×
Ad

ʼವಿಜಯೇಂದ್ರನ ಆತ್ಮೀಯ ಗೆಳೆಯ ಡಿಕೆಶಿ ಸಿಎಂ ಆಗಲ್ಲʼ : ಯತ್ನಾಳ್

"ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಆಗದೇ ಇದ್ದರೆ ಹೊಸ ಪಕ್ಷ"

Update: 2025-11-21 21:30 IST

ಬಸನಗೌಡ ಪಾಟೀಲ್ ಯತ್ನಾಳ್

ದಾವಣಗೆರೆ : ʼಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನ ಆತ್ಮೀಯ ಗೆಳೆಯ ಡಿ.ಕೆ.ಶಿವಕುಮಾರ್‌ ಸಿಎಂ ಆಗಲ್ಲʼ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಬದಲಾವಣೆ ಸಾಧ್ಯವಿಲ್ಲ. ಡಿಕೆಶಿ ಸಿಎಂ ಆಗುವುದಿಲ್ಲ. ಈ ಮಧ್ಯೆ ಖರ್ಗೆ ನನ್ನ ಹೆಸರು ಯಾರು ಹೇಳುತ್ತಿಲ್ಲ ಎಂದು ಯೋಚನೆ ಮಾಡುತ್ತಾ ಇದ್ದಾರೆ. ಸಿದ್ದರಾಮಯ್ಯ ಮುಂದುವರೆಯದಿದ್ದರೆ ಖರ್ಗೆ ಸಿಎಂ ಆಗುತ್ತಾರೆ ಎಂದು ನುಡಿದರು.

ಡಿ.ಕೆ.ಶಿವಕುಮಾರ್‌ ಬಿಜೆಪಿಗೆ ಬಂದು ಸಿಎಂ ಆಗಿ, ವಿಜಯೇಂದ್ರ ಡಿಸಿಎಂ ಆದರೆ ಕರ್ನಾಟಕ ಉಳಿಯಲ್ಲ. ಇವರನ್ನು ಕೇಳಿ ಉಸಿರಾಡಬೇಕಾಗುತ್ತದೆ. ಉಸಿರಾಡಲು ಕೂಡ ತೆರಿಗೆ ಕಟ್ಟಬೇಕಾಗುತ್ತದೆ. ಭ್ರಷ್ಟಾಚಾರದಿಂದ ಗುಡ್ಡ ಬೆಟ್ಟ ಉಳಿಯಲ್ಲ, ಈಗಾಗಲೇ ಕನಕಪುರ ಖಾಲಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಹಾರದಲ್ಲಿ ನಿತೀಶ್ ಕುಮಾರ್‌ ಅವರು ಒಳ್ಳೆಯ ನಾಯಕ ಅಗಿರುವುದರಿಂದ ಅಧಿಕಾರಕ್ಕೆ ಬಂದಿದ್ದಾರೆ. ಬಿಹಾರದಲ್ಲಿ ಗೆದ್ದಿದ್ದೇವೆ, ಕರ್ನಾಟಕದಲ್ಲಿ ಗೆಲ್ಲುತ್ತೇವೆ ಎಂದುಕೊಂಡಿದ್ದಾರೆ ಅದು ಆಗಲ್ಲ. ಭ್ರಷ್ಟ ಯಡಿಯೂರಪ್ಪ‌ ಕುಟುಂಬ ಇದ್ದರೆ, ಬಿಜೆಪಿ ಅಧಿಕಾರಕ್ಕೆ ಬರಲ್ಲ. ನಾನು ನಿತೀಶ್ ಕುಮಾರ್ ಆಗಲ್ಲ. ಯೋಗಿ ಆದಿತ್ಯನಾಥ್ ಆಗುತ್ತೇನೆ ಎಂದರು.

ಜೆಸಿಬಿ ಪಕ್ಷ ಕಟ್ಟುತ್ತೇನೆ : 

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಆಗದೇ ಇದ್ದರೆ, ಜೆಸಿಬಿ ಪಕ್ಷ ಕಟ್ಟುತ್ತೇನೆ. ಕರ್ನಾಟಕದಲ್ಲಿ ಹಿಂದುತ್ವದ ಅಲೆ ಎದ್ದಿದೆ. ನಿರೀಕ್ಷೆಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಜೆಸಿಬಿ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ. ಬಿಜೆಪಿಯಲ್ಲಿನ ನಿಷ್ಟಾವಂತರೆಲ್ಲರನ್ನೂ ನಮ್ಮ ಪಕ್ಷಕ್ಕೆ ಕರೆದುಕೊಂಡು ಬರುತ್ತೇನೆ ಎಂದರು.

ವಿಜಯೇಂದ್ರ ನಾಲ್ಕು ಜನ ಚೇಲಾಗಳನ್ನು ಇಟ್ಟುಕೊಂಡು ಸುತ್ತಾಡುತ್ತಾನೆ. ಆ ಚೇಲಾಗಳನ್ನೇ ಜಿಲ್ಲಾಧ್ಯಕ್ಷರನ್ನಾಗಿ ಮಾಡಿ ಜೈ ಜೈ ಎನ್ನಿಸಿಕೊಳ್ಳುತ್ತಾನೆ. ಕಾರಿನ ಢಿಕ್ಕಿಯಲ್ಲಿ ಶಾಲು ತೆಗೆದುಕೊಂಡು ಹೋಗಿ ಬೊಮ್ಮಾಯಿ ಬಳಿ ಸನ್ಮಾನ ಮಾಡಿಸಿಕೊಂಡಿದ್ದಾನೆ. ಬಳಿಕ ಬೊಮ್ಮಾಯಿ ಶಹಬ್ಬಾಶ್ ಎಂದರು ಎಂದು ಚೇಲಾಗಳಿಂದ ಹೇಳಿಕೆ ಕೊಡಿಸುತ್ತಾನೆ. ಇತ್ತ ಡಿಕೆಶಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ನಮ್ಮ ಫೈಲ್ ಮುಟ್ಟಬೇಡಿ, ಫೋಕ್ಸೋದಿಂದ ನಮ್ಮ ಅಪ್ಪನನ್ನು ಬಚಾವ್ ಮಾಡಿ ಎಂದು ಹೊಂದಾಣಿಕೆ ಮಾಡಿಕೊಂಡಿದ್ದಾನೆ. ಯಡಿಯೂರಪ್ಪನ ಗಾಡಿಗೆ ಪೆಟ್ರೋಲ್ ಹಾಕಿಸಿದ್ದು, ಸಿದ್ದೇಶ್ವರ್ ಕುಟುಂಬ. ಶಾಮನೂರು ಜೊತೆ ಹೊಂದಾಣಿಕೆ ಮಾಡಿಕೊಂಡು ಸೋಲಿಸಿದರು ಎಂದು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News