×
Ad

ನನ್ನನ್ನು ಮನೆ ಮಗನಾಗಿ 'ಕುಡ್ಲ' ಸ್ವೀಕರಿಸಿದೆ: ಬೀಳ್ಕೊಡುಗೆ ಸಮಾರಂಭದಲ್ಲಿ ಮುಲ್ಲೈ ಮುಗಿಲನ್

Update: 2025-06-19 15:54 IST

ಮಂಗಳೂರು, ಜೂ.18: ‘ಸಾಂಸ್ಕೃತಿಕ, ಶೈಕ್ಷಣಿಕವಾಗಿ ಹಲವು ಸಾಧ್ಯತೆಗಳಿಗೆ ಸಾಮರ್ಥ್ಯ ಹೊಂದಿರುವ ದ.ಕ. ಜಿಲ್ಲೆಯ ಗರಿಮೆಯನ್ನು ಮೇಲೆತ್ತುವ ಕೆಲಸ ಜಿಲ್ಲೆಯ ಜನರಿಂದ ಆಗಬೇಕು. ನನ್ನನ್ನು 'ಕುಡ್ಲ' ಮನೆ ಮಗನಾಗಿ ಸ್ವೀಕರಿಸಿದೆ ಎಂದು ಹಕ್ಕಿನಿಂದ ಹೇಳಬಲ್ಲೆ. ಹಾಗಾಗಿ ಕುಡ್ಲವನ್ನು ನನ್ನಿಂದ ಬಿಟ್ಟುಕೊಡಲಾಗದು’ ಎಂದು ದ.ಕ. ಜಿಲ್ಲೆಯ ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಡೀಲ್ ನ ‘ಪ್ರಜಾಸೌಧ’ದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ರೀತಿಯಲ್ಲೂ ನನಗೆ ವಿಶೇಷವಾಗಿ ಕಂಡಿದೆ. ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ಸಂದರ್ಭದಲ್ಲೂ ಲಿಫ್ಟ್ ನಲ್ಲಿ ಒಬ್ಬರು ತುಳು ಮಾತನಾಡುವುದನ್ನು ಕಂಡಾಗ ನಾನು ಕೂಡಾ ಹೆಮ್ಮೆಯಿಂದ ಅವರಲ್ಲಿ ನಾನು 'ಕುಡ್ಲದ ಡಿಸಿ' ಎಂದು ಪರಿಚಯಿಸಿಕೊಂಡೆ. ಅಷ್ಟೊಂದು ಇಲ್ಲಿನ ವಾತಾವರಣ ನನ್ನ ಮೇಲೆ ಪರಿಣಾಮ ಬೀರಿದೆ ಎಂದವರು ಹೇಳಿದರು.

ಇಲ್ಲಿನ ಜನರ ಕಾನೂನಿನ ಜ್ಞಾನ, ಇಲ್ಲಿನ ಜನರ ಕೆಲಸದ ಸಂಸ್ಕೃತಿ ಎಲ್ಲವೂ ಉತ್ತಮ ಎಂದು ಹೇಳಿದ ಅವರು, ಕಚೇರಿಯ ಆಪ್ತ ವಲಯ, ಹಿರಿಯ ಕಿರಿಯ ಅಧಿಕಾರಿಗಳು ಹಾಗೂ ಸರಕಾರೇತರ ಸಂಸ್ಥೆಗಳ ಸಹಕಾರ ಹಾಗೂ ಒಡನಾಟವನ್ನು ಅವರು ಈ ಸಂದರ್ಭ ಸ್ಮರಿಸಿಕೊಂಡರು.

ತಮ್ಮ ಎರಡು ವರ್ಷಗಳ ಸೇವಾವಧಿಯಲ್ಲಿ ಏಳು ವರ್ಷಗಳಿಂದ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಬಾಕಿ ಇದ್ದ 650 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಪ್ರಾಕೃತಿಕ ವಿಕೋಪ ನಿರ್ವಹಣೆಯ ಅಧಿಕಾರವನ್ನು ಗ್ರಾಮ ಪಂಚಾಯತ್ ಹಾಗೂ ವಾರ್ಡ್ ಮಟ್ಟದ ಅಧಿಕಾರಿಗಳ ಮೂಲಕ ನಿರ್ವಹಿಸುವ ಕಾರ್ಯವೈಖರಿಯನ್ನು ರೂಪಿಸಲಾಗಿದೆ. ಅರಣ್ಯ ಅಧಿಕಾರಿ, ಜಿಪಂ ಸಿಇಒ ಹಾಗೂ ಪೊಲೀಸ್ ಅಧಿಕಾರಿಗಳ ಜತೆಗೆ ಸಮನ್ವಯತೆಯಿಂದ ಕೆಲಸ ಮಾಡಲು ಸಾಧ್ಯವಾದಂತಹ ವಾತಾವರಣ ಮಂಗಳೂರಿನಲ್ಲಿದ್ದ ಕಾರಣ ಎರಡು ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿಕೊಂಡು, ಹಲವು ವರ್ಷಗಳ ಕಂದಾಯ ಇಲಾಖೆಯ ಸಮಸ್ಯೆಯನ್ನು ಬಗೆಹರಿಸಿ 10,000 ರೈತರಿಗೆ ಹಕ್ಕುಪತ್ರ ವಿತರಿಸಲು ಸಾಧ್ಯವಾಗಿದೆ ಎಂದು ಅವರು ಹೇಳುತ್ತಾ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸರಕಾರಿ ಅಧಿಕಾರಿಗಳಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಪೋಷಕರ ಹಾದಿಯಲ್ಲಿಯೇ ತಾನು ಕೂಡಾ ಆ ಮೌಲ್ಯಗಳನ್ನು ಉಳಿಸಿಕೊಂಡು ಕಾರ್ಯ ನಿರ್ವಹಿಸಿದ ಹೆಮ್ಮೆಯೂ ತನಗಿದೆ ಎಂದು ಮುಲ್ಲೈ ಮುಗಿಲನ್ ಸಭೆಯಲ್ಲಿ ಉಪಸ್ಥಿತರಿದ್ದ ತನ್ನ ತಂದೆ, ತಾಯಿ ಹಾಗೂ ಪತ್ನಿಯ ಸಹಕಾರವನ್ನು ಸಭೆಗೆ ಪರಿಚಯಿಸಿದರು.

ಅಭಿನಂದನೆ ಸ್ವೀಕರಿಸುವ ಸಂದರ್ಭ, ವೃತ್ತಿಯಲ್ಲಿ ವಾಸ್ತುಶಿಲ್ಪಿಯಾಗಿರುವ ತಮ್ಮ ಪತ್ನಿಯನ್ನು ಬಲಬದಿಯಲ್ಲಿ ಕೂರಿಸಿಕೊಂಡು ‘ಇದು ತುಳುನಾಡ ಪದ್ಧತಿ’ ಎಂದು ಹೇಳುತ್ತಾ ತುಳುವಿನ ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್, ಮಾಜಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ದನ್, ಸ್ಮಾರ್ಟ್ ಸಿಟಿ ಆಡಳಿತ ನಿರ್ದೇಶಕ ರಾಜು, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಮೂಡುಬಿದಿರೆ ತಹಶೀಲ್ದಾರ್ ಶ್ರೀಧರ್, ಯತೀಶ್ ಬೈಕಂಪಾಡಿ ಮೊದಲಾದವರು ನಿರ್ಗಮನ ಜಿಲ್ಲಾಧಿಕಾರಿ ಜತೆಗಿನ ಒಡನಾಟವನ್ನು ಹಂಚಿಕೊಂಡರು.

ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಬುಧವಾರ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಜಿಲ್ಲಾಧಿಕಾರಿಯ ಅಧಿಕೃತ ಮೊಬೈಲ್ ನಂಬರ್ ಗೆ 15 ನಿಮಿಷಗಳಲ್ಲಿ ಬಂದ 25ಕ್ಕೂ ಅಧಿಕ ಕರೆ, ಸಂದೇಶಗಳಲ್ಲಿ ವ್ಯಕ್ತವಾದ ಮಾತುಗಳು, ಅಭಿಮಾನದ ನುಡಿಗಳು ಮುಲ್ಲೈ ಮುಗಿಲನ್ ರವರ ಜನಸ್ನೇಹಿ ನಡೆಯನ್ನು ಪರಿಚಯಿಸಿದೆ. ಇದು ನನಗೆ ದೊರಕಿದ ಮೊದಲ ಪಾಠವಾಗಿದ್ದು, ಅವರ ಹೆಜ್ಜೆ ಗುರುತುಗಳನ್ನು ಪಾಲಿಸುವ ಪ್ರಯತ್ನದ ಜೊತೆಗೆ ಅವರ ತಾಳ್ಮೆ, ಸೂಕ್ಷ್ಮತೆಯನ್ನು ಮೈಗೂಡಿಸಿಕೊಂಡು ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News