ಯೂಟ್ಯೂಬರ್ ಪ್ರೇಮ ವಿವಾಹ ಪ್ರಕರಣ | ʼನಮಗೆ ಜೀವ ಬೆದರಿಕೆ ಇದೆ, ರಕ್ಷಣೆ ಕೊಡಿʼ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದ ಗಾಯತ್ರಿ
ಧಾರವಾಡ : ಯೂಟ್ಯೂಬರ್ ಮುಕಳೆಪ್ಪ ಅಲಿಯಾಸ್ ಖ್ವಾಜಾ ಶಿರಹಟ್ಟಿಯನ್ನು ಪ್ರೇಮ ವಿವಾಹವಾಗಿ ಇದೀಗ ವಿವಾದಕ್ಕೆ ಕಾರಣವಾಗಿರುವ ಗಾಯತ್ರಿ ಜಾಲಿಹಾಳ ಧಾರವಾಡದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರ ಎದುರು ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ಧಾರವಾಡದ ಶಕ್ತಿ ಸದನ ಕೇಂದ್ರದಿಂದ ಪೊಲೀಸರು ಗಾಯತ್ರಿ ಅವರನ್ನು ಧಾರವಾಡ ಜೆಎಂಎಫ್ಸಿ ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ ಎದುರು ಹಾಜರುಪಡಿಸಿದರು.
ಈ ವೇಳೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿರುವ ಗಾಯತ್ರಿ, "ನಾನು ಸ್ವ ಇಚ್ಛೆಯಿಂದ ಖ್ವಾಜಾನನ್ನು ಮದುವೆಯಾಗಿದ್ದೇನೆ. ನನ್ನ ಪತಿ ಯಾರಿಗೂ ಜೀವ ಬೆದರಿಕೆ ಹಾಕಿಲ್ಲ. ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಮದುವೆ ನಂತರವೂ ನಾನು ಹಾಗೂ ನನ್ನ ಪತಿ ನಮ್ಮ ತಂದೆ, ತಾಯಿ ಜೊತೆ ಅನ್ಯೋನ್ಯವಾಗಿಯೇ ಇದ್ದೆವು. ನನ್ನ ತವರು ಮನೆಯವರಿಗೆ ಮದುವೆ ನಂತರವೂ ದುಡ್ಡು ಹಾಕಿದ್ದೇನೆ. ನನ್ನ ಪತಿ ಮತ್ತು ನನಗೆ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆ ಕೊಡಿ" ಎಂದು ನ್ಯಾಯಾಧೀಶರೆದುರು ಗಾಯತ್ರಿ ಹೇಳಿಕೆ ನೀಡಿದ್ದಾರೆ.
ಯೂಟ್ಯೂಬರ್ ಮುಕಳೆಪ್ಪ ಅಲಿಯಾಸ್ ಖ್ವಾಜಾ ಎಂಬಾತ ತನ್ನ ಪುತ್ರಿ ಗಾಯತ್ರಿಯನ್ನು ಲವ್ ಜಿಹಾದ್ಗೆ ಒಳಗಾಗಿಸಿ ಮದುವೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಯುವತಿಯ ತಾಯಿ ಶಿವಕ್ಕಾ ಜಾಲಿಹಾಳ ಇತ್ತೀಚಿಗೆ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.