ಟಿ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಹತಾಶೆ ಸ್ಥಿತಿಗೆ ತಲುಪಿದ್ದು, ತನಿಖೆಯ ನೆಪದಲ್ಲಿ ಹಾಗೂ ಮುಂದಿನ ಚುನಾವಣೆಯವರೆಗೆ ಈ ವಿಷಯವನ್ನು ಜೀವಂತವಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಪರಶುರಾಮ ಥೀಂ ಪಾರ್ಕ್ ಕಾಮಗಾರಿಗೆ ಬಿಡುಗಡೆಯಾಗಬೇಕಿದ್ದ ಅನುದಾನವನ್ನು ತಡೆಹಿಡಿಯಲಾಗಿದೆ. ಇದರಿಂದ ಯಾವುದೇ ಕಾಮಗಾರಿಗಳು ಮುಂದುವರಿಯದೆ ಸ್ಥಗಿತಗೊಂಡಿವೆ ಎಂದು ಬಿಜೆಪಿ ತಿಳಿಸಿದೆ.

ಭಾರತೀಯ ಜನತಾ ಪಾರ್ಟಿ ಆರಂಭದಿಂದಲೂ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳುತ್ತಲೇ ಬಂದಿದೆ. ತನಿಖೆಯ ನೆಪದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಬಾರದೆಂದು ಮನವಿ ಮಾಡಿದ್ದರೂ, ಕಾಂಗ್ರೆಸ್ ನಾಯಕರು ಮೊದಲು ಮೂರ್ತಿ ಫೈಬರ್‌ನದ್ದು ಎಂದು ಹುಯಿಲೆಬ್ಬಿಸಿ, ಬಳಿಕ ಅದು ಫೈಬರಿದ್ದು ಅಲ್ಲ ಎಂದು ಗೊತ್ತಾದ ನಂತರ ಬೇರೆ ಬೇರೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಕಳ್ಳತನ ಪ್ರಕರಣ ಪೊಲೀಸ್ ಇಲಾಖೆಗೆ ತಿಳಿಯುವ ಮೊದಲೇ ಶಾಸಕರಿಗೆ ಮಾಹಿತಿ ಹೇಗೆ ಲಭ್ಯವಾಯಿತು ಎಂಬ ಪ್ರಶ್ನೆ ಎತ್ತಿದ ಕಾಂಗ್ರೆಸ್ ನಾಯಕರು, ಶಾಸಕರ ಸಹಚರರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಮಾಡಿದ್ದರು. ಪರಶುರಾಮ ಥೀಂ ಪಾರ್ಕ್‌ನಲ್ಲಿ ಅನೇಕ ಬೆಲೆಬಾಳುವ ವಸ್ತುಗಳಿರುವಾಗ ಕಳ್ಳರು ಕೇವಲ ಮಲಾವಣೆಯನ್ನೇ ಯಾಕೆ ಕದ್ದಿದ್ದಾರೆ ಎಂಬ ಅನುಮಾನಾಸ್ಪದ ಹೇಳಿಕೆಗಳನ್ನು ಕೂಡ ಕಾಂಗ್ರೆಸ್ ನೀಡಿತ್ತು.

ಆದರೆ ಪೊಲೀಸ್ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆಯಿಂದ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಕಳ್ಳತನ ಪ್ರಕರಣದಲ್ಲಿ ಕಳವಾರು ಚರ್ಚ್ ಗುಡ್ಡೆಯ ಆರೀಪ್ ಅಲಿಯಾಸ್ ಮುನ್ನಾ ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ ಎಂಬವರನ್ನು ದಸ್ತಗಿರಿ ಮಾಡಲಾಗಿದ್ದು, ಕಳವುಗೈದ ವಸ್ತುಗಳ ಜಪ್ತಿಯೂ ನಡೆದಿದೆ. ನೈಜ ಆರೋಪಿಗಳು ಬಂಧನವಾದ ಬಳಿಕ ಕಾಂಗ್ರೆಸ್ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಕಾಣುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ರಾಜಕೀಯ ಕಾರಣದಿಂದ ನಡೆದ ವ್ಯವಸ್ಥಿತ ಅಪಪ್ರಚಾರ ಹಾಗೂ ಷಡ್ಯಂತ್ರಗಳಿಂದಾಗಿ ಒಂದು ಉತ್ತಮ ಪ್ರವಾಸಿ ತಾಣವಾಗಿ ಬೆಳೆಯುತ್ತಿದ್ದ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಬ್ಧಗೊಂಡಿವೆ. ಸೂಕ್ತ ನಿರ್ವಹಣೆ ಇಲ್ಲದೆ ಅಲ್ಲಿನ ಕಟ್ಟಡಗಳು ಹಾಗೂ ವಸ್ತುಗಳು ಹಾಳಾಗುತ್ತಿವೆ. ಕಾಮಗಾರಿಗೆ ಬಿಡುಗಡೆಯಾಗಬೇಕಿದ್ದ 4.33 ಕೋಟಿ ರೂ. ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ವಿನಾಕಾರಣ ಶಾಸಕ ವಿ. ಸುನಿಲ್ ಕುಮಾರ್ ಅವರ ಹೆಸರನ್ನು ಎಳೆದು ತರುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ. ಸರಕಾರದ ಹಣವನ್ನು ಸಂಬಂಧಪಟ್ಟ ಇಲಾಖೆಗಳು ಬಿಡುಗಡೆ ಮಾಡಬೇಕು, ಶಾಸಕರ ಮೇಲೆ ಅಸಂಬದ್ಧ ಆರೋಪ ಮಾಡುವುದು ಸಭ್ಯತೆಯನ್ನು ಮೀರುತ್ತದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಮುಖಂಡ ಸುಮಿತ್ ಶೆಟ್ಟಿ, ಮಾತನಾಡಿ, ‘ಫೈಬರ್ ಗ್ಯಾಂಗ್’ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಬಂಧನವಾದ ಕಳ್ಳರು ಕಾಂಗ್ರೆಸ್‌ನ ಬ್ರದರ್ಸ್ ಎಂದು ಆರೋಪಿಸಿ, ಫೈಬರ್ ಗ್ಯಾಂಗ್ ವಿರುದ್ಧ (ಸುಮೊಟೋ) ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಚುನಾವಣೆಗೆ ನಿಲ್ಲುತ್ತಿರುವುದೇ ಒಂದು ದುರಂತ ಕಥೆ ಎಂದು ವ್ಯಂಗ್ಯವಾಡಿದರು. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಕಳದ ಅಭಿವೃದ್ಧಿಯನ್ನು ಸಹಿಸದೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಉದಯಕುಮಾರ್ ಶೆಟ್ಟಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ನಿರಂಜನ್ ಜೈನ್, ಸುರೇಶ್ ಸಾಯಿರಾಂ ಬೈಲೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News