×
Ad

ಅಬ್ದುಲ್ ರಹ್ಮಾನ್, ಅಶ್ರಫ್ ಕೊಲೆ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ನೀಡಲು ಎಸ್‌ಡಿಪಿಐ ಆಗ್ರಹ

Update: 2025-07-03 21:29 IST

ಮಂಗಳೂರು: ಕೊಳತ್ತಮಜಲು ಅಬ್ದುಲ್ ರಹ್ಮಾನ್ ಮತ್ತು ವಯನಾಡುವಿನ ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ)ಗೆ ಒಪ್ಪಿಸುವಂತೆ ಎಸ್‌ಡಿಪಿಐ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಎಸ್‌ಡಿಪಿಐ ದ.ಕ.ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಎಸ್ ಅವರು ಕೊಲೆಯಾದ ಇಬ್ಬರ ಕುಟುಂಬಕ್ಕೂ ತಲಾ 50 ಲಕ್ಷ ರೂಗಳ ಪರಿಹಾರ ನೀಡುವಂತೆ ಸರಕಾರಕ್ಕೆ ಮನವಿ ಮಾಡಿದರು.

ಅಬ್ದುಲ್ ರಹಿಮಾನ್ ಮತ್ತು ವಯನಾಡು ಅಶ್ರಫ್‌ಕೊಲೆ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳ ಬಂಧನ ವಿಳಂಬ ಮತ್ತು ಅವರ ಕುಟುಂಬಕ್ಕೆ ಪರಿಹಾರ ಘೋಷಿಸದಿರುವ ಸರಕಾರದ ನಡೆಯನ್ನು ವಿರೋಧಿಸಿ ಶುಕ್ರವಾರ ಪ್ರತಿಭಟನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಅಬ್ದುಲ್ ರಹಿಮಾನ್ ಹತ್ಯೆಗೆ ಸಂಚು ನಡೆಸಿದವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಕೊಲೆಗೆ ಮುನ್ನ ಪ್ರಚೋದನೆ ನೀಡಿದ ಸಂಘ ಪರಿವಾರದ ಸಂಘಟನೆಯ ಭರತ್ ಕುಮ್ಡೇಲು ಮತ್ತು ,ಶ್ರೀಕಾಂತ್ ಶೆಟ್ಟಿ ಬಂಧನ ಇನ್ನೂ ಆಗಿಲ್ಲ. ಇಬ್ಬರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯಲ್ಲಿ ಕೋಮುದ್ವೇಷ ಇಲ್ಲ. ಆತನ ಕೊಲೆಗೆ ಕಾರಣವನ್ನು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಕೇಂದ್ರ ಸರಕಾರಕ್ಕೆ ಪ್ರಭಾವ ಬೀರಿ ಎನ್‌ಐಎಗೆ ಒಪ್ಪಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಆದರೆ ಅಬ್ದುಲ್ ರಹ್ಮಾನ್ ಮತ್ತು ಅಶ್ರಫ್ ಕೊಲೆ ಯಾವ ಕಾರಣಕ್ಕಾಗಿ ಆಗಿದೆ ಎನ್ನುವುದನ್ನು ಪೊಲೀಸರು ಈ ವರೆಗೊ ಬಹಿರಂಗಪಡಿಸಿಲ್ಲ. ಈ ಎರಡು ಪ್ರಕರಣಗಳನ್ನು ಎನ್‌ಐಎಗೆ ಕೊಡಲು ಸಾಧ್ಯವಿಲ್ಲದಿದ್ದರೆ , ವಿಶೇಷ ತನಿಖಾ ತಂಡಕ್ಕೆ ನೀಡಲಿ. ವಿಶೇಷ ತನಿಖಾ ತಂಡದ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಯಬಹುದು, ನ್ಯಾಯಸಿಗಬಹುದು ಎಂಬ ವಿಶ್ವಾಸ ನಮಗಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಎಸ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಉಪಾಧ್ಯಕ್ಷ ಮೂನಿಷ್ ಅಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News