ಇಸ್ಲಾಮ್ಗೆ ಕಾಸ್ಮೊಪೊಲಿಸ್ ಪಟ್ಟದಿಂದ ಅಪಾಯ: ಪುರುಪೋತ್ತಮ ಬಿಳಿಮಲೆ
ಮಂಗಳೂರು: ಹಲವಾರು ಕಾರಣಗಳಿಂದ ಪೂರ್ವದ ಕಡೆಗೆ ಸಾಗಿದ ಇಸ್ಲಾಮ್ ಮತ್ತು ಅರೆಬಿಕ್ ಸಂಸ್ಕೃತಿಯು ಸೌಹಾರ್ದದಿಂದ ಬೆರೆತು ಸ್ಥಳೀಯ ಸಂಸ್ಕೃತಿಯಾಗಿದೆ. ಅಂತಹ ಇಸ್ಲಾಮನ್ನು ಬಲಪಂಥೀಯರು ಮತ್ತು ಮತೀಯವಾದಿಗಳು ಈಗಲೂ ಕಾಸ್ಮೊಪೊಲಿಸ್ ಸಂಸ್ಕೃತಿಗೆ ಸೀಮಿತ ಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದ ಬಲ್ಮಠ ಸಹೋದಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಪ್ರಕಟಿಸಿದ ಪತ್ರಕರ್ತ ಹಂಝ ಮಲಾರ್ ಸಂಪಾದಿಸಿದ ʼಮರೆಯಲಾಗದ ಬ್ಯಾರಿ ಮಹನೀಯರುʼ ಕೃತಿಯ ಮೊದಲ ಮತ್ತು ದ್ವಿತೀಯ ಭಾಗದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಆಶಯ ಭಾಷಣ ಮಾಡಿದರು.
ಭಾರತದಲ್ಲಿ ಹಿಂದುತ್ವ, ಜಾಗತೀಕರಣ ಇತ್ಯಾದಿ ಪ್ರಭಾವದಿಂದ ಇತಿಹಾಸವನ್ನು ತಿರುಚುವ ಕಾರ್ಯ ನಡೆದಿದೆ. ಇತಿಹಾಸಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ವರ್ತಮಾನದಲ್ಲಿ ನಾವು ಆದರ್ಶಪ್ರಾಯವಾಗಿಸಿ ಕೊಳ್ಳಬೇಕು. ಅದು ಬಿಟ್ಟು ಇತಿಹಾಸ ಭಾರ ಆಗುವಂತೆ ಎಂದೂ ನೋಡಿಕೊಳ್ಳಬಾರದು. ಇತಿಹಾಸ ಭಾರವಾದರೆ ವರ್ತಮಾನವು ಕಣ್ಣುಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ರಾಮಾಯಣವನ್ನು ಅಕ್ಬರನ ತಾಯಿಯು ಪರ್ಷಿಯನ್ ಭಾಷೆಗೆ ಅನುವಾದ ಮಾಡಿದ್ದಾರೆ. ಈಗ ಅಕ್ಬರ್ ಮತ್ತಾತನ ತಾಯಿಯನ್ನೇ ಕಡೆಗಣಿಸಿದರೆ ಅಂತಹವರಿಗೆ ಇತಿಹಾಸ ಭಾರವಾಗಿದೆ ಎಂದು ಭಾವಿಸಬೇಕಿದೆ. ಕರ್ನಾಟಕದ ಏಕೀಕರಣ ಅಗತ್ಯವಿದ್ದ ಸಂದರ್ಭ ಗಡಿರೇಖೆಗಳನ್ನು ವಿಸ್ತರಿಸಿದ ವ್ಯಕ್ತಿ ಟಿಪ್ಪುಸುಲ್ತಾನ್. ಈಗ ಅಂತಹ ಟಿಪ್ಪುನಮಗೆ ಬೇಡ ಎಂಬಂತಾಗಿದೆ. ಇಂತಹ ತಿರುಚುವ ಕೆಲಸದಿಂದಾಗಿ ಇತಿಹಾಸಕ್ಕೆ ಅಪಾಯವಿದೆ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.
ಸಮುದ್ರದಲ್ಲಿ ತೇಲುತ್ತ ಬಂದ ತೆಂಗಿನಕಾಯಿ ಕರಾವಳಿ ತೀರದ ಫಲವತ್ತಾದ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯಿತು. ದೊಡ್ಡ ಗಾತ್ರದಿಂದಾಗಿ ಹಗ್ಗ ಮಾಡಲು ಅನುಕೂಲವಾಯಿತು. ಕೆಲವು ಪ್ರದೇಶದ ಕೆಂಪು ಜೇಡಿಮಣ್ಣು ಕೂಡ ಅರಬರಲ್ಲಿ ಆಸಕ್ತಿ ಹುಟ್ಟಿಸಿತು. ಅದು ಕರಾವಳಿಯಲ್ಲಿ ಅರಬಿಕ್ ಸಂಸ್ಕೃತಿ ನೆಲೆಯೂರಲು ಹೇತುವಾಯಿತು. ಇಂತಹ ವಾಸ್ತವ ವಿಚಾರ ತಿಳಿಯದ ಮತೀಯವಾದಿಗಳು ಗುಲ್ಲೆಬ್ಬಿಸು ತ್ತಿದ್ದಾರೆ. ದೇಶಕ್ಕೆ ಮುಸ್ಲಿಮರು ನೀಡಿದ ಕೊಡುಗೆಯನ್ನು ಕೂಡ ಇವರು ಅರ್ಥ ಮಾಡಿಕೊಂಡಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.
ಬ್ಯಾರಿ ಭವನಕ್ಕೆ ಶೀಘ್ರ ಶಂಕುಸ್ಥಾಪನೆ: ಸ್ಪೀಕರ್ ಖಾದರ್
ಕೃತಿಗಳನ್ನು ಬಿಡುಗಡೆಗೊಳಿಸಿದ ಸ್ಪೀಕರ್ ಯು.ಟಿ.ಖಾದರ್ ಬ್ಯಾರಿ ಭವನ ಮತ್ತು ಅಬ್ಬಕ್ಕ ಭವನದ ಯೋಜನೆ ಸಿದ್ಧವಾಗಿದ್ದು ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಮುಂದಿನ ತಿಂಗಳು ಶಂಕುಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಬ್ಯಾರಿ ಭವನದ ಅಂದಾಜು ಯೋಜನಾ ವೆಚ್ಚ 3 ಕೋ.ರೂ.ನಿಂದ 9 ಕೋ.ರೂ.ಗೆ ಹೆಚ್ಚಿದೆ. ಅಬ್ಬಕ್ಕ ಭವನದ ಅಂದಾಜು ವೆಚ್ಚ 8 ಕೋ.ರೂ. ಆಗಲಿದೆ. ಅನುದಾನದ ಬಗ್ಗೆ ಲೆಕ್ಕಿಸದೆ ಸಮುದಾಯಕ್ಕೆ, ಸಮಜಕ್ಕೆ ಮಾದರಿ ಭವನ ನಿರ್ಮಿಸಲು ಪ್ರಯತ್ನಿಸಲಾಗುವುದು ಯು.ಟಿ.ಖಾದರ್ ಎಂದರು.
ಮುಂದಿನ ಪೀಳಿಗೆಗೆ ಬ್ಯಾರಿ ಸಮುದಾಯವನ್ನು ಪರಿಚಯಿಸುವ ಕಾರ್ಯ ಮತ್ತಷ್ಟು ಆಗಬೇಕಾಗಿದೆ. ಹಾಗಾಗಿ ಗತಿಸಿದವರ ಬಗ್ಗೆ ಮಾತ್ರವಲ್ಲ ಈಗ ಜೀವಂತ ಇರುವ ಸಾಧಕರ ಕುರಿತ ಪುಸ್ತಕವೂ ಪ್ರಕಟ ಗೊಳ್ಳಬೇಕು. ಶಾಸಕರ ನಿಧಿಯಲ್ಲಿ 2 ಲಕ್ಷ ರೂ.ಮೊತ್ತದ ಪುಸ್ತಕಗಳನ್ನು ಖರೀದಿಸಲು ಅವಕಾಶವಿದೆ. ನನ್ನ ನಿಧಿಯಿಂದ 1 ಲಕ್ಷ ರೂ.ಮೊತ್ತದಲ್ಲಿ ಮರೆಯಲಾಗದ ಬ್ಯಾರಿ ಮಹನೀಯರು ಕೃತಿಯ ಪ್ರತಿಗಳನ್ನು ಖರೀದಿಸಿ ವಿತರಿಸಲಾಗುವುದು ಎಂದು ಯು.ಟಿ.ಖಾದರ್ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಅತಿಥಿಯಾಗಿ ಭಾಗವಹಿಸಿದ ಬ್ಯಾರಿ ಇನ್ಫೊ ಡಾಟ್ ಕಾಂ ಮುಖ್ಯಸ್ಥ ಬಿ.ಎ. ಮುಹಮ್ಮದಲಿ ಕಮ್ಮರಡಿ ಮಾತನಾಡಿದರು. ಕೃತಿಗಳ ಸಂಪಾದಕ ಹಂಝ ಮಲಾರ್ ಕೃತಿ ಪರಿಚಯ ಮಾಡಿದರು. ವೇದಿಕೆಯಲ್ಲಿ ರಿಜಿಸ್ಟ್ರಾರ್ ರಾಜೇಶ್ ಜಿ., ತುಳು ಅಕಾಡಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಉಪಸ್ಥಿತರಿದ್ದರು.
ಅಕಾಡಮಿಯ ಸದಸ್ಯರಾದ ಬಿ.ಎಸ್.ಮುಹಮ್ಮದ್ ಚಿಕ್ಕಮಗಳೂರು, ಸಾರಾ ಅಲಿ ಪರ್ಲಡ್ಕ, ಹಮೀದ್ ಹಸನ್ ಮಾಡೂರು, ಅಬೂಬಕರ್ ಅನಿಲಕಟ್ಟೆ ಮತ್ತಿತರರು ಪಾಲ್ಗೊಂಡಿದ್ದರು. ಅಕಾಡಮಿಯ ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ ಧ್ಯೇಯಗೀತೆ ಹಾಡಿದರು. ಅಕಾಡಮಿಯ ಸದಸ್ಯರಾದ ಶಮೀರಾ ಜಹಾನ್ ಸ್ವಾಗತಿಸಿದರು. ಶರೀಫ್ ಭಾರತ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು. ತಾಜುದ್ದೀನ್ ಅಮ್ಮುಂಜೆ ವಂದಿಸಿದರು.