ದ.ಕ.: ಧ್ಯಾನ, ಪ್ರಾರ್ಥನೆಯೊಂದಿಗೆ 'ಶುಭ ಶುಕ್ರವಾರ' ಆಚರಣೆ
ಮಂಗಳೂರು, ಮಾ.29: ಪವಿತ್ರ ದಿನವಾದ ಶುಭ ಶುಕ್ರವಾರ(ಗುಡ್ ಫ್ರೈಡೇ)ದಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೈಸ್ತರು ಧ್ಯಾನ ಹಾಗೂ ಪ್ರಾರ್ಥನೆಯ ಮೂಲಕ ಆಚರಿಸುತ್ತಿದ್ದಾರೆ.
ಚರ್ಚ್ ಗಳಲ್ಲಿ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಸಲಾಗುತ್ತಿದೆ. ಮಂಗಳೂರು ಬಿಷಪ್ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ನಗರದ ಕೊಡಿಯಾಲ್ ಬೈಲ್ ನ ಚಾಪೆಲ್ ನಲ್ಲಿ ಜರುಗಿದ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಶಿಲುಬೆಯ ಹಾದಿ: ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಸೇರಿದಂತೆ ಜಿಲ್ಲೆಯ ಬಹುತೇಕ ಚರ್ಚ್ ಗಳಲ್ಲಿ ಏಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನೆಗಳನ್ನು ಪ್ರಸ್ತುತ ಪಡಿಸಲಾಯಿತು. ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ನೆನಪಿಸಿ ಧ್ಯಾನಿಸಿ ಪ್ರಾರ್ಥನೆ ನಡೆಯಿತು.
ಕೆಥೊಲಿಕ್ ಚರ್ಚ್ ಗಳಲ್ಲಿ ಶುಭ ಶುಕ್ರವಾರದಂದು ಯಾವುದೇ ಬಲಿಪೂಜೆಗಳು ನಡೆಯುವುದಿಲ್ಲ. ಇದರ ಬದಲು ಶುಭ ಶುಕ್ರವಾರದಂದು ಬೆಳಗ್ಗೆಯಿಂದ ಮಧ್ಯಾಹ್ನ 12ರ ತನಕ ಶಿಲುಬೆಯ ಹಾದಿಯ ಭಕ್ತಿಯ ಕಾರ್ಯಕ್ರಮಗಳು ಸಾಗುತ್ತದೆ. ಕೆಲ ಚರ್ಚ್ಗಳಲ್ಲಿ ಶಿಲುಬೆಯ ಹಾದಿಯ ಬಳಿಕ ಶಿಲುಬೆಗೆ ಏರಿದ ಏಸುವಿನ ಪ್ರತಿಮೆಯನ್ನು ಮೆರವಣಿಗೆಯೂ ಚಾಲ್ತಿಯಲ್ಲಿದೆ. ಕೆಲ ಚರ್ಚ್ ಗಳಲ್ಲಿ ಶಿಲುಬೆಯ ಹಾದಿ ಕಾರ್ಯಕ್ರಮ ಮಾತ್ರ ನಡೆಸಲಾಗುತ್ತದೆ.